ಆರ್ಎಸ್ಎಸ್ ಆಸ್ಪತ್ರೆ ಬರೀ ಹಿಂದೂಗಳಿಗೆಯೇ: ಗಡ್ಕರಿ ಬಳಿ ಪ್ರಶ್ನಿಸಿದ್ದ ರತನ್ ಟಾಟಾ
ಪುಣೆ, ಏಪ್ರಿಲ್ 15: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ ಎಂದು ಕೈಗಾರಿಕೋದ್ಯಮಿ ರತನ್ ಟಾಟಾಗೆ ಒಮ್ಮೆ ಹೇಳಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿಕೊಂಡಿದ್ದಾರೆ.
ಪುಣೆಯಲ್ಲಿ ಆಸ್ಪತ್ರೆಯೊಂದನ್ನು ಉದ್ಘಾಟಿಸಿದ ಗಡ್ಕರಿ, ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ರತನ್ ಟಾಟಾ ಅವರನ್ನು ಆಸ್ಪತ್ರೆಯ ಉದ್ಘಾಟನೆಗೆ ಕರೆತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು ಎಂದು ಉಲ್ಲೇಖಿಸಿದ್ದಾರೆ.
'ಅಲ್ಖೈದಾ ಮುಖ್ಯಸ್ಥನ ವಿಡಿಯೋ ಬಿಜೆಪಿಯವರೇ ಏಕೆ ಮಾಡಿರಬಾರದು?'
"ಉದ್ಘಾಟನೆಯ ವೇಳೆ ರತನ್ ಟಾಟಾ ಅವರು ಈ ಆಸ್ಪತ್ರೆ ಕೇವಲ ಹಿಂದೂ ಸಮುದಾಯಕ್ಕೆ ಮಾತ್ರವೇ ಎಂದು ನನ್ನಲ್ಲಿ ಪ್ರಶ್ನೆ ಮಾಡಿದರು. ಅದಕ್ಕೆ ನಾನು ಅವರಿಗೆ ಯಾಕೆ ಹಾಗೆ ಅನ್ನಿಸುತ್ತಿದೆ ಎಂದು ಪ್ರಶ್ನೆ ಮಾಡಿದ್ದೆ," ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಆರ್ಎಸ್ಎಸ್ ಆಸ್ಪತ್ರೆ ಎಂದಿದ್ದ ರತನ್ ಟಾಟಾ
"ನಿಮಗೆ ಯಾಕೆ ಹೀಗೆ ಅನಿಸುತ್ತಿದೆ ಎಂದು ನಾನು ರತನ್ ಟಾಟಾ ಅವರನ್ನು ಕೇಳಿದ್ದೆ. ಆಗ ಅವರು (ರತನ್ ಟಾಟಾ) ಇದು ಆರ್ಎಸ್ಎಸ್ ಆಸ್ಪತ್ರೆ ಎಂದು ಉತ್ತರಿಸಿದರು. ಸಮುದಾಯ ಮತ್ತು ಆರ್ಎಸ್ಎಸ್ನಲ್ಲಿ ಅಂತಹದ್ದೇನೂ ಇಲ್ಲ. ಆರ್ಎಸ್ಎಸ್ ಎಂದಿಗೂ ತಾರತಮ್ಯ ಮಾಡಿಕೊಂಡಿಲ್ಲ," ಎಂದು ತಿಳಿಸಿದ್ದಾರೆ.
ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯವನ್ನು ಸುಧಾರಿಸಲು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. "ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಗತ್ಯವಿರುವಷ್ಟು ಸೌಲಭ್ಯಗಳು ಲಭ್ಯವಿಲ್ಲ. ನಗರ ಪ್ರದೇಶದಲ್ಲಿ ಸೌಲಭ್ಯಗಳಿದ್ದರೆ, ಗ್ರಾಮೀಣ ಪ್ರದೇಶದ ಪರಿಸ್ಥಿತಿ ಉತ್ತಮವಾಗಿಲ್ಲ, ವಿಶೇಷವಾಗಿ ಶಿಕ್ಷಣದ ಪರಿಸ್ಥಿತಿ ಉತ್ತಮವಾಗಿಲ್ಲ. ಆದರೆ ಸೌಲಭ್ಯಗಳು ಸುಧಾರಿಸುತ್ತಿವೆ," ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲೇ ನಾನು ಶೇಕಡಾ 10 ರಷ್ಟು ರಾಜಕೀಯ ಮತ್ತು ಶೇಕಡಾ 90 ರಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇನೆ ಎಂದು ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.