ಏಕರೂಪ ನಾಗರಿಕ ಸಂಹಿತೆ ಕಾನೂನಿಗೆ ರಾಜ್ ಠಾಕ್ರೆ ಆಗ್ರಹ
ಪುಣೆ ಮೇ 22: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಹಾಗೂ ಜನಸಂಖ್ಯಾ ನಿಯಂತ್ರಣ ಕಾನೂನು ಶೀಘ್ರವೇ ಜಾರಿಗೆ ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಆಗ್ರಹಿಸಿದರು.
ಪುಣೆಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "ಮಹಾರಾಷ್ಟ್ರದ ಔರಂಗಾಬಾದ್ ಹೆಸರನ್ನು ಸಾಂಭಾಜಿ ನಗರ ಎಂದು ಕೂಡಲೇ ಬದಲಾವಣೆ ಮಾಡಬೇಕು. ಒಮ್ಮೆ ನಗರದ ಹೆಸರನ್ನು ಬದಲಾಯಿಸಿದರೆ ಇದರ ಸುತ್ತ ಇರುವ ವಿವಾದಗಳು ಅಂತ್ಯವಾಗಲಿವೆ'' ಎಂದು ಒತ್ತಾಯಿಸಿದರು.
ಪೆಟ್ರೋಲ್-ಡೀಸೆಲ್ ದರ ಇಳಿಕೆ: ನಮಗೆ ಜನರೇ ಮೊದಲು ಎಂದು ಮೋದಿ ಟ್ವೀಟ್
"ಏಕರೂಪ ನಾಗರಿಕ ಸಂಹಿತೆ ಹಾಗೂ ಜನಸಂಖ್ಯಾ ನಿಯಂತ್ರಣ ಕಾನೂನು ಶೀಘ್ರ ಜಾರಿಯಾದರೆ ದೇಶಕ್ಕೇ ಒಳಿತಾಗಲಿದೆ'' ಎಂದು ಅಭಿಪ್ರಾಯಪಟ್ಟರು.
ವಿವಾದದ ಸುಳಿಗೆ ಸಿಲುಕಿಸುವ ಪ್ರಯತ್ನ; ಜೂನ್ 5 ರಂದು ಆಯೋಧ್ಯೆಗೆ ಭೇಟಿ ನೀಡಲು ರಾಜ್ ಠಾಕ್ರೆ ನಿರ್ಧರಿಸಿದ್ದರು. ಆದರೆ ಸೊಂಟದ ಮೂಳೆಯ ಶಸ್ತ್ರಚಿಕಿತ್ಸೆಯ ಕಾರಣದಿಂದ ಆಯೋಧ್ಯೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಕೆಲವು ದಿನಗಳ ಹಿಂದೆ ಅವರು ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ ಠಾಕ್ರೆ, "ಎರಡು ದಿನಗಳ ಹಿಂದೆ ಆಯೋಧ್ಯೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಮುಂದೂಡಿರುವ ಬಗ್ಗೆ ನಾನು ಟ್ವೀಟ್ ಮಾಡಿದ್ದೆ. ವಿರೋಧಿಗಳು ನೀಡುವ ಪ್ರತಿಕ್ರಿಯೆಯನ್ನು ಗಮನಿಸಲೆಂದೇ ನಾನು ಈ ಮಾಹಿತಿ ನೀಡಿದ್ದೆ. ನಾನು ಆಯೋಧ್ಯೆಗೆ ಹೋಗುವುದನ್ನು ವಿರೋಧಿಸುವವರು ನನನ್ನು ವಿವಾದದ ಸುಳಿಗೆ ಸಿಲುಕಿಸಲು ಪ್ರಯತ್ನಸುತ್ತಿದ್ದಾರೆ. ಆದರೆ ವಿವಾದಗಳಿಗೆ ತುತ್ತಾಗಬಾರದು ಎಂದು ನಾನು ತೀರ್ಮಾನಿಸಿದ್ದೇನೆ'' ಎಂದು ಹೇಳಿದರು.
ಉದ್ಧವ್ ಠಾಕ್ರೆ ಅವರ ನಿವಾಸವೇನು ಮಸಿದಿಯೇ?; "ಮಸೀದಿಗಳಲ್ಲಿ ಅಜಾನ್ ಕೂಗುವ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಿ ಹನುಮಾನ್ ಚಾಲೀಸಾ ಪಠಿಸುವಂತೆ ನಾನು ನಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದೆ. ಆದರೆ ತೆಲಂಗಾಣದ ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ ಮತ್ತು ಆಕೆಯ ಪತಿ ಹೈದರಾಬಾದ್ ಶಾಸಕ ರವಿ ರಾಣಾ ದಂಪತಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಂಬೈನ ಮಾತೋಶ್ರಿ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಿಸಿದರು. ಉದ್ಧವ್ ಠಾಕ್ರೆ ಅವರ ನಿವಾಸವೇನು ಮಸಿದಿಯೇ ?'' ಎಂದು ಪ್ರಶ್ನಿಸಿದರು.
ಹಿಂದುತ್ವದ ಕುರಿತು ಉದ್ಧವ್ ಠಾಕ್ರೆ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಜ್ ಠಾಕ್ರೆ, "ಯಾವ ಹಿಂದುತ್ವದ ಬಗ್ಗೆ ಉದ್ಧವ್ ಠಾಕ್ರೆ ಮಾತನಾಡುತ್ತಿರುವುದು?. ಸಾಂಭಾಜಿ ನಗರ ಹೆಸರು ಮರುನಾಮಕರಣ ವಿಷಯದಲ್ಲಿ ಯಾವ ತರ್ಕದ ಆಧಾರದಲ್ಲಿ ಅವರು ಹೀಗೆ ಹೇಳುತ್ತಿದ್ದಾರೆ? ಅವರೇನು ಮಹಾತ್ಮ ಗಾಂಧಿ ಅಥವಾ ವಲ್ಲಭಬಾಯಿ ಪಟೇಲರೇ?" ಎಂದು ಕೇಳಿದರು.
"ಸಾಂಭಾಜಿ ನಗರ ಎಂದು ಹೆಸರು ಮರುನಾಮಕರಣ ಮಾಡುವ ಅಗತ್ಯವಿಲ್ಲ" ಎಂದು ಉದ್ಧವ್ ಠಾಕ್ರೆ ಹೇಳಿದ್ದರು. "ನಿಜವಾದ ಹಿಂದುತ್ವದ ಬಗ್ಗೆ ಮಾತನಾಡುವಾಗ ನೀವೇನಾದರೂ ಬಟ್ಟೆ ತೊಳೆಯುವ ಪೌಡರ್ ಮಾರುತ್ತಿರುವರೆ?. ನಿಜವಾದ ಹಿಂದುತ್ವದ ಜನರಿಗೆ ಫಲಿತಾಂಶ ಬೇಕಾಗಿದೆ. ಹಾಗಾಗಿ ನಾವು ಮರಾಠಿ ಜನರಿಗೆ ನಿಜವಾದ ಫಲಿತಾಂಶವನ್ನು ನೀಡಲಿದ್ದೇವೆ'' ಎಂದು ರಾಜ್ ಠಾಕ್ರೆ ಪ್ರತಿಪಾದಿಸಿದರು.
ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಹಾಗೂ ಆಯೋಧ್ಯೆಗೆ ಭೇಟಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ರಾಜ್ ಠಾಕ್ರೆ ವಿವಾದಕ್ಕೆ ಒಳಗಾಗಿದ್ದರು.