ಪವಾಡ: ಭೂ ಕುಸಿದರೂ ಬಚಾವಾದ ತಾಯಿ-ಮಗು!
ಪುಣೆ, ಆ.1 : ಅಚ್ಚರಿಯಾದರೂ ಇದು ನಿಜ. ಆಯುಷ್ಯ ಗಟ್ಟಿ ಇದ್ದರೆ ಪ್ರಪಾತಕ್ಕೆ ಕುಸಿದರೂ ಜೀವಂತ ಎದ್ದು ಬಂದ ದಂತ ಕಥೆಗಳು ನಮ್ಮ ನಾಡಲ್ಲಿ ಕಡಿಮೆ ಏನಿಲ್ಲ. ಪುಣೆಯ ಭೂ ಕುಸಿತದ ಅವಶೇಷಗಳಡಿ ಸಿಲುಕಿದ್ದ ಮಗು ಹಾಗೂ ತಾಯಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿರುವ ಘಟನೆ ನಡೆದಿದೆ.
ಪುಣೆಯ ಹಳ್ಳಿಯೊಂದರಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದ ಭೀಕರ ದುರಂತದಲ್ಲಿ ಅವಶೇಷಗಳಡಿ ಸಿಲುಕಿದ್ದ ಕೇವಲ ಮೂರು ತಿಂಗಳ ಮಗುವೊಂದು ಘಟನೆ ಸಂಭವಿಸಿದ ಹಲವು ಗಂಟೆಗಳ ಬಳಿಕ ಸುರಕ್ಷಿತವಾಗಿ ಬದುಕಿ ಬಂದಿರುವ ಪವಾಡ ಸದೃಶ ಘಟನೆ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ತಾಯಿ ಪ್ರಮೀಳಾ ಲಿಂಬೆ, 3 ತಿಂಗಳ ಮಗು ರುದ್ರ. ಇವರಿಬ್ಬರೂ ಅವಶೇಷಗಳಡಿ ಸಿಲುಕಿದ್ದರು. ಮಗು ರುದ್ರ ತನ್ನ ತಾಯಿ ಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಅಳುತ್ತಿದ್ದ. ತಾಯಿ ಮಾತ್ರ ಮಿಸುಕಾಡುವಂತಿರಲಿಲ್ಲ. ಅಚ್ಚರಿ ಎಂಬಂತೆ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿಯೊಬ್ಬರು ಕುಸಿದ ಮಣ್ಣಿನಡಿ ಸಿಲುಕಿದ್ದ ಮಗುವಿನ ಅಳುವನ್ನು ಆಲಿಸಿದರು.[ಚಿತ್ರಗಳಲ್ಲಿ ಕರಾವಳಿಯಲ್ಲಿ ಮಳೆಯ ಅಬ್ಬರ]
ತಕ್ಷಣ ರಕ್ಷಣಾ ಕಾರ್ಯಾಚರಣೆ ತಂಡದ ಇತರೆ ಸದಸ್ಯರೊಂದಿಗೆ ಅತ್ಯಂತ ಸೂಕ್ಷ್ಮವಾಗಿ ಮಣ್ಣನ್ನು ತೆರವುಗೊಳಿಸಲಾರಂಭಿಸಿದರು. ತಾಯಿ ಮಣ್ಣಿನಡಿ ಅಂಗಾತ ಮಲಗಿದ್ದರೆ, ಮಗು ಆಕೆಯ ಮೇಲೆ ಮಲಗಿತ್ತು. ಕೊನೆಗೂ ಎನ್ಡಿಆರ್ಎಫ್ ಸಿಬ್ಬಂದಿ ತಾಯಿ-ಮಗುವನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದರು.
ಇನ್ನೂ ಕೂಡ ಆ ಆಘಾತದಿಂದ ಹೊರ ಬಂದಿಲ್ಲ
ಬುಧವಾರ ಬೆಳಗ್ಗೆ ಮಣ್ಣಿನಡಿ ಸಿಕ್ಕಿ ಬಿದ್ದ ತಾಯಿ -ಮಗು ಹೊರ ಪ್ರಪಂಚ ಕಂಡದ್ದು ಮತ್ತೆ ಸಂಜೆಗೆ, ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಮಗುವೂ ಸುರಕ್ಷಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದುರಂತದಿಂದ ಬಚಾವಾದ ತಾಯಿ ಹೇಳಿದ ಕಥೆ
ಗುಡ್ಡ ಕುಸಿದುಬಿದ್ದಾಗ ನಾವಿಬ್ಬರೂ ಕೆಸರಿನಡಿ ಸಿಲುಕಿದ್ದೆವು ಮತ್ತೆ ಏನಾಗುತ್ತಿದೆ ಎಂಬುದು ತಿಳಿಯಲಿಲ್ಲ. ಮಗುವನ್ನು ಮಾತ್ರ ಬಿಗಿಯಾಗಿ ಹಿಡಿದುಕೊಂಡಿದ್ದೆ ಎನ್ನುತ್ತಾಳೆ ತಾಯಿ ಪ್ರಮೀಳಾ ಲಿಂಬೆ. ಮನೆಯಲ್ಲಿ ಪಾತ್ರೆ ಇಡುವ ಕಬ್ಬಿಣದ ಸ್ಟ್ಯಾಂಡ್ ಒಂದನ್ನು ಹಿಡಿದುಕೊಂಡಿದ್ದೆ. ಮಣ್ಣು ಕುಸಿದಾಗ ಅದನ್ನು ಬಿಟ್ಟಿರಲಿಲ್ಲ. ಹಾಗಾಗಿ ಸ್ಟ್ಯಾಂಡ್ ನಮ್ಮ ಮೇಲೆ ಬಿದ್ದದ್ದರಿಂದ ಉಸಿರಾಡಲು ಸಾಧ್ಯವಾಯಿತು ಎಂದಿದ್ದಾರೆ.
ಭೂ ಕುಸಿತ :ಸಾವಿನ ಸಂಖ್ಯೆ 51ಕ್ಕೆ ಏರಿಕೆ
ಪುಣೆಯ ಅಂಬೆಗಾಂತ ಜಿಲ್ಲೆಯ ಮಾಳಿನ್ಗ್ರಾಮದಲ್ಲಿ ಬುಧವಾರ ಸಂಭವಿಸಿದ ಗುಡ್ಡ ಕುಸಿತ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 51ಕ್ಕೇರಿದ್ದು, 22 ಮಂದಿ ಮಹಿಳೆಯರು, 23 ಮಂದಿ ಪುರುಷರು ಹಾಗೂ 6 ಜನ ಮಕ್ಕಳು ಸೇರಿದ್ದಾರೆ
ರಕ್ಷಣಾ ಕಾರ್ಯ ಭರದಿಂದ ಸಾಗಿದೆ
ಇದುವರೆಗೆ ಅವಶೇಷಗಳಡಿಯಿಂದ 8 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 110ಕ್ಕೂ ಹೆಚ್ಚು ಕೆಸರಿನಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ರಕ್ಷಣಾ ತಂಡದ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಗೃಹ ಸಚಿವರ ಭೇಟಿ
ಪುಣೆಯ ಮಾಳೀನ್ ಗ್ರಾಮದಲ್ಲಿ ಭೂ ಕುಸಿತ ಉಂಟಾದ ಸ್ಥಳಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ನೀಡಿದ್ದರು.
ಎಡೆಬಿಡದೆ ಸುರಿಯುತ್ತಿರುವ ಮಳೆ
ಎಡೆಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯ ವಿಳಂಬವಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಳೀನ್ ಗ್ರಾಮದಲ್ಲಿ ನೀರವ ಮೌನ
ಮಾಳೀನ್ ಗ್ರಾಮದಲ್ಲಿ ಸುಮಾರು 44 ಮನೆಗಳು ನೆಲಸಮಗೊಂಡಿದ್ದು, ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ
ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಮಹಾರಾಷ್ಟ್ರ ಸರ್ಕಾರ ಭರಿಸುತ್ತಿದೆ.
ಕೇಂದ್ರ ಗೃಹ ಸಚಿವರ ಭೇಟಿ ರದ್ದು
ಭಾರಿ ಮಳೆಯ ಕಾರಣ ಹೆಚ್ಚಿನ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್ ನೀಡಬೇಕಾಗಿದ್ದ ಭೇಟಿಯನ್ನು ರದ್ದುಪಡಿಸಲಾಯಿತು. ಭಾರಿ ಮಳೆಯಿಂದಾಗಿ ಸ್ಥಳಕ್ಕೆ ತಲುಪಲು ಕಷ್ಟಸಾಧ್ಯ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ.
ಪೃಥ್ವಿರಾಜ್ ಜನತೆಯಲ್ಲಿ ಮನವಿ
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ವೀಕ್ಷಿಸಿದರು. ಸರ್ಕಾರ ನಿಮ್ಮ ಜೊತೆಯಲ್ಲಿದ್ದು, ಯಾವುದೇ ಕಾರಣಕ್ಕೂ ಭಯಭೀತರಾಗಬಾರದೆಂದು ಜನತೆಯಲ್ಲಿ ಮನವಿ ಮಾಡಿದರು.
2 ಲಕ್ಷ ಪರಿಹಾರ ಘೋಷಿಸಿದ್ದಾರೆ
ಮೃತಪಟ್ಟ ಪ್ರತಿ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ರಕ್ಷಣಾ ಕಾರ್ಯ ಇನ್ನಷ್ಟು ವಿಳಂಬ
ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಕಳೆದ ಒಂದು ವಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ರಕ್ಷಣಾ ಕಾರ್ಯ ಇನ್ನಷ್ಟು ವಿಳಂಬವಾಗಿದೆ. ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ, ಇನ್ನು ಕೆಲವು ಮೃತ ದೇಹಗಳು ಪತ್ತೆಯಾಗಬೇಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುಡ್ಡಕುಸಿತದಲ್ಲಿ ಭೂಸಮಾಧಿ
ಮಹಾ ಮಳೆಯಿಂದಾಗಿ ಮಾಳೀನ್ ಗ್ರಾಮದಲ್ಲಿ ಬುಧವಾರ ಸಂಭವಿಸಿದ ಗುಡ್ಡಕುಸಿತದಲ್ಲಿ ಭೂಸಮಾಧಿಯಾಗಿದ್ದ ಮನೆಗಳಿಂದ ಮತ್ತೆ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ.