ಮಕ್ಕಳ ದಿನಾಚರಣೆಯಂದು ಕೈದಿಗಳಿಗೆ ವಿಶೇಷ ಉಡುಗೊರೆ ಕೊಟ್ಟ ಜೈಲು ಸಿಬ್ಬಂದಿ
ನಾಗಪುರ, ನವೆಂಬರ್ 14: ಹೊರ ಜಗತ್ತಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ಪರಿತಪಿಸುವ ಬದುಕು ಜೈಲಿನಲ್ಲಿರುವ ಕೈದಿಗಳದ್ದು. ಮಾಡಿದ ಅಪರಾಧಕ್ಕೆ ಶಿಕ್ಷೆ ಅನುಭವಿಸುತ್ತಿರುವ ಅವರಲ್ಲಿ ಹೆಚ್ಚಿನವರಲ್ಲಿ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ತಪ್ಪನ್ನು ತಿದ್ದಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಿದ ಅನೇಕ ಕೈದಿಗಳ ನಿದರ್ಶನ ನಮ್ಮೆದುರಿಗೆ ಇದೆ.
ಹಾಗೆಯೇ ದ್ವೇಷ, ಕೋಪಗಳಿಂದ ಕೂಡಿದ ಅನೇಕರು ಜೈಲಿಗೆ ಹೋಗಿ ಬಂದ ಬಳಿಕವೂ ಮನಪರಿವರ್ತನೆಗೆ ಒಳಗಾಗುವುದಿಲ್ಲ. ಅವರು ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸುತ್ತಾರೆ.
ಮಕ್ಕಳ ದಿನಾಚರಣೆ ವಿಶೇಷ: ಯೋಗ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಮೈಸೂರಿನ ಪೋರಿ
ಆದರೆ, ಇವರಿಗೆಲ್ಲರಿಗೂ ಒಂದು ಕೌಟುಂಬಿಕ ಬದುಕಿನ ಹಿನ್ನೆಲೆ ಇರುತ್ತದೆ. ಕೆಲವರು ಮಡದಿ ಮಕ್ಕಳನ್ನು ಹೊಂದಿರುತ್ತಾರೆ. ಅವರೆಲ್ಲರಿಂದ ದೂರವಾಗಿ ಜೈಲಿನಲ್ಲಿ ದಿನ ಕಳೆಯುವುದು ಬಲು ಸಂಕಟದ ಸಂಗತಿ. ಮಹಿಳಾ ಕೈದಿಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿರುತ್ತದೆ.
ತಂದೆ-ತಾಯಿ, ಹೆಂಡತಿ ಅಥವಾ ಇತರೆ ಸಂಬಂಧಿಕರು ಕೈದಿಗಳನ್ನು ನೋಡಲು ಬರುವುದು ಸಾಮಾನ್ಯ. ಬಂದರೂ ಅವರನ್ನು ಕಂಬಿಗಳ ಹಿಂದೆಯೇ ನೋಡಬೇಕು. ಅವರನ್ನು ಮುಟ್ಟಲು, ಅವರೊಂದಿಗೆ ಆತ್ಮೀಯವಾಗಿ ಮಾತನಾಡಲು ಅವಕಾಶವಿಲ್ಲ. ಮಕ್ಕಳ ಜತೆ ಹೆಚ್ಚು ಬಾಂಧವ್ಯ ಹೊಂದಿರುವ ಜನರಿಗೆ ಅವರನ್ನು ನೋಡದೆ ಬದುಕು ಭಾರವಾಗಿರುತ್ತದೆ.
ವಾರಣಾಸಿ ಜೈಲಿಂದ ಬಿಡುಗಡೆಗೊಂಡು ಭಗವದ್ಗೀತೆ ಕೊಂಡೊಯ್ದ ಪಾಕ್ ಕೈದಿ!
ಹೀಗಾಗಿ ಮಹಾರಾಷ್ಟ್ರದ ನಾಗಪುರದಲ್ಲಿನ ಕೇಂದ್ರ ಕಾರಾಗೃಹ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಹೊಸತೊಂದು ಕಾರ್ಯಕ್ರಮವನ್ನು ರೂಪಿಸಿತ್ತು.
ಮಕ್ಕಳ ದಿನಾಚರಣೆಯ ಬುಧವಾರ ಕೈದಿಗಳಿಗೆ ತಮ್ಮ ಮಕ್ಕಳ ಜತೆ ಬೆರೆಯುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿತ್ತು. ಮಕ್ಕಳನ್ನು ಕಂಡ ಕೈದಿಗಳಲ್ಲಿ ಉಂಟಾದ ಆನಂದ ಅಷ್ಟಿಷ್ಟಲ್ಲ. ಅವರನ್ನು ಅಪ್ಪಿಕೊಂಡು, ಮೈದಡವಿ ಮುದ್ದಿಸಿದರು. ಅವರಿಂದ ದೂರವಾಗುವಂತೆ ಮಾಡಿಕೊಂಡ ತಪ್ಪಿಗೆ ಪ್ರಾಯಶ್ಚಿತವೆಂಬಂತೆ ಬಿಕ್ಕಿಬಿಕ್ಕಿ ಅತ್ತರು.
Maharashtra: Inmates of Nagpur Central Jail today meet their children on the occasion of Children's Day. Rani Bhosale, SP (Nagpur Central Jail) says, "Usually when inmates meet their family members they are behind the barriers but on this day no barriers have been put in place." pic.twitter.com/PQ6dx7EtP5
— ANI (@ANI) 14 November 2018
ವರ್ಷಗಟ್ಟಲೆ ನೋಡಲು ಸಾಧ್ಯವಾಗದ ಮಕ್ಕಳನ್ನು ಕಂಡು ಅವರಲ್ಲಿ ನೋವು ಮತ್ತು ಸಂತಸ ಎರಡೂ ತುಂಬಿ ಬಂದಿತ್ತು. ಮಕ್ಕಳೂ ತಂದೆ/ತಾಯಿಯನ್ನು ಕಂಡು ಬಿಕ್ಕಿದರು.
'ಸಾಮಾನ್ಯವಾಗಿ ಕೈದಿಗಳು ತಮ್ಮ ಕುಟುಂಬದವರನ್ನು ಭೇಟಿ ಮಾಡಿದಾಗ ಅವರು ಜೈಲಿನ ಕಂಬಿಗಳ ಹಿಂದೆ ಇರುತ್ತಾರೆ. ಆದರೆ, ಇಲ್ಲಿ ಯಾವ ತಡೆಯೂ ಇರಲಿಲ್ಲ' ಎಂದು ನಾಗಪುರ ಕೇಂದ್ರ ಕಾರಾಗೃಹದ ಎಸ್ಪಿ ರಾಣಿ ಭೋಸಲೆ ಹೇಳಿದ್ದಾರೆ.
ಉ.ಪ್ರದೇಶ: ಸ್ವ-ಇಚ್ಛೆಯಿಂದ ಜೈಲು ಸೇರುತ್ತಿರುವ ಜನ, ಕಾರಣ ವಿಚಿತ್ರವಾಗಿದೆ
ಮಹಾರಾಷ್ಟ್ರದ ಯರವಾಡ ಜೈಲಿನಲ್ಲಿ ಮಕ್ಕಳು ಮತ್ತು ಕೈದಿಗಳಿಗೆ ಕೆಲ ಕಾಲ ಒಟ್ಟಿಗೆ ದಿನ ಕಳೆಯಲು ಅವಕಾಶ ನೀಡುವ 'ಗಾಲಾಭೇಟ್' ಎಂಬ ಕಾರ್ಯಕ್ರಮವನ್ನು ಆಗಾಗ ನಡೆಸಲಾಗುತ್ತಿದೆ.