ಈ ತಿಂಗಳು ಮಳೆ ಹೇಗಿರಲಿದೆ?: ಹವಾಮಾನ ಇಲಾಖೆ ಮಾಹಿತಿ
ಪುಣೆ, ಸೆಪ್ಟೆಂಬರ್ 8: ಅಲ್ಪಕಾಲದ ವಿರಾಮದ ಬಳಿಕ ದೇಶದ ಪ್ರಮುಖ ಭಾಗಗಳಲ್ಲಿ ನೈಋತ್ಯ ಮುಂಗಾರು ಸೆ. 17ರ ವೇಳೆಗೆ ಚುರುಕಾಗಲಿದೆ. ಆದರೆ ಇದೇ ಸಮಯಕ್ಕೆ ಪ್ರಸಕ್ತ ಸಾಲಿನ ಮುಂಗಾರು ದೇಶದ ತೀರಾ ವಾಯವ್ಯ ಭಾಗಗಳಿಂದ ಕುಂಠಿತಗೊಳ್ಳುವುದು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Recommended Video
ದೇಶದಲ್ಲಿನ ಮುಂಗಾರು ಪ್ರಗತಿ ಹಾಗೂ ಕಳೆದ ಕೆಲವು ವಾರಗಳಲ್ಲಿನ ಮಳೆಯ ವಿವರಗಳನ್ನು ಐಎಂಡಿಯ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ. ಎರಡನೆಯ ವಾರದ ವೇಳೆಗೆ ಮಳೆಯು ಕೇಂದ್ರ ಹಾಗೂ ಪಶ್ಚಿಮ ಭಾಗಗಳಲ್ಲಿ ಕಡಿಮೆಯಾಗಲಿದೆ. ಆದರೆ ಸೆ. 17ರ ಸುಮಾರಿಗೆ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಸನ್ನಿವೇಶ ಸೃಷ್ಟಿಯಾಗುವ ಸಂಭವ ಇರುವುದರಿಂದ ಕೇಂದ್ರ ಭಾರತದ ಪ್ರದೇಶಗಳಲ್ಲಿ ಮಳೆ ಮತ್ತೆ ಚುರುಕುಗೊಳ್ಳಲಿದೆ. ಹೀಗಾಗಿ ಸೆಪ್ಟೆಂಬರ್ ಅವಧಿಯಲ್ಲಿ ಬರುವ ವಾಡಿಕೆಯ ಮಳೆಯ ಪ್ರಮಾಣವನ್ನು ತಲುಪುತ್ತದೆ.
ಕೊಡಗು ಜಿಲ್ಲೆಯ ಮಳೆ ವಿವರ, ಜನವರಿಯಿಂದ ಸೆಪ್ಟೆಂಬರ್ ತನಕ
ಈ ವಾರದಲ್ಲಿ ಮುಂಗಾರು ದಕ್ಷಿಣದ ದ್ವೀಪ ಪ್ರದೇಶಗಳು, ಮಹಾರಾಷ್ಟ್ರ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ಚೆನ್ನಾಗಿ ಸುರಿಯಲಿದೆ. ಸಮಭಾಜಕ ಪೆಸಿಫಿಕ್ ಸಮುದ್ರ ಪ್ರದೇಶದ ಭಾಗದ ಸಮುದ್ರ ಮೇಲ್ಮೈ ಉಷ್ಣಾಂಶಗಳು (ಎಸ್ಎಸ್ಟಿ) ತಂಪಾಗಿರುವುದು ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ.
ಉಳಿದರ್ಧ ಅವಧಿ ಮಳೆ
ಎಸ್ಎಸ್ಟಿ ಇನ್ನೂ ತಂಪಾಗಿ ಮುಂದುವರಿಯಲಿದೆ. ಇದರಿಂದ ದುರ್ಬಲ ಲಾ ನಿನಾ ಸೃಷ್ಟಿಯಾಗುವ ನಿರೀಕ್ಷೆ ಇದೆ. ಇದರಿಂದಾಗಿ ಈ ತಿಂಗಳ ಕೊನೆಯ ಅರ್ಧಭಾಗ ಮುಂಗಾರು ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಸೆಪ್ಟೆಂಬರ್ ತಿಂಗಳ ವಾಡಿಕೆ ಮಳೆಯ ಮಟ್ಟವನ್ನು ತಲುಪಲಿದೆ ಎಂದು ಮೊಹಾಪಾತ್ರಾ ವಿವರಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಮಳೆ ಕೊರತೆ
ಮುಂಗಾರು ಅವಧಿ ಅಂತ್ಯಗೊಳ್ಳುವ ದಿನಾಂಕವನ್ನು ಹವಾಮಾನ ಇಲಾಖೆ ಪರಿಷ್ಕರಿಸಿದೆ. ಹೊಸ ದಿನಾಂಕದ ಪ್ರಕಾರ ಸೆ. 1ರ ಬದಲು, ಸೆ. 17ರಿಂದ ಪಶ್ಚಿಮ ರಾಜಸ್ಥಾನದ ಭಾಗದಿಂದ ಮುಂಗಾರು ಅವಧಿ ಅಂತ್ಯ ಆರಂಭವಾಗಲಿದೆ. ಆಗಸ್ಟ್ ತಿಂಗಳಲ್ಲಿ 27 ಕಡಿಮೆ ಒತ್ತಡದ ದಿನಗಳಿದ್ದು, ಶೇ 27ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಸೆಪ್ಟೆಂಬರ್ ಆರಂಭದಲ್ಲಿ ಮಳೆ ಕೊರತೆ ಉಂಟಾಗಿದೆ.
ಕೊಡಗಿನ ಮಳೆ ಹಾನಿ ವೀಕ್ಷಣೆಗೆ ಕೇಂದ್ರ ತಂಡ ಆಗಮನ
ಐಬಿಎಫ್ ಸೇವೆಗೆ ಮತ್ತಷ್ಟು ಬಲ
ಈ ಅವಧಿಯಲ್ಲಿ ಪರಿಣಾಮ ಆಧಾರಿತ ಮುನ್ಸೂಚನೆ (ಐಬಿಎಫ್) ಹೊರಡಿಸುವುದನ್ನು ಇಲಾಖೆ ಮುಂದುವರಿಸಲಿದೆ. ಈ ಮುಂಗಾರು ಅವಧಿಯಲ್ಲಿ ಅಗತ್ಯ ಸಂದರ್ಭಗಳಲ್ಲಿ ಹವಾಮಾನ ಇಲಾಖೆಯು ಭಾರಿ ಮಳೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಸೇರಿದಂತೆ ಪೂರ್ವ ಮಾಹಿತಿಗಳನ್ನು ಒದಗಿಸಿತ್ತು. ನಾವು ಐಬಿಎಫ್ ಸೇವೆಯನ್ನು ಮತ್ತಷ್ಟು ಬಲಪಡಿಸಲಿದ್ದೇವೆ. ರಾಜ್ಯಗಳ ಸ್ಥಳೀಯ ಸಂಸ್ಥೆಗಳ ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಸಮೀಪದಲ್ಲಿ ಕೆಲಸ ಮಾಡುತ್ತೇವೆ ಎಂದು ಇಲಾಖೆ ತಿಳಿಸಿದೆ.
ಹೊಸ ರೇಡಾರ್ಗಳ ಸ್ಥಾಪನೆ
ದೇಶದಲ್ಲಿ ಡಾಪ್ಲರ್ ರೇಡಾರ್ಗಳ ಜಾಲವನ್ನು ವಿಸ್ತರಿಸಲಾಗುತ್ತಿದೆ. ಹತ್ತು ಹೊಸ ರೇಡಾರ್ಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಇವುಗಳಲ್ಲಿ ಕನಿಷ್ಠ ನಾಲ್ಕು ರೇಡಾರ್ಗಳು ಈ ವರ್ಷದ ಅಂತ್ಯದಲ್ಲಿಯೇ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ ಎಂದು ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ತಿಳಿಸಿದ್ದಾರೆ.