ತಂದೆ, ಅಣ್ಣ, ಅಜ್ಜನಿಂದಲೇ ಬಾಲಕಿ ಮೇಲೆ 5 ವರ್ಷಗಳಿಂದ ಅತ್ಯಾಚಾರ!
ಪುಣೆ, ಮಾರ್ಚ್ 20: ಹನ್ನೊಂದು ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ, ಹಿರಿಯ ಸಹೋದರ ಮತ್ತು ಅಜ್ಜನೇ ಐದು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಮಾಡಿರುವ ಅಮಾನುಷ ಘಟನೆಯು ಪುಣೆಯಲ್ಲಿ ವರದಿ ಆಗಿದೆ. ಈ ಬಗ್ಗೆ ಬಂಡ್ ಗಾರ್ಡನ್ನಲ್ಲಿರುವ ಪುಣೆಯ ಪೊಲೀಸ್ ಠಾಣೆಯಲ್ಲಿ ಮಾರ್ಚ್ 18 ರಂದು ಎಫ್ಐಆರ್ ದಾಖಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಬಾಲಕಿಯ ತಂದೆ, ಹಿರಿಯ ಸಹೋದರ ಮತ್ತು ಅಜ್ಜನ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ ಆದರೆ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಗೋಣಿ ಚೀಲದಲ್ಲಿ ಶವ ಪತ್ತೆ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರದ ಪ್ರಕರಣವನ್ನು ಪುಣೆಯ ಪೊಲೀಸ್ ಠಾಣೆಯಲ್ಲಿ ಈಗ 11 ವರ್ಷ ವಯಸ್ಸಿನ ಹುಡುಗಿಯ ಸಹೋದರ ಮತ್ತು 45 ವರ್ಷದ ತಂದೆಯ ವಿರುದ್ಧ ದಾಖಲಿಸಲಾಗಿದೆ. ಹಾಗೆಯೇ ಆಕೆಯ ಅಜ್ಜ (60 ವರ್ಷ) ಮತ್ತು ದೂರದ ಸಂಬಂಧಿ (ಚಿಕ್ಕಪ್ಪ- 25 ವರ್ಷ) ಸೆಕ್ಷನ್ 354 (ಹೆಣ್ಣಿನ ಮೇಲೆ ದೌರ್ಜನ್ಯ) ಅಡಿಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಪೊಲೀಸರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದರು.
ಐದು ವರ್ಷದ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಇನ್ನು ಬಾಲಕಿ ಹಾಗೂ ಆಕೆಯ ಕುಟುಂಬ ಸದಸ್ಯರು ಬಿಹಾರ ಮೂಲದವರಾಗಿದ್ದಾರೆ. ಆದರೆ ಪ್ರಸ್ತುತ ಪುಣೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ. ಇನ್ನು ಐದು ವರ್ಷದ ಬಳಿಕ ಈ ಘಟನೆಯು ಬೆಳಕಿಗೆ ಹೇಗೆ ಬಂದಿದೆ ಎಂಬ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ (ಅಪರಾಧ) ಅಶ್ವಿನಿ ಸತ್ಪುಟೆ ಮಾಹಿತಿ ನೀಡಿದ್ದಾರೆ. "ಬಾಲಕಿಗೆ ತನ್ನ ಶಾಲೆಯಲ್ಲಿ 'ಗುಡ್ ಟಚ್ ಮತ್ತು ಬ್ಯಾಡ್ ಟಚ್' ಬಗ್ಗೆ ವಿವರಣೆ ನೀಡುವ ಸಂದರ್ಭದಲ್ಲಿ ಈ ಘಟನೆಯು ಬೆಳಕಿಗೆ ಬಂದಿದೆ. ಕಳೆದ ಐದು ವರ್ಷಗಳಿಂದ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಲೇ ಇದೆ," ಎಂದು ತಿಳಿಸಿದ್ದಾರೆ.
2017ರಲ್ಲಿ ಬಿಹಾರದಲ್ಲಿ ವಾಸಿಸುತ್ತಿದ್ದಾಗ ತಂದೆ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದ ಎಂದು ದೂರನ್ನು ಉಲ್ಲೇಖಿಸಿ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. "ಬಾಲಕಿಯ ಹಿರಿಯ ಸಹೋದರ ನವೆಂಬರ್ 2020 ರ ಸುಮಾರಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಪ್ರಾರಂಭ ಮಾಡಿದ್ದಾನೆ. ಆಕೆಯ ಅಜ್ಜ ಮತ್ತು ದೂರದ ಚಿಕ್ಕಪ್ಪ ಅವಳ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದರು," ಎಂದು ಪೊಲೀಸ್ ಇನ್ಸ್ಪೆಕ್ಟರ್ ಹೇಳಿದರು.
ಎಲ್ಲಾ ಘಟನೆಗಳು ಪ್ರತ್ಯೇಕವಾಗಿ ಸಂಭವಿಸಿರುವುದರಿಂದ ಆರೋಪಿಗಳು ಪರಸ್ಪರರ ಕೃತ್ಯಗಳ ಬಗ್ಗೆ ತಿಳಿದಿರದಿರಬಹುದು. ಇದು ಸಾಮೂಹಿಕ ಅತ್ಯಾಚಾರದ ಪ್ರಕರಣವಲ್ಲ ಎಂದು ಇನ್ಸ್ಪೆಕ್ಟರ್ ಸತ್ಪುಟೆ ಈ ಸಂದರ್ಭದಲ್ಲೇ ಸ್ಪಷ್ಟಪಡಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ಗಳನ್ನು ಕೂಡಾ ಸೇರ್ಪಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. (ಒನ್ಇಂಡಿಯಾ ಸುದ್ದಿ)