ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್
ಪುಣೆ, ಮಾರ್ಚ್ 12: ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಅವರು ಮಂಗಳವಾರ (ಮಾರ್ಚ್ 12)ದಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಲೋಕಸಭೆ ಚುನಾವಣೆ 2019ಗೂ ಮುನ್ನ ವಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ಅವರು ಬಿಜೆಪಿ ಸೇರಿದ್ದು, ಲೋಕಸಭೆ ಸ್ಪರ್ಧಿಸುವ ನಿರೀಕ್ಷೆಯಿದೆ.
ಮಹಾರಾಷ್ಟ್ರದ ಅಹ್ಮದ್ ನಗರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದ ಸುಜಯ್ ಗೆ ಟಿಕೆಟ್ ನಿರಾಕರಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿಯಿದ್ದು, ಸುಜಯ್ ಸ್ಪರ್ಧೆಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪಕ್ಷವು ನಿರಾಕರಿಸಿತ್ತು. ಹೀಗಾಗಿ, ಟಿಕೆಟ್ ಆಕಾಂಕ್ಷಿಯಾಗಿ ಬಿಜೆಪಿ ಸೇರಿದ್ದಾರೆ.
ಎನ್ ಸಿಪಿ ಬಿಗಿಪಟ್ಟು: ಅಹ್ಮದ್ ನಗರ್ ಸ್ಥಾನ ಎಂದಿದ್ದರೂ ನಮ್ಮ ಕ್ಷೇತ್ರ. ನಮ್ಮ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟುಕೊಡುವ ಮಾತೇ ಇಲ್ಲ. ರಾಧಾಕೃಷ್ಣ ವಿಖೆ ಪಾಟೀಲ್ ಅವರ ತಂದೆ ದಿವಂಗತ ಬಾಳಾಸಾಹೇಬ್ ವಿಖೆ ಪಾಟೀಲ್ ಅವರನ್ನು ಎನ್ ಸಿಪಿ ಸೋಲಿಸಿತ್ತು. ಇದರಿಂದ ಕೋರ್ಟ್ ಕೇಸುಗಳನ್ನು ಎದುರಿಸಿದ್ದೇನೆ. ನಮ್ಮ ಪಾರ್ಟಿ ಸೇರುವ ಮುಕ್ತ ಅವಕಾಶವಿತ್ತು. ಆದರೆ, ಎನ್ ಸಿಪಿಯ ಸ್ಥಾನವನ್ನು ಕಸಿದುಕೊಳ್ಳಲು ಬರುವುದಿಲ್ಲ ಎಂದು ಪವಾರ್ ಪ್ರತಿಕ್ರಿಯಿಸಿದ್ದಾರೆ.
ಪವಾರ್ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬದಲಿಗೆ ಅವರ ಸೋದರ ಮೊಮ್ಮಗ ಪಾರ್ಥ್ ಅವರನ್ನು ಮಾವಲ್ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ.
ಈ ನಡುವೆ ಗುಜರಾತಿನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಚುನಾವಣಾ ಪ್ರಚಾರ ಸಮಿತಿ ಸಭೆ ನಡೆಯುವ ಸಂದರ್ಭದಲ್ಲೇ ಅತ್ತ ಕೋಲ್ಕತ್ತಾದಲ್ಲಿ ಟಿಎಂಸಿ ಸಂಸದ ಅನುಪಮ್ ಹಜ್ರಾ, ಸಿಪಿಐ ಶಾಸಕ ಖಗೇನ್ ಮುರ್ಮು ಅವರು ಬಿಜೆಪಿ ಸೇರಿದ್ದಾರೆ. ತೆಲಂಗಾಣದಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದಾರೆ.