ಶಿಕ್ಷಣಕ್ಕೆ ಡಿಜಿಟಲ್ ಸ್ಪರ್ಶ; ಕನ್ನಡ ಶಿಕ್ಷಕನಿಗೆ ಗ್ಲೋಬಲ್ ಟೀಚರ್ ಪುರಸ್ಕಾರ
ಪುಣೆ, ಡಿಸೆಂಬರ್ 04: ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿದ್ದರಷ್ಟೇ ಬೆಳವಣಿಗೆ ಸಾಧ್ಯ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಈ ಮಾತಿಗೆ ಮಾದರಿಯಾಗಿದ್ದಾರೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಈ ಕನ್ನಡ ಶಿಕ್ಷಕ.
ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸುವ ಚಿಂತನೆ ನಡೆಸಿದ ಶಿಕ್ಷಕ ರಂಜಿತ್ ಸಿಂಹ ದಿಸಾಳೆ ಆರಿಸಿಕೊಂಡಿದ್ದು ಕ್ಯೂಆರ್ ಕೋಡ್ ತಂತ್ರವನ್ನು. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಂಜಿತ್ ಸಿಂಹ ಕ್ಯೂ ಆರ್ ಕೋಡ್ ಆಧಾರಿತ ಪಠ್ಯವನ್ನು ಪರಿಚಯಿಸಿದ್ದಾರೆ. ಅವರ ಈ ಕಾರ್ಯ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಬಾರಿಯ ಗ್ಲೋಬಲ್ ಟೀಚರ್ ಪ್ರಶಸ್ತಿಯನ್ನೂ ತಂದುಕೊಟ್ಟಿದೆ.
"ಶಿಕ್ಷಕರ ತವರೂರು" ಬೆಳಗಾವಿಯ ಈ ಇಂಚಲ ಗ್ರಾಮ
2014ರಲ್ಲಿ ವಾಲ್ಮೀಕಿ ಫೌಂಡೇಶನ್ ಸ್ಥಾಪಿಸಿದ್ದ ಜಾಗತಿಕ ಶಿಕ್ಷಕ ಪ್ರಶಸ್ತಿಯ ಅಂತಿಮ ಸುತ್ತಿಗೆ ವಿಶ್ವದ ವಿವಿಧೆಡೆಯ 10 ಮಂದಿ ಪ್ರವೇಶಿಸಿದ್ದರು. ಈ ಪೈಕಿ ರಂಜಿತ್ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
2009ರಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಇವರದ್ದು, ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ತರುವ ಉದ್ದೇಶ. ಈ ಕಾರಣಕ್ಕೆ ಕ್ಯೂ ಆರ್ ಕೋಡ್ ಆಧಾರಿತ ಪಠ್ಯವನ್ನು ಪರಿಚಯಿಸಿದರು. ಆಡಿಯೋ ಗೀತೆ, ವಿಡಿಯೋ ಪಾಠ, ಕಥೆಗಳನ್ನು ಮಕ್ಕಳು ಕೇಳುವಂತಾಗಲು ಕ್ಯೂ ಆರ್ ಕೋಡ್ ಅಳವಡಿಸುವ ಮಾದರಿ ಕಂಡುಹಿಡಿದರು. ಮಹಾರಾಷ್ಟ್ರ ಸರ್ಕಾರ ಈ ಪಠ್ಯವನ್ನು ಅಳವಡಿಸಿಕೊಂಡಿದೆ. ತಾಂತ್ರಿಕತೆ ಅಷ್ಟೇ ಅಲ್ಲ, ಬಾಲಕಿಯರ ಶಿಕ್ಷಣಕ್ಕೂ ಒತ್ತು ನೀಡಿದ್ದಾರೆ ರಂಜಿತ್. ಗ್ರಾಮೀಣ, ಬುಡಕಟ್ಟು ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವ ಕೆಲಸ ಮಾಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ.
ಭಾರತೀಯರ ಶಿಕ್ಷಣ ಉತ್ತೇಜಿಸಿದ ಹಾಗೂ ಭಾರತದಲ್ಲಿ ಕ್ಯೂ ಆರ್ ಕೋಡ್ ಪಠ್ಯಪುಸ್ತಕ ಕ್ರಾಂತಿ ಮಾಡಿದ ಅವರ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ತಮ್ಮ ಬಹುಮಾನದ ಹಣದಲ್ಲಿ ಶೇ.50ರಷ್ಟನ್ನು ಫೈನಲಿಸ್ಟ್ ಸಹರ್ವತಿಗಳೊಂದಿಗೆ ಹಂಚಿಕೊಳ್ಳುವುದಾಗಿ ರಂಜಿತ್ ಘೋಷಿಸಿದ್ದಾರೆ.
ಲಂಡನ್ ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂನಲ್ಲಿ ವರ್ಚುಯಲ್ ಆಗಿ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿಯಲ್ಲಿ ಅವರಿಗೆ ಬರೋಬ್ಬರಿ 7.5 ಕೋಟಿ ರೂ ನಗದು ಬಹುಮಾನವಿದ್ದು, ರಂಜಿತ್ ಅವರ ಈ ಕಾರ್ಯ ಇತರೆ ಶಿಕ್ಷಕರಿಗೆ ಪ್ರೇರಣೆಯಾಗಿದೆ.
ಸಿಎಂ ಯಡಿಯೂರಪ್ಪ ಅಭಿನಂದನೆ: ಗ್ಲೋಬಲ್ ಟೀಚರ್ ಪುರಸ್ಕಾರ ಭಾಜನರಾದ ರಂಜಿತ್ ಸಿಂಹ ದಿಸಾಳೆಯವರಿಗೆ ಅಭಿನಂದನೆಗಳು. ಮಹಾರಾಷ್ಟ್ರದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಂಜಿತ್ ಅವರು ಪುರಸ್ಕಾರದ ಮೊತ್ತದಲ್ಲಿ ಅರ್ಧದಷ್ಟನ್ನು ಅಂತಿಮ ಸುತ್ತಿನ ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳುವ ಹೃದಯವೈಶಾಲ್ಯ ವ್ಯಕ್ತಪಡಿಸಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.