ಥಾಯ್ ಗುಹೆ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದ ಭಾರತದ ಕಂಪೆನಿ
ಪುಣೆ, ಜುಲೈ 11: ಥಾಯ್ಲೆಂಡ್ನ ಗುಹೆಯೊಳಗೆ ಸಿಲುಕಿದ್ದ ಫುಟ್ಬಾಲ್ ತಂಡದ 12 ಬಾಲಕರು ಮತ್ತು ಅವರ ಕೋಚ್ಅನ್ನು ರಕ್ಷಿಸುವಲ್ಲಿ ಭಾರತದ ತಂತ್ರಜ್ಞಾನ ಕಂಪೆನಿಯೊಂದು ಸಹ ನೆರವಾಗಿದೆ.
ನೀರನ್ನು ಹೊರಹಾಕುವುದರಲ್ಲಿ ಪರಿಣತವಾದ ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ (ಕೆಬಿಎಲ್) ನೆರವನ್ನು ಪಡೆದುಕೊಳ್ಳಬಹುದು ಎಂದು ಭಾರತದ ರಾಯಭಾರ ಕಚೇರಿಯು ಥಾಯ್ಲೆಂಡ್ ಅಧಿಕಾರಿಗಳಿಗೆ ತಿಳಿಸಿದ್ದರು.
ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?
ಅದರಂತೆ ಕಂಪೆನಿಯು ಭಾರತ, ಥಾಯ್ಲೆಂಡ್ ಮತ್ತು ಇಂಗ್ಲೆಂಡ್ನಲ್ಲಿರುವ ತನ್ನ ಪರಿಣತರನ್ನು ಘಟನಾ ಸ್ಥಳಕ್ಕೆ ಕಳುಹಿಸಿತ್ತು.
ಜುಲೈ 5ರಿಂದ ಥಾಮ್ ಲುವಾಂಗ್ ಗುಹೆಯಲ್ಲಿದ್ದ ಕಂಪೆನಿಯ ಪರಿಣತರು ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ನೀರನ್ನು ಹೊರಹಾಕುವುದಕ್ಕೆ ಮತ್ತು ಪಂಪ್ಗಳ ಬಳಕೆಗೆ ಅಗತ್ಯ ಸಲಹೆಗಳನ್ನು ನೀಡಿದ್ದರು.
ಮಹಾರಾಷ್ಟ್ರದ ಕಿರ್ಲೋಸ್ಕರ್ವಾಡಿ ಘಟಕದಲ್ಲಿ ಸಿದ್ಧವಿರುವ ನಾಲ್ಕು ವಿಶೇಷ ಅತ್ಯುತ್ಕೃಷ್ಟ ಆಟೊಪ್ರೈಮ್ ಡಿವಾಟರಿಂಗ್ ಪಂಪ್ಗಳನ್ನು ಬೇಕಾದಲ್ಲಿ ನೀಡುವುದಾಗಿ ಕೂಡ ಅದು ಥಾಯ್ಲೆಂಡ್ಗೆ ತಿಳಿಸಿದೆ.
ಥಾಯ್ಲೆಂಡ್ ಗುಹೆಯಿಂದ ಸುರಕ್ಷಿತವಾಗಿ ಹೊರಬಂದ ಬಾಲಕರು
ಥಾಯ್ಲೆಂಡ್ನ ಉತ್ತರ ಭಾಗದಲ್ಲಿರುವ ಪರ್ವತಶ್ರೇಣಿಯ ಥಾಮ್ ಲುವಾಂಗ್ ಗುಹೆಗೆ ಜೂನ್ 23ರಂದು ಪ್ರವಾಸಕ್ಕೆಂದು ತೆರಳಿದ್ದ ಶಾಲಾ ಫುಟ್ಬಾಲ್ ತಂಡವೊಂದರ 11-16 ವರ್ಷದ 12 ಬಾಲಕರು ಮತ್ತು ಕೋಚ್ ಅದರೊಳಗೆ ಸಿಲುಕಿಕೊಂಡಿದ್ದರು.
ವಿಪರೀತ ಮಳೆಯೊಂದಾಗಿ ಏಕಾಏಕಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದರಿಂದ ಗುಹೆಯೊಳಗೆ ನೀರು ನುಗ್ಗಿತ್ತು. ಇದರಿಂದ ಅವರನ್ನು ಹೊರಗೆ ಕರೆತರಲು ಸತತ ಕಾರ್ಯಾಚರಣೆ ನಡೆಸಲಾಗಿತ್ತು.