ಬಹುಸಂಖ್ಯಾತ ಹಿಂದೂಗಳು ಹೇಳಿದಂತೆ ದೇಶ ನಡೆಯುತ್ತದೆ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ
ಪುಣೆ, ಆಗಸ್ಟ್ 24: ಬಹುಸಂಖ್ಯಾತ ಹಿಂದೂಗಳ ಬಯಕೆಯಂತೆಯೇ ಭಾರತ ನಡೆಯಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ರಾಷ್ಟ್ರೀಯ ಗಣೇಶ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತ ಹಿಂದೂಗಳು ಏನು ಹೇಳಿತ್ತಾರೆಯೋ ಹಾಗೆಯ ದೇಶ ನಡೆಯುತ್ತದೆ. ಒಂದು ವೇಳೆ ಅವರು ಈ ಗಣೇಶ ಉತ್ಸವದಲ್ಲಿ ನಾಟಕಗಳಂತಹ ಕಾರ್ಯಕ್ರಮ ಬೇಕು ಎಂದು ಮಧ್ಯರಾತ್ರಿ 12 ಗಂಟೆಗೆ ಬಯಸಿದರೂ ಅದಕ್ಕೆ ಸಿದ್ಧತೆಗಳು ನಡೆಯುತ್ತವೆ ಎಂದು ಹೇಳಿದರು.
ಜಗನ್ ಮೋಹನ್ ರೆಡ್ಡಿ ಹಿಂದೂ ವಿರೋಧಿ: ಬಿಜೆಪಿ ಆರೋಪ
ದೇಶದ ಆಡಳಿತಗಾರರೂ ಹಿಂದೂಗಳು. ಗಣೇಶ ಹಬ್ಬದ ಆಚರಣೆಗಾಗಿ ಕುಟುಂಬದವರೊಂದಿಗೆ ಅವರೂ ತೆರಳುತ್ತಾರೆ. ಆಡಳಿತಗಾರರು ನಮಗೆ ತೊಂದರೆ ಸೃಷ್ಟಿಸುವುದನ್ನು ಮಾತ್ರ ಬಯಸುತ್ತಾರೆ ಎಂಬ ಅಭಿಪ್ರಾಯ ಇರಬಾರದು ಎಂದು ಕಂದಾಯ ಸಚಿವರೂ ಆಗಿರುವ ಅವರು ಹೇಳಿದರು.
ಪಾಟೀಲ್ ಅವರ ಹೇಳಿಕೆ ಮಹಾರಾಷ್ಟ್ರದಲ್ಲಿನ ವಿರೋಧ ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿದ್ದರೂ ಇದು ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ರಾಷ್ಟ್ರ. ಇಲ್ಲಿ ಎಲ್ಲ ಜಾತಿ, ಧರ್ಮಗಳೂ ಒಂದೇ. ಯಾವ ಸಮುದಾಯವೂ ಪ್ರಾಬಲ್ಯ ಮೆರೆಯುವುದಿಲ್ಲ. ಪಾಟೀಲ್ ಅವರು ನೀಇಡಿರುವ ಹೇಳಿಕೆ ಸಮುದಾಯಗಳನ್ನು ವಿಭಜಿಸುವುದೇ ಅವರ ಉದ್ದೇಶ ಎಂದು ಟೀಕಿಸಿದ್ದಾರೆ.
ಕಳೆದ ವಾರ ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಅವರ ಮೇಲೆ ಪಾಟೀಲ್ ಅವರು ರೇಗಾಡಿದ ವಿಡಿಯೋ ಎಲ್ಲೆಡೆ ಹರಿದಾಡಿತ್ತು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೋಗುವ ವೇಳೆ ಸರ್ಕಾರವು ಎಲ್ಲ ಪರಿಹಾರಗಳನ್ನು ಒದಗಿಸಲಿದೆ. ಅದಕ್ಕಾಗಿ ಚಿಂತೆ ಬೇಡ ಎಂದು ಜನರಿಗೆ ಸಾಂತ್ವನ ಹೇಳುತ್ತಿದ್ದರು. ಆದರೆ, ಇಲ್ಲಿ ಸೂಕ್ತ ಪರಿಹಾರ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪ ಮಾಡಿದ ಸಂತ್ರಸ್ತರೊಬ್ಬರ ಮೇಲೆ ಪಾಟೀಲ್ ಕೂಗಾಡಿದ್ದರು.
'ಈ ಸಂದರ್ಭದಲ್ಲಿ ಮತ್ತು ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಸೌಲಭ್ಯಗಳು ಬೇಕು ಎನ್ನುವುದು ನನಗೆ ಅರ್ಥವಾಗುತ್ತದೆ. ಆದರೆ, ನಿಮಗೆ ವಸ್ತುಗಳು ಮತ್ತು ಸೌಕರ್ಯಗಳು ಬೇಕು ಎಂದು ಬೇಡಿಕೊಳ್ಳಬೇಕು ಎಂದೂ ನೀವು ಅರ್ಥಮಾಡಿಕೊಳ್ಳಬೇಕು' ಎಂದು ದಬಾಯಿಸಿದ್ದ ವಿಡಿಯೋ ವೈರಲ್ ಆಗಿತ್ತು.