ಫಲಿತಾಂಶ ಬಳಿಕ, ಕಾಂಗ್ರೆಸ್ ಶಾಸಕರಿಂದ ಬಿಜೆಪಿಗೆ ವಲಸೆ
ಮುಂಬೈ, ಮೇ 27: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಿರೀಕ್ಷೆಯಂತೆ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈ ವರ್ಷಾಂತ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆಯುಂಟಾಗಿದೆ.
ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡ ಶಾಸಕ ಅಬ್ದುಲ್ ಸತ್ತಾರ್ ಅವರು ಬಿಜೆಪಿ ಸೇರುವ ಸುಳಿವು ಸಿಕ್ಕಿದೆ. ಕಾಂಗ್ರೆಸ್ಸಿನಿಂದ ಅಸಮಾಧಾನಗೊಂಡಿರುವ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರೊಂದಿಗೆ ಅಹ್ಮದ್ನಗರ ಜಿಲ್ಲೆಯ ಸಂಗಮ್ನರ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಅಬ್ದುಲ್ ಸತ್ತಾರ್ ಕಾಣಿಸಿಕೊಂಡಿದ್ದಾರೆ.
ಸುಜಯ್ ನಂತರ ಕಾಂಗ್ರೆಸ್ಸಿಗೆ 'ಕೈ' ಕೊಟ್ಟ ಶಾಸಕ ಕಾಳಿದಾಸ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಎಸ್ ಸಿಪಿ ಜೊತೆ ಮೈತ್ರಿ ಬಗ್ಗೆ ರಾಧಾಕೃಷ್ಣ ವಿಖೆ ವಿರೋಧ ವ್ಯಕ್ತಪಡಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎನ್ಸಿಪಿ ನಾಯಕ ಶರದ್ ಪವಾರ್ ಮತ್ತು ರಾಧಾಕೃಷ್ಣ ವಿಖೇ ಪಾಟೀಲ್ ತಂದೆ ದಿ.ಬಾಲಾಸಾಹೇಬ್ ವಿಶೇ ಪಾಟೀಲ್ ನಡುವೆ ರಾಜಕೀಯ ದ್ವೇಷವಿತ್ತು. ಆದ್ದರಿಂದ, ಅವರು ಮೈತ್ರಿ ಬಳಿಕ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಖೇ ಪಾಟೆಲ್ ಮೇಲೆ ನಂಬಿಕೆಯಿದೆ
ವಿಖೇ ಪಾಟೀಲ್ ಏನೇ ನಿರ್ಧಾರ ಕೈಗೊಂಡರೂ ಅದನ್ನು ನಾವು ಪಾಲಿಸುತ್ತೇವೆ. ಅವರ ನಿರ್ಧಾರವೇ ಅಂತಿಮ ಎಂದು ಶಾಸಕ ಅಬ್ದುಲ್ ಸತ್ತಾರ್ ಹೇಳಿದ್ದಾರೆ. ಇನ್ನಷ್ಟು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.
ವಿಪಕ್ಷ ನಾಯಕರಾಗಿದ್ದ ವಿಖೇ ಪಾಟೀಲ್
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸುಜಯ್ ಅವರ ಹಾದಿಯಲ್ಲೇ ಸಾಗಿದ ಅವರ ತಂದೆ ರಾಧಾಕೃಷ್ಣ ವಿಖೇ ಪಾಟೀಲ್ ಅವರನ್ನು ಜೂನ್ ತಿಂಗಳಿನಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲು ದೇವೇಂದ್ರ ಫಡ್ನವೀಸ್ ಮುಂದಾಗಿದ್ದಾರೆ. ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ವಿಖೆ ಪಾಟೀಲ್ ಕುಟುಂಬದವರು ಎನ್ ಸಿಪಿ ಮುಖಂಡ ಶರದ್ ಪವಾರ್ ಅವರ ಸ್ವಜನಪಕ್ಷಪಾತವನ್ನು ಖಂಡಿಸಿ, ಕಾಂಗ್ರೆಸ್ ತೊರೆದಿದ್ದರು.
ಕಾಂಗ್ರೆಸ್ಸಿನಿಂದ ಬಿಜೆಪಿಯತ್ತ ಶಾಸಕರು
ಕಾಂಗ್ರೆಸ್ ವಿಪಕ್ಷ ನಾಯಕರ ಮಗ ಸುಜಯ್ ಅವರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ 7 ಬಾರಿ ಶಾಸಕರಾಗಿರುವ ಕಾಳಿದಾಸ್ ಕೊಲಂಬ್ಕರ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ದೇವೇಂದ್ರ ಫಡ್ನವೀಸ್ ಗೆ ನನ್ನ ಬೆಂಬಲ ಎಂದಿದ್ದಾರೆ.
ಸತ್ತಾರ್ ಜೊತೆಗೆ ಇನ್ನಷ್ಟು ಶಾಸಕರು
ರಾಜ್ಯ ಬಿಜೆಪಿ ಮುಖ್ಯಸ್ಥ ರೌಸಾಹೇಬ್ ಡನ್ವೆ ಅವರ ಪುತ್ರ, ಔರಂಗಬಾದ್ನಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ಹರ್ಷವರ್ಧನ್ ಜಾಧವ್ ಅವರಿಗೆ ಔರಂಗಾಬಾದ್ನ ಶಾಸಕರಾಗಿರುವ ಸತ್ತಾರ್ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಈಗ ವಿಖೇ ಪಾಟೀಲ್ ಜೊತೆ ಕಾಣಿಸಿಕೊಂಡಿದ್ದು, ಇನ್ನಷ್ಟು ಕಾಂಗ್ರೆಸ್ ಶಾಸಕರನ್ನು ತಮ್ಮ ಜೊತೆ ಬಿಜೆಪಿಗೆ ಕರೆದೊಯ್ಯಲಿದೆ ಎನ್ನಲಾಗಿದೆ.