ಪುಣೆಯ ಆಸ್ಪತ್ರೆ ಹೊರಾಂಗಣದಲ್ಲಿ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ!
ಮುಂಬೈ, ಏಪ್ರಿಲ್ 06: ಮಹಾರಾಷ್ಟ್ರದ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಪುಣೆಯ ಪಿಂಪ್ರಿಯಲ್ಲಿ ಕೊವಿಡ್-19 ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆ ವ್ಯವಸ್ಥೆ ಇಲ್ಲದೇ ಆಸ್ಪತ್ರೆ ಹೊರಾಂಗಣದಲ್ಲಿ ಚಿಕಿತ್ಸೆ ನೀಡುವಂತಾ ಸ್ಥಿತಿ ನಿರ್ಮಾಣವಾಗಿದೆ.
ಉಸಿರಾಟ ಸಮಸ್ಯೆ ಎದುರಿಸುತ್ತಿರುವ ಕೊವಿಡ್-19 ಸೋಂಕಿತರಿಗೆ ಆಮ್ಲಜನಕದ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಕೊಠಡಿಯಲ್ಲಿ 7 ಹಾಸಿಗೆಗಳನ್ನು ಇರಿಸಲು ಮಾತ್ರ ಸ್ಥಳವಿದೆ. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ರೋಗಿಗಳು ಕಾದು ನಿಲ್ಲುವ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
"ಪ್ಲೀಸ್.. 25 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಕೊಡಿ"
ಪುಣೆಯ ಯಶವಂತರಾವ್ ಚೌವಾಣ್ ಮೆಮೋರಿಯಲ್ ಆಸ್ಪತ್ರೆಯು ಒಟ್ಟು 400 ಬೆಡ್ ವ್ಯವಸ್ಥೆಯನ್ನು ಹೊಂದಿದೆ. ಅದರಲ್ಲಿ 55 ತುರ್ತು ನಿಗಾ ಘಟಕದ ಹಾಸಿಗೆಗಳಿದ್ದು, ಒಂದೇ ಒಂದು ಐಸಿಯು ಹಾಸಿಗೆ ಕೂಡಾ ಖಾಲಿಯಾಗಿಲ್ಲ. ಉಸಿರಾಟ ಸಮಸ್ಯೆ ಎದುರಿಸುತ್ತಿರುವ ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್ ಸರಬರಾಜಿನಲ್ಲೂ ಅಭಾವ ಎದುರಾಗಿದೆ. ಇಡೀ ಪುಣೆಯಲ್ಲಿ ಕೇವಲ 79 ವೆಂಟಿಲೇಟರ್ ಸಹಿತ ಬೆಡ್ ವ್ಯವಸ್ಥೆಯಿದೆ.
ಉಸಿರಾಟ ಸಮಸ್ಯೆ ಉಳ್ಳವರಿಗೆ ಆಮ್ಲಜನಕ ವ್ಯವಸ್ಥೆ
ಮೊದಲ ಆಮ್ಲಜನಕ ವ್ಯವಸ್ಥೆ ನಂತರ ಹಾಸಿಗೆ ವ್ಯವಸ್ಥೆ
ಪುಣೆಯ ಪಿಂಪ್ರಿ ಚಿಂಚಿವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳು ಆಸ್ಪತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಮೊದಲು ಅವರನ್ನು ದಾಖಲಿಸಿಕೊಳ್ಳಲಾಗುತ್ತದೆ. ಅವರ ಆರೋಗ್ಯ ಸಮಸ್ಯೆಯನ್ನು ನೋಡಿಕೊಂಡು ಚಿಕಿತ್ಸೆ ಆರಂಭಿಸಲಾಗುತ್ತದೆ. ಗಂಭೀರ ಸ್ವರೂಪದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂಥವರಿಗೆ ಆಕ್ಸಿಜನ್ ವ್ಯವಸ್ಥೆ ಅನಿವಾರ್ಯವಾಗಿದ್ದರೆ, ಮೊದಲು ಆಕ್ಸಿಜನ್ ಅಳವಡಿಸಲಾಗುತ್ತದೆ. ತದನಂತರದಲ್ಲಿ ಬೆಡ್ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ವೈದ್ಯ ಕೌಶ್ತುಬ್ ತಿಳಿಸಿದ್ದಾರೆ.
ಮುಂಬೈನಲ್ಲೇ 10,030 ಮಂದಿಗೆ ಕೊರೊನಾವೈರಸ್:
ಮಹಾರಾಷ್ಟ್ರದ ಮುಂಬೈನಲ್ಲಿ ಮತ್ತೊಮ್ಮೆ ಕೊವಿಡ್-19 ಸೋಂಕಿನ ಸ್ಫೋಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ 10,030 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ4,72,332ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 31 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 11,828ಕ್ಕೆ ಏರಿಕೆಯಾಗಿದೆ.