ಮಹಾರಾಷ್ಟ್ರದಲ್ಲಿ ಮಹಾ ಮಳೆ, ದೋಣಿ ದುರಂತದಲ್ಲಿ 12 ಮಂದಿ ಸಾವು
ಪುಣೆ, ಆಗಸ್ಟ್ 08: ಮಹಾರಾಷ್ಟ್ರದಲ್ಲಿ ಮಹಾ ಮಳೆಗೆ ಎಲ್ಲೆಡೆ ನದಿ, ತೊರೆ, ಹಳ್ಳಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದ್ದು, ಸಾಂಗ್ಲಿಯಲ್ಲಿ ಭಾರಿ ದುರಂತ ಸಂಭವಿಸಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯ ನಡುವೆ ಸಾಂಗ್ಲಿಯಲ್ಲಿ ದೋಣಿಯಲ್ಲಿ ಸಾಗುತ್ತಿದ್ದ 12 ಮಂದಿ ನೀರು ಪಾಲಾಗಿರುವ ದುರ್ಘಟನೆ ಗುರುವಾರದಂದು ಸಂಭವಿಸಿದೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಸಾಂಗ್ಲಿ, ಕೋಲ್ಹಾಪುರ ಹಾಗೂ ಪುಣೆಯಲ್ಲಿ ಈಗಾಗಲೇ 2.5 ಲಕ್ಷ ಮಂದಿಯನ್ನು ನದಿತೀರಗಳಿಂದ ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ.
ಜುಲೈ ತಿಂಗಳಿನಲ್ಲಿ ನಾಗ್ಪುರ್ ನಲ್ಲಿ 8 ಮಂದಿ ಮೃತಪಟ್ಟಿದ್ದರು. ನಾಗ್ಪುರದ ದೋಣಿ ದುರಂತದಲ್ಲಿ ಮೃತಪಟ್ಟವರ ಪೈಕಿ 20 ವರ್ಷ ವಯಸ್ಸಿನ ಆಸುಪಾಸಿನವರೆ ಅಧಿಕವಾಗಿದ್ದರು. ಇದಾದ ಬಳಿಕ, ಅದೇ ತಿಂಗಳಿನಲ್ಲಿ ಒಡಿಶಾದ ಚಿಲಿಕಾ ಕೆರೆಯಲ್ಲಿ ದೋಣಿ ದುರಂತ ಸಂಭವಿಸಿ, ಹಸುಳೆ ಸೇರಿದಂತೆ ಇಬ್ಬರು ನೀರುಪಾಲಾಗಿದ್ದರು.
ಪುಣೆ ವಿಭಾಗದ ಅಯುಕ್ತರಾದ ದೀಪಕ್ ಮೆಹ್ಸೆಕರ್ ಅವರು ಮಾತನಾಡಿ, "ಸಾಂಗ್ಲಿ ಜಿಲ್ಲೆಯ ಭಮ್ನಾಲ್ ನ ಪಲೂಸ್ ಬ್ಲಾಕ್ ಬಳಿ ದೋಣಿ ದುರಂತ ಸಂಭವಿಸಿದೆ. ಸುಮಾರು 27 ರಿಂದ 30 ಮಂದಿ ಗ್ರಾಮಸ್ಥರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಬಂದಿದೆ. ಇಲ್ಲಿ ತನಕ 9 ಶವಗಳು ಪತ್ತೆಯಾಗಿದ್ದು, 16 ಮಂದಿಯನ್ನು ರಕ್ಷಿಸಲಾಗಿದೆ. ಮಿಕ್ಕವರಿಗಾಗಿ ಶೋಧಕಾರ್ಯ ನಡೆದಿದೆ" ಎಂದಿದ್ದಾರೆ.