ದೀದಿಗೆ ಬಿಜೆಪಿ ಕಂಡರೆ ಭಯ: ಮಮತಾ ಬಗ್ಗೆ ಅಮಿತ್ ಶಾ ಲೇವಡಿ
ಪುಣೆ, ಫೆಬ್ರವರಿ 9: ಬಿಜೆಪಿಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಯ ಹೊಂದಿದ್ದಾರೆ. ಈ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ ಯಾತ್ರೆಗೆ ಅಡ್ಡಿಪಡಿಸಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯಾತ್ರೆ ನಡೆಸಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಿನ್ನೆ ಚಾನೆಲ್ ಒಂದು ಸ್ಟಿಂಗ್ ಆಪರೇಷನ್ ನಡೆಸಿದೆ. ಅದರಲ್ಲಿ ತನಿಖಾ ದಳದ ಅಧಿಕಾರಿಯೊಬ್ಬರು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯ ಪ್ರಶ್ನೆಯೇ ಇಲ್ಲ. ಮಮತಾ ಅವರು ಭಯಗೊಂಡಿದ್ದಾರೆ. ಹೀಗಾಗಿ ನಾವು ಅಂತಹ ವರದಿ ಸಲ್ಲಿಸಿದ್ದೇವೆ ಎಂಬುದಾಗಿ ಹೇಳುವುದು ಕಂಡುಬಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ರಾಹುಲ್ ಬಾಬಾ ಮತ್ತು ಕಂಪೆನಿಯ ಕುಟುಂಬ ದೇಶವನ್ನು 55 ವರ್ಷ ಆಳಿದೆ. ಇದು ಸಣ್ಣ ಅವಧಿಯೇನಲ್ಲ. ಅವರ ಕುಟುಂಬ 55 ವರ್ಷ ಆಡಳಿತ ನಡೆಸಿದೆ. ವ್ಯಕ್ತಿ ಅಥವಾ ದೇಶದಸ ಇತಿಹಾಸದಲ್ಲಿ ಸಣ್ಣ ಅವಧಿಯೇನಲ್ಲ. ಆದರೆ, ಇಷ್ಟು ವರ್ಷದ ಆಡಳಿತದಲ್ಲಿ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಾಗಿಲ್ಲ. ಮೋದಿಜಿ 55 ತಿಂಗಳ ಕಾಲ ಆಡಳಿತ ನಡೆಸಿದ್ದಾರೆ. ಈ 55 ವರ್ಷಗಳಲ್ಲಿ ಸಾಧ್ಯವಾಗದ ಸಾಧನೆಯನ್ನು ಸಾಧಿಸಲು ಪ್ರಯತ್ನಿಸಿದ್ದಾರೆ. ಯಶಸ್ವಿ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ದೇಶದ ಜನರ ಕನಸನ್ನು ಈಡೇರಿಸುವ ಬಜೆಟ್. ದೇಶದ ಕೃಷಿಕರಿಗೆ ಬಹಳ ಕೆಲಸ ಮಾಡಲಾಗಿದೆ. 6 ಸಾವಿರ ರೂಪಾಯಿಯಿಂದ ಏನಾಗುತ್ತದೆ ಎಂದು ರಾಹುಲ್ ಅಣಕಿಸುತ್ತಾರೆ. ಈ ಹತ್ತು ವರ್ಷಗಳಲ್ಲಿ ನೀವೆಷ್ಟು ನೀಡಿದ್ದೀರಿ ರಾಹುಲ್? ಒಂದು ವರ್ಷದಲ್ಲಿ 55 ಸಾವಿರ ಕೋಟಿ ರೈತರ ಖಾತೆಗೆ ಜಮೆ ಮಾಡಿದ್ದಾರೆ.
ರಾಹುಲ್ ಬಾಬಾ ನಿಮಗೆ ಹಿಂದಿ ಬರುವುದಿಲ್ಲವೇ? ಹಿಂದೊಮ್ಮೆ ರಾಹುಲ್ ಬಾಬಾ ಆಲೂ ಕಾರ್ಖಾನೆ ಮಾಡುವುದಾಗಿ ಹೇಳಿದ್ದರು. ಅವರಿಗೆ ಗೊತ್ತಿಲ್ಲ ಆಲೂ ಭೂಮಿಯ ಕೆಳಗೆ ಬೆಳೆಯುತ್ತದೆಯೋ ಭೂಮಿಯ ಮೇಲೆ ಬೆಳೆಯುತ್ತದೆಯೋ ಎಂದು ಗೊತ್ತಿಲ್ಲ. ಅವರು ರೈತರ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಲೂಟಿಕೋರರು ಅಧಿಕಾರಕ್ಕೆ ಬಂದರೆ ಭಾರತದ ಬೆಳವಣಿಗೆ ಕುಸಿಯುತ್ತದೆ ಮತ್ತು ಅಭಿವೃದ್ಧಿ ಹಾದಿ ತಪ್ಪುತ್ತದೆ. ಮೋದಿ ಸರ್ಕಾರ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದೆ. ದೇಶದ ಭವಿಷ್ಯವನ್ನು ಈ ಚುನಾವಣೆ ನಿರ್ಧರಿಸುತ್ತದೆ ಎಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಒಂದು ಕುಟುಂಬದ ಪ್ರಭಾವವನ್ನು ಬಿಜೆಪಿ ಅಳಿಸಿಹಾಕಿದೆ. ಜಾತಿವಾದಿ-ಕೋಮುವಾದಿ ಪ್ರಕಾರದ ರಾಜಕಾರಣವನ್ನು ಪುಡಿಗಟ್ಟಿದೆ. ಭ್ರಷ್ಟಾಚಾರ ದೇಶವನ್ನು ವೇಗದ ಅಭಿವೃದ್ಧಿಯ ಹಾದಿಗೆ ಕೊಂಡೊಯ್ದಿದೆ ಎಂದು ಹೇಳಿದ್ದಾರೆ.
ಈಗ ಎಲ್ಲೆಡೆ ಬಿಜೆಪಿ ಸರ್ಕಾರಗಳಿವೆ. ಬಿಜೆಪಿಯ ಒಂದೇ ಒಂದು ಕ್ಷೇತ್ರವಿಲ್ಲದ, ಪಾಲಿಕೆ ಸದಸ್ಯರೂ ಇಲ್ಲದ ಮಣಿಪುರ, ತ್ರಿಪುರಾಗಳಲ್ಲಿ ಬಿಜೆಪಿ ಸರ್ಕಾರವಿದೆ. ಇದೆಲ್ಲ ಅಚ್ಚರಿ ಮೂಡಿಸುತ್ತದೆ. ನಮ್ಮ ಚುನಾವಣೆಯ ಗೆಲುವಿನ ರಹಸ್ಯ ನಮ್ಮ ಭೂತ್ ಮಟ್ಟದ ಸಂಘಟನೆ ಮತ್ತು ಅದರಲ್ಲಿ ಶ್ರಮವಹಿಸಿ ಗೆಲ್ಲಿಸುವ ಪ್ರತಿ ಕಾರ್ಯಕರ್ತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.