"ಕ್ಷಮಿಸು ಭಾರತ ಮಾತೆ"; ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ
ಪುಣೆ, ಡಿಸೆಂಬರ್ 14: ಸೇನೆಗೆ ಸೇರಬೇಕೆಂದು ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಯುವತಿಯೊಬ್ಬಳು, ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪಂಡರಾಪುರದಲ್ಲಿ ನಡೆದಿದೆ.
ಮೂವರು ವ್ಯಕ್ತಿಗಳು ಯುವತಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಜಿ ಸಿಬಿಐ ಮುಖ್ಯಸ್ಥ ಅಶ್ವನಿ ಕುಮಾರ್ ದೇಹದ ಬಳಿ ಡೆತ್ ನೋಟ್ ಪತ್ತೆ
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಕೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ "ಕ್ಷಮಿಸು ಭಾರತ ಮಾತೆ" ಎಂದು ಬರೆದಿದ್ದಾಳೆ. ಭಾರತಕ್ಕೆ ಹಾಗೂ ತನ್ನ ಪೋಷಕರಿಗೆ ಕ್ಷಮೆ ಯಾಚಿಸಿದ್ದಾಳೆ. ತನಗೆ ಸೇನೆಗೆ ಸೇರುವ ಮಹದಾಸೆಯಿದ್ದು, ಸೇನೆಯ ಸಮವಸ್ತ್ರ, ಬ್ಯಾಡ್ಜ್ ಹಾಕಿಕೊಳ್ಳಬೇಕೆಂದು ತುಂಬಾ ಆಸೆಯಿತ್ತು. ಆ ಆಸೆ ಕೊನೆಗೂ ಈಡೇರಲಿಲ್ಲ. ನನಗೆ ಮೂವರು ಹಿಂಸೆ ನೀಡುತ್ತಿದ್ದರು. ಈ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಯುವತಿ ಆ ಮೂವರ ಹೆಸರನ್ನು ಬರೆದಿಟ್ಟಿದ್ದಾಳೆ.
ಯುವತಿ ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ನಂತರ ಆಕೆಯ ನೋಟ್ ಬುಕ್ ನಲ್ಲಿ ಡೆತ್ ನೋಟ್ ದೊರೆತಿದೆ.
ಡೆತ್ ನೋಟ್ ಪ್ರಕಾರ, ಮೂವರು ಆರೋಪಿಗಳು ಯುವತಿಯನ್ನು ರೇಗಿಸುತ್ತಾ, ಕೆಟ್ಟ ಭಾಷೆಗಳನ್ನು ಬಳಸುತ್ತಿದ್ದರು. ಅದರಲ್ಲಿ ಒಬ್ಬನು, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಯುವತಿಗೆ ಬೆದರಿಕೆ ಹಾಕಿದ್ದನು ಎಂದು ಪಂಡರಾಪುರ ಗ್ರಾಮೀಣ ಪೊಲೀಸ್ ಠಾಣೆಯ ಪ್ರಶಾಂತ್ ಭಾಸ್ಮೆ ತಿಳಿಸಿದ್ದಾರೆ.