ತಲೆ ಮೇಲೆ ಸಿಲಿಂಡರ್, ಕೊರಳಿಗೆ ಈರುಳ್ಳಿ ಮಾಲೆ, ಕೇಂದ್ರಕ್ಕೆ ಧಿಕ್ಕಾರ!
ಪಾಟ್ನಾ, ಜನವರಿ.02: ಹೊಸ ವರ್ಷದ ಸಂಭ್ರಮದಲ್ಲಿದ್ದ ದೇಶದ ಜನರಿಗೆ ಕೇಂದ್ರ ಸರ್ಕಾರ ಆಘಾತ ನೀಡಿದೆ. ದಿನೇ ದಿನೆ ಬೆಲೆ ಏರಿಕೆಯ ಬಿಸಿಗೆ ಜನರು ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ರೊಚ್ಚಿಗೆದ್ದ ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ.
ಖಾಸಗಿ ಕಂಪನಿಗಳು ಕಳೆದ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 19 ರುಪಾಯಿ ಏರಿಕೆ ಮಾಡಲಾಗಿದೆ. ಈ ಸಂಬಂಧ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೆಷನ್(ಐಒಸಿ) ಆದೇಶ ಹೊರಡಿಸಿದೆ. 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 695 ರುಪಾಯಿಯಿದ್ದ ಬೆಲೆ ಇದೀಗ 714 ರುಪಾಯಿಗೆ ಏರಿಕೆ ಆಗಿದೆ.
ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ತುಸು ಏರಿಕೆ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ಧಾರದಿಂದ ಕೆರಳಿದ ಜನರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಹಾರ ರಾಜಧಾನಿ ಪಾಟ್ನಾದಲ್ಲಿ ಯುವ ರಾಷ್ಟ್ರೀಯ ಜನತಾ ದಳದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ತಲೆ ಮೇಲೆ ಸಿಲಿಂಡರ್ ಹೊತ್ತ ಪ್ರತಿಭಟನಾಕಾರರು:
ಸಿಲಿಂಡರ್ ಬೆಲೆ ಏರಿಕೆಯನ್ನು ವಿರೋಧಿಸಿ ಪಾಟ್ನಾದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ತಲೆ ಮೇಲೆ ಸಿಲಿಂಡರ್ ಹೊತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೂ ಐದು ಬಾರಿ ಸಿಲಿಂಡರ್ ದರದಲ್ಲಿ ಏರಿಕೆ ಮಾಡಲಾಗಿದೆ.
ಇದರ ಜೊತೆಗೆ ರೈಲ್ವೆ ಟಿಕೆಟ್ ದರದಲ್ಲೂ ಏರಿಕೆ ಮಾಡಿದ್ದು, ಸಾಮಾನ್ಯ ಜನರ ಜೇಬಿಗೆ ಸರ್ಕಾರ ಕತ್ತರಿ ಹಾಕಲು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿ ಪಾತ್ರೆ ಹಿಡಿದು, ಕೊರಳಿಗೆ ಈರುಳ್ಳಿ ಮಾಲೆಯನ್ನು ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.