ನನ್ನ ಮಡಿಲಲ್ಲಿ ಆಡಿಲ್ಲವೇ?; ತೇಜಸ್ವಿ ಯಾದವ್ ಅಣಕಿಸಿದ ನಿತೀಶ್ ಕುಮಾರ್
ಪಾಟ್ನಾ, ಫೆಬ್ರವರಿ 24: "ನಾನಲ್ಲಿದ್ದಾಗ ನೀನಿನ್ನೂ ಚಿಕ್ಕವ. ನನ್ನ ಮಡಿಲಲ್ಲಿ ಆಡಿದ್ದು ನೆನಪಿಲ್ಲವೇ?" ಎಂದು ಬಿಹಾರ ಸಿಎಂ ನಿತೀಶ್ ಕುಮಾರ್, ವಿಪಕ್ಷ ನಾಯಕ ತೇಜಸ್ವಿ ಯಾದವ್ಗೆ ವಿಧಾನಸಭೆಯಲ್ಲಿ ಹೀಗೆ ಅಣಕವಾಡಿದ್ದಾರೆ.
ಬುಧವಾರ ರಾಜ್ಯ ಬಜೆಟ್ ಅಧಿವೇಶನದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭವನ್ನು ಪ್ರಸ್ತಾಪಿಸಿ ತೇಜಸ್ವಿ ಯಾದವ್ ಟೀಕೆ ಮಾಡಿದಾಗ ಹೀಗೆ ತಿರುಗುತ್ತರ ನೀಡಿದ್ದಾರೆ.
ಬಿಹಾರ ಸಂಪುಟ ವಿಸ್ತರಣೆ, 17 ಸಚಿವರ ಸೇರ್ಪಡೆ: ಬಿಜೆಪಿಗೆ ಸಂದೇಶ ರವಾನಿಸಿದ ನಿತೀಶ್
ವಿಧಾನಸಭೆಯಲ್ಲಿ ಜೆಡಿಯು ನಾಯಕರ ಭಾಷಣಕ್ಕೆ ತೇಜಸ್ವಿ ಯಾದವ್ ಪದೇ ಪದೇ ಅಡ್ಡಿಪಡಿಸುತ್ತಿದ್ದರು. ಮೂರನೇ ದಿನದ ಬಜೆಟ್ ಅಧಿವೇಶನದಲ್ಲಿ ಜೆಡಿಯು ಸರ್ಕಾರ, ರಾಜ್ಯದಲ್ಲಿ ತನ್ನ ಹದಿನೈದು ವರ್ಷದ ಆಡಳಿತಾಧಿಕಾರದಲ್ಲಿ ಮಾಡಿದ ಸಾಧನೆಗಳ ಕುರಿತು ಹೇಳಿಕೊಳ್ಳುತ್ತಿದ್ದ ಸಂದರ್ಭದಲ್ಲೂ ತೇಜಸ್ವಿ ಯಾದವ್ ಮಧ್ಯೆ ಮಾತನಾಡುತ್ತಿದ್ದರು. ಇದರಿಂದ ಕೋಪಗೊಂಡಂತೆ ಕಂಡ ನಿತೀಶ್ ಕುಮಾರ್ ಹೀಗೆ ಅಣಕವಾಡಿದರು.
"ನೀವು ಆಮೇಲೆ ಏನು ಬೇಕಾದರೂ ಮಾತನಾಡಿ, ಆದರೆ ಈಗೇನು ಹೇಳುತ್ತಿದ್ದೆನೋ ಅದನ್ನು ಕೇಳಿಸಿಕೊಳ್ಳಿ. ನಿಮಗೆ ಅದರಿಂದ ಪ್ರಯೋಜನವಿದೆ" ಎಂದು ತೇಜಸ್ವಿಗೆ ಆಗ್ರಹಿಸಿದರು.
ಜೆಡಿಯು-ಆರ್ಜೆಡಿ ಮೈತ್ರಿಯಾಗಿ ಸರ್ಕಾರ ರಚಿಸಿದ್ದ ಸಂದರ್ಭ, ನಿತೀಶ್ ಕುಮಾರ್ ಸಿಎಂ ಆಗಿ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದರು. ಆದರೆ 2017ರಲ್ಲಿ ಈ ಮೈತ್ರಿ ಮುರಿದುಬಿದ್ದಿತ್ತು.