ಯಾರೀತ ಬಿಹಾರ ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್
ಬಿಹಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಈ ಬಾರಿ ಪೈಪೋಟಿ ನಡೆದಿದ್ದು, ಹಲವಾರು ಶಾಸಕರ ಹೆಸರು ಕೇಳಿ ಬಂದಿತ್ತು. ಕೊನೆಗೂ ಕಥಿಹಾರ್ ಕ್ಷೇತ್ರದ ಶಾಸಕ ತರ್ ಕಿಶೋರ್ ಪ್ರಸಾದ್ ಅವರ ಹೆಸರು ಅಂತಿಮಗೊಂಡಿದೆ. ಉಪ ಮುಖ್ಯಮಂತ್ರಿಯಾಗಿದ್ದ ಸುಶೀಲ್ ಮೋದಿ ಅವರ ಬದಲಿಗೆ ತರ್ ಕಿಶೋರ್ ಅವರು ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ.
ತಮಗೆ ಡಿಸಿಎಂ ಸ್ಥಾನ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಸುಶೀಲ್ ಅವರು ಡಿಸಿಎಂ ಸ್ಥಾನಕ್ಕೆ ತಮ್ಮ ಬದಲಿಗೆ ತರ್ ಕಿಶೋರ್ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. 2005ರಿಂದ ನಿತೀಶ್ ಪರ ನಿಂತು ಡಿಸಿಎಂ ಹುದ್ದೆ ನಿಭಾಯಿಸಿದ್ದ ಸುಶೀಲ್ ಅವರಿಗೆ ಕೇಂದ್ರದಲ್ಲಿ ಸಂಪುಟ ದರ್ಜೆ ಸ್ಥಾನ ಸಿಗುವ ಭರವಸೆ ಸಿಕ್ಕಿದೆ.
ಸುಶೀಲ್ ಮೋದಿಗೆ ದಕ್ಕದ ಡಿಸಿಎಂ ಸ್ಥಾನ, ಕೇಂದ್ರಕ್ಕೆ ಬುಲಾವ್?
ಡಿಸಿಎಂ ಸ್ಥಾನಕ್ಕೆ ಗಯಾ ಕ್ಷೇತ್ರದ ಎಂಟು ಬಾರಿ ಶಾಸಕ ಪ್ರೇಮ್ ಕುಮಾರ್, ದಲಿತ ಎಂಎಲ್ಸಿ ಕಾಮೇಶ್ವರ್ ಚೌಪಾಲ್ ಅವರ ಹೆಸರು ಡಿಸಿಎಂ ಸ್ಥಾನಕ್ಕಾಗಿ ಕೇಳಿ ಬಂದಿತ್ತು, ಆದರೆ, ಅಂತಿಮವಾಗಿ ತರ್ಕಿಶೋರ್ ಪ್ರಸಾದ್, ರೇಣು ದೇವಿ ಸದ್ಯಕ್ಕೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ.
ಹಿಂದುಳಿದ ವರ್ಗದ ಪ್ರತಿನಿಧಿ ತರ್ ಕಿಶೋರ್
ಬಿಹಾರ ರಾಜಕೀಯ ವಲಯದಲ್ಲಿ ಅಬ್ಬರಿಸಿ ಬೊಬ್ಬರಿಯಿರುವ ನಾಯಕ ಪೈಕಿ ಕಾಣಿಸದ ಹೆಸರು ತರ್ ಕಿಶೋರ್ ಪ್ರಸಾದ್ರದ್ದು ಎನ್ನಬಹುದು. ವೈಶ್ಯ ಸಮುದಾಯಕ್ಕೆ ಸೇರುವ ಕಲ್ವಾರ್ ಜಾತಿಯವರಾದ ತರ್ ಕಿಶೋರ್ ಅವರು ಹಿಂದುಳಿದ ವರ್ಗದ ಪ್ರತಿನಿಧಿಯಾಗಿ ನಿತೀಶ್ ಕುಮಾರ್ ಸಂಪುಟ ಸೇರಲಿದ್ದಾರೆ.
ನಾಲ್ಕನೇ ಬಾರಿಗೆ ತರ್ ಕಿಶೋರ್ ಗೆಲುವು ದಾಖಲು
ಬಿಹಾರದ ಕಥಿಹಾರ್ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ತರ್ ಕಿಶೋರ್ ಗೆಲುವು ದಾಖಲಿಸಿದ್ದಾರೆ. 52 ವರ್ಷ ವಯಸ್ಸಿನ ತರ್ ಕಿಶೋರ್ ಅವರು ಮೂಲತಃ ಎಬಿವಿಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರಾಗಿ ಬೆಳೆದವರು.
2005ರಿಂದ ಗೆಲುವು ಸಾಧಿಸಿ ಶಾಸಕ ಸ್ಥಾನ ಉಳಿಸಿಕೊಂಡು ಬಂದಿದ್ದಾರೆ. 10+ 2 ತನಕ ಓದಿರುವ ತರ್ ಕಿಶೋರ್ ಅವರು ವೃತ್ತಿಯಿಂದ ಕೃಷಿಕ ಎಂದು ಅಫಿಡವಿಟ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ ಹೆಚ್ಚಿನ ಸ್ಥಾನ ಸಿಗಲಿದೆ
ಹಾಲಿ ಸಚಿವ ಸಂಪುಟದ 24 ಸದಸ್ಯರ ಪೈಕಿ ಜೆಡಿಯು ಹಾಗೂ ಬಿಜೆಪಿ ಸೇರಿದಂತೆ 10 ಮಂದಿ ಸೋಲು ಕಂಡಿದ್ದಾರೆ. ಸುಶೀಲ್ ಮೋದಿ ಸೇರಿದಂತೆ 6 ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹಾಲಿ ಬಿಹಾರ ಸಚಿವ ಸಂಪುಟದಲ್ಲಿ ಸಿಎಂ ನಿತೀಶ್, ಡಿಸಿಎಂ ಸುಶೀಲ್ ಮೋದಿ ಸೇರಿದಂತೆ 30 ಸಚಿವರಿದ್ದಾರೆ. ಈ ಪೈಕಿ 18 ಜೆಡಿಯು ಹಾಗೂ 12 ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಈ ಬಾರಿಗೆ ಬಿಜೆಪಿ 20-21 ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಇಲ್ಲದಿದ್ದರೆ ಬಿಜೆಪಿ 18, ಜೆಡಿಯು 12 ಎಂದು ನಿಗದಿ ಮಾಡಬಹುದು.
ಬಿಹಾರದ 243 ವಿಧಾನಸಭಾ ಸದಸ್ಯ ಬಲ
ಬಿಹಾರದ 243 ವಿಧಾನಸಭಾ ಸದಸ್ಯ ಬಲವಿದ್ದು, ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳು ಬೇಕು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) 125 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಎನ್ ಡಿಎ ಮೈತ್ರಿಕೂಟಕ್ಕೆ ಸಿಎಂ ಕುರ್ಚಿ ಖಾತ್ರಿಯಾಗಿದ್ದು, ಒಪ್ಪಂದದಂತೆ ನಿತೀಶ್ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ.