Profile: ಬಿಹಾರದ ನೂತನ ಉಪ ಮುಖ್ಯಮಂತ್ರಿ ರೇಣು ದೇವಿ
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು 7ನೇ ಬಾರಿಗೆ ಇಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸತತ ನಾಲ್ಕನೇ ಅವಧಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಬಿಹಾರ ಸಚಿವ ಸಂಪುಟ ಹೊಂದಲಿದೆ.
ನಿತೀಶ್ ಅವರ ನಂತರ ತಾರ್ ಕಿಶೋರ್ ಪ್ರಸಾದ್, ರೇಣು ದೇವಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಇಬ್ಬರು ಕೂಡಾ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಯಾರೀತ ಬಿಹಾರ ಉಪ ಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್
ಜೆಡಿಯು ಕಡಿಮೆ ಸ್ಥಾನ(43)ಗಳನ್ನು ಗಳಿಸಿದ್ದರೂ ಚುನಾವಣಾ ಪೂರ್ವ ಒಪ್ಪಂದದಂತೆ ನಿತೀಶ್ ಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಬಿಜೆಪಿ 74 ಸ್ಥಾನ ಗೆದ್ದಿದ್ದು, ಸಚಿವ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಗಳಿಸಲಿದೆ. ಒಟ್ಟಾರೆ, ಸಿಎಂ ಸೇರಿ 37 ಮಂದಿ ತನಕ ನಿತೀಶ್ ಸಂಪುಟ ಸಂಖ್ಯೆ ಏರಿಸಬಹುದು.
ಬಿಹಾರದ ನೂತನ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇಣು ದೇವಿ ಅವರು ಹಿಂದುಳಿದ ವರ್ಗದ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಬೆಟ್ಟಿಯಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕಿಯಾಗಿದ್ದಾರೆ. ನೊನಿಯಾ ಸಮುದಾಯದ ರೇಣು ಅವರು 2000, 2005, 2010 ಹಾಗೂ 2020 ರಲ್ಲಿ ಗೆಲುವು ಸಾಧಿಸಿದ್ದರೆ, 2015ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮದನ್ ಮೋಹನ್ ವಿರುದ್ಧ ಸೋಲು ಕಂಡಿದ್ದರು.
2010ರಲ್ಲಿ ನಿತೀಶ್ ಕುಮಾರ್ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೆಸ್ಸೆಸ್ ಮೂಲದ ರೇಣು ದೇವಿ ಅವರು ಡಿಸಿಎಂ ತಾರ್ ಕಿಶೋರ್ ಹಾಗೂ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಶ್ವಾಲ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಮೂವರು ವೈಶ್ಯ ಸಮುದಾಯಕ್ಕೆ ಸೇರಿದವರು ಎಂಬುದು ವಿಶೇಷ.
ನಿತೀಶ್ ಸರ್ಕಾರ್ 7.0: ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ?
ನಿತೀಶ್ ಸಚಿವ ಸಂಪುಟದಲ್ಲಿ ಜಾತಿ ಸಮೀಕರಣ ಹೊಂದಾಣಿಕೆ ಮಾಡಲು ಹಿಂದುಳಿದ ವರ್ಗ, ಇಬಿಸಿಗೆ ಸೇರಿದವರನ್ನು ಡಿಸಿಎಂ ಸ್ಥಾನಕ್ಕೇರಿಸಲಾಗಿದೆ.
ಮಾಜಿ ಸಚಿವ ನಂದ ಕಿಶೋರ್ ಯಾದವ್ ಹಾಗೂ ಮಾಜಿ ಉಪ ಸಭಾಪತಿ ಅಮರೇಂದ್ರ ಪ್ರತಾಪ್ ಸಿಂಗ್ ಅವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿ ಬಂದಿದೆ. ಬಿಜೆಪಿಗೆ ಸ್ಪೀಕರ್ ಸ್ಥಾನ ಲಭಿಸಲಿದೆ.