"ಬಿಹಾರದಲ್ಲಿ ರಾಮ ಮಂದಿರಕ್ಕಿಂತ ದೊಡ್ಡ ಸೀತಾದೇವಿ ದೇಗುಲ ನಿರ್ಮಾಣ"
ಪಾಟ್ನಾ, ಅಕ್ಟೋಬರ್.26: ಬಿಹಾರ ವಿಧಾನಸಭಾ ಚುನಾವಣೆ-2020ರಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ದೇವಿ ಮಂದಿರವನ್ನು ಸೀತಾಮರ್ಹಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ ಎಂದು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ಸೀತಾಮರ್ಹಿಯ ಪುನೌರಾ ಧಾಮದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಚಿರಾಗ್ ಪಾಸ್ವಾನ್ ಮಾತನಾಡಿದರು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸೀತಾ ದೇವಿ ದೇಗುಲವನ್ನು ನಿರ್ಮಿಸುತ್ತೇವೆ ಎಂದರು.
ಬಿಹಾರದಲ್ಲಿ ನಿರುದ್ಯೋಗ ನೀಗಿಸುವ ಪಕ್ಷಗಳಿಗೆ ಶಾಕಿಂಗ್ ನ್ಯೂಸ್!
ಸೀತೆ ಇಲ್ಲದೇ ಶ್ರೀರಾಮನು ಕೂಡಾ ಪರಿಪೂರ್ಣ ಎಂದು ಎನಿಸುವುದಿಲ್ಲ. ಹೀಗಾಗಿ ಅಯೋಧ್ಯೆಯ ರಾಮ ಮಂದಿರಕ್ಕೆ ಸರಿ ಸಮನಾದ ಸೀತೆಯ ದೇಗುಲವನ್ನು ಕಟ್ಟಬೇಕು ಎಂದುಕೊಂಡಿದ್ದೇನೆ ಎಂದು ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
ಬಿಜೆಪಿ ಜೊತೆಗೆ ಸರ್ಕಾರ ರಚಿಸುವುದಕ್ಕೆ ಸಿದ್ಧ ಎಂದ ಚಿರಾಗ್
"ಬಿಹಾರದಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಒಂದು ಬಾರಿ ನಮ್ಮ ಸರ್ಕಾರವು ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸೀತಾ ದೇವಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ಹಾಕುತ್ತೇವೆ. ಸದ್ಯ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸುವುದಿಲ್ಲ ಎಂದರೆ ಬಿಜೆಪಿ ಜೊತೆಗೇ ಸೇರಿಕೊಂಡು ಸರ್ಕಾರ ರಚಿಸುವುದಕ್ಕೆ ನಾವು ಸಿದ್ಧರಿದ್ದೇವೆ" ಎಂದು ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮತ್ತು ಸೀತಾಮರ್ಹಿ ಸೀತೆ ದೇಗುಲಕ್ಕೆ ನಂಟು
"ಬಿಹಾರ ಫಸ್ಟ್, ಬಿಹಾರಿ ಫಸ್ಟ್" ದೂರದೃಷ್ಟಿ ಇಟ್ಟುಕೊಂಡಿರುವ ಲೋಕ ಜನಶಕ್ತಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕೂಡಾ ಈ ಅಂಶವನ್ನು ಉಲ್ಲೇಖಿಸಿದೆ. ಅಯೋಧ್ಯೆ ರಾಮ ಮಂದಿರದ ರೀತಿಯಲ್ಲೇ ಸೀತಾಮರ್ಹಿಯಲ್ಲಿ ಸೀತಾ ದೇಗುಲ ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿದೆ. ಅಯೋಧ್ಯೆಯಿಂದ ಸೀತಾಮರ್ಹಿಗೆ ಷಟ್ಪಥ ಹೆದ್ದಾರಿ ನಿರ್ಮಿಸುವ ಗುರಿಯನ್ನು ಕೂಡಾ ಹೊಂದಿದ್ದೇವೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಜೈಲಿಗೆ ಕಳುಹಿಸಲು ಸಿದ್ಧ
ಬಿಹಾರದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಚಿರಾಗ್ ಪಾಸ್ವಾನ್ ಹಲವು ಪ್ರಶ್ನೆಗಳನ್ನು ಹಾಕಿದ್ದರು. ಬಕ್ಸಾರ್ ವಿಧಾನಸಭಾ ಕ್ಷೇತ್ರದ ದಮ್ರೋನ್ ಪ್ರದೇಶದಲ್ಲಿ ಚುನಾವಣಾ ರ್ಯಾಲಿ ನಡೆಸಿದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮದ್ಯ ಮಾರಾಟ ನಿಷೇಧ ಕಾನೂನು ವಿಫಲವಾಗಿದೆ. ಅಕ್ರಮ ಮದ್ಯ ಮಾರಾಟವು ಯತೇಚ್ಛವಾಗಿ ನಡೆಯುತ್ತಿದ್ದು, ಸಿಎಂ ನಿತೀಶ್ ಕುಮಾರ್ ಅವರು ಲಂಚ ಪಡೆದು ಸುಮ್ಮನಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ ಜೆಪಿ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಸಿಎಂ ನಿತೀಶ್ ಕುಮಾರ್ ಹಾಗೂ ಅವರ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದರು.
ಎಲ್ ಜೆಪಿಗೆ ಮತ ನೀಡುವಂತೆ ಚಿರಾಗ್ ಪಾಸ್ವಾನ್ ಮನವಿ
ಬಿಹಾರ ಫಸ್ಟ್, ಬಿಹಾರಿ ಫಸ್ಟ್ ಯೋಜನೆ ಜಾರಿಗೊಳ್ಳಬೇಕಿದ್ದಲ್ಲಿ ಲೋಕ ಜನಶಕ್ತಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ. ನವೆಂಬರ್.10ರಂದು ಎಲ್ಲ ಕ್ಷೇತ್ರಗಳ ಫಲಿತಾಂಶವು ಹೊರ ಬೀಳಲಿದೆ.