10 ಲಕ್ಷ ಉದ್ಯೋಗ ಸೃಷ್ಟಿಯ ಲೆಕ್ಕ ಕೊಟ್ಟ ತೇಜಸ್ವಿ ಯಾದವ್
ಪಾಟ್ನಾ, ಅಕ್ಟೋಬರ್.21: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉದ್ಯೋಗ ಸೃಷ್ಟಿ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ 15 ವರ್ಷಗಳ ಸುದೀರ್ಘ ಆಡಳಿತ ನಡೆಸಿದ ಬಳಿಕವೂ ಉದ್ಯೋಗ ಕಲ್ಪಿಸುವ ಬಗ್ಗೆ ಸಿಎಂ ನಿತೀಶ್ ಕುಮಾರ್ ಅವರಿಗೆ ತಿಳಿಸಿದಿಲ್ಲವೇ ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ತಿರುಗೇಟು ನೀಡಿದ್ದಾರೆ.
ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಸರ್ಕಾರವು ಅಧಿಕಾರಕ್ಕೆ ಬಂದಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವುದಾಗಿ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಆಶ್ವಾಸನೆ ನೀಡಿದ್ದರು. ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಇದು ಅಸಾಧ್ಯ ಎಂದಿದ್ದರು.
ಸಿಎಂ ನಿತೀಶ್ ಕುಮಾರ್ ಎದುರಲ್ಲೇ ಲಾಲೂ ಜಿಂದಾಬಾದ್ ಘೋಷಣೆ!
ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರು ದಿಢೀರನೇ 10 ಲಕ್ಷ ಉದ್ಯೋಗ ಸೃಷ್ಟಿಸುವುದು ಸುಲಭದ ಮಾತಲ್ಲ. ಸರ್ಕಾರಕ್ಕೆ ಆರ್ಥಿಕ ಹೊಡೆತ ಬೀಳುತ್ತದೆ ಎಂಬುದನ್ನು ಲೆಕ್ಕಪತ್ರ ಸಹಿತವಾಗಿ ಚುನಾವಣಾ ಪ್ರಚಾರದ ಭಾಷಣದಲ್ಲಿ ವಿವರಿಸಿದ್ದರು. ಈ ಭಾಷಣದ ಬೆನ್ನಲ್ಲೇ ತೇಜಸ್ವಿ ಯಾದವ್ ಅವರು ಉತ್ತರ ನೀಡಿದ್ದಾರೆ.
ಖಾಲಿ ಇರುವ ಇಲಾಖೆಗಳ ಬಗ್ಗೆ ಮಾಹಿತಿ:
ಬಿಹಾರದಲ್ಲಿ 15 ವರ್ಷ ಅಧಿಕಾರ ನಡೆಸಿದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಈ ಬಗ್ಗೆ ತಿಳಿದಿಲ್ಲ ಎನ್ನುವುದು ನಗು ತರಿಸುವಂತಾ ವಿಚಾರ ಎಂದು ತೇಜಸ್ವಿ ಯಾದವ್ ಹೇಳಿದರು. ರಾಜ್ಯದ ಬೋಧಕ ಮತ್ತು ಬೋಧಕೇತರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗಗಳು ಖಾಲಿಯಾಗಿವೆ. ಅಲ್ಲದೇ ಬಿಹಾರದಲ್ಲಿ ನಡೆದ 60 ಹಗರಣಗಳಲ್ಲಿ 30,000 ಕೋಟಿ ರೂಪಾಯಿ ದೋಚಲಾಗಿದ್ದು, ಆ ಹಣದ ಲೆಕ್ಕ ಕೊಡುವವರೂ ಯಾರು. ಅದೆಲ್ಲ ಜನತೆಗೆ ಸೇರಿದ ಹಣವಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು.
ಎಲ್ಲರಿಗೂ ಉದ್ಯೋಗ ನೀಡುವುದಕ್ಕೆ ಸಾಧ್ಯವಿಲ್ಲವೇ?:
ಕೆಲವು ಜನರಿಗೆ ಯಾವುದೇ ರೀತಿ ಜ್ಞಾನ ಇರುವುದಿಲ್ಲ. ಸುಖಾಸುಮ್ಮನೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ಮತ್ತು ಭರವಸೆಗಳನ್ನು ನೀಡುತ್ತಾ ಹೋಗುತ್ತಿದ್ದಾರೆ. ಉದ್ಯೋಗ ನೀಡುವುದಕ್ಕೆ ಹಣವು ಎಲ್ಲಿಂದ ಬರುತ್ತದೆ. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ನೀಡುವುದು ಹೇಗೆ ಎಂಬ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದೇ ಮಾತನಾಡುತ್ತಿದ್ದಾರೆ. ಒಂದು ವೇಳೆ ನೀವು ಉದ್ಯೋಗ ನೀಡುವಲ್ಲಿ ಸಮರ್ಥರಾಗಿದ್ದರೆ ಕೇವಲ 10 ಲಕ್ಷ ಜನರಿಗಷ್ಟೇ ಏಕೆ ಉದ್ಯೋಗ ನೀಡುತ್ತೀರಿ. ಎಲ್ಲರಿಗೂ ಉದ್ಯೋಗವಕಾಶ ಕಲ್ಪಿಸಿ ಕೊಡಿ ಎಂದ ತೇಜಸ್ವಿ ಯಾದವ್ ರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನೆ ಮಾಡಿದ್ದರು.