ರಕ್ತ ಸಂಬಂಧಿಗಳಿಗಾಗಿ ರಾಜಕಾರಣ ಮಾಡಲ್ಲ: ಸಿಎಂ ನಿತೀಶ್ ಕುಮಾರ್
ಪಾಟ್ನಾ, ಅಕ್ಟೋಬರ್.26: ಬಿಹಾರ ವಿಧಾನಸಭಾ ಚುನಾವಣೆ ರಣಕಣದಲ್ಲಿ ಭರ್ಜರಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ಮೊದಲ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಮುಜಾಫರ್ ಪುರ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಸಿಎಂ ನಿತೀಶ್ ಕುಮಾರ್ ಮಾತನಾಡಿದರು.
ಬೆಲೆ ಏರಿಕೆ ಖಂಡಿಸಿ ಬಿಜೆಪಿಗೆ ತೇಜಸ್ವಿ ಯಾದವ್ ಈರುಳ್ಳಿ ಹಾರ
"ನಮಗೆ ಪ್ರಚಾರದ ಬಗ್ಗೆ ಆಸಕ್ತಿ ತೋರುವುದಿಲ್ಲ. ಬದಲಿಗೆ ಸ್ವಜನಪಕ್ಷಪಾತ ಆಡಳಿತ ನೀಡುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಇಡೀ ಬಿಹಾರವನ್ನು ಒಂದು ಕುಟುಂಬ ಎಂದು ತಿಳಿದುಕೊಂಡು ಕಾಳಜಿ ವಹಿಸುತ್ತೇವೆ. ಆದರೆ ಕೆಲವರಿಗೆ ರಕ್ತ ಸಂಬಂಧಿಗಳನ್ನಷ್ಟೇ ಕುಟುಂಬ ಎಂದು ಪರಿಗಣಿಸಿರುತ್ತಾರೆ ಎನ್ನುವ ಮೂಲಕ ತೇಜಸ್ವಿ ಯಾದವ್ ರನ್ನು ತಿವಿದರು.
ಜ್ಞಾನ ಮತ್ತು ಅನುಭವದ ಕೊರತೆ:
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನನ್ನ ವಿರುದ್ಧ ಮಾತನಾಡುತ್ತಿರುವ ಕೆಲವರಿಗೆ ಜ್ಞಾನವೂ ಇಲ್ಲ, ಅನುಭವವೂ ಇಲ್ಲ ಎಂದು ನಿತೀಶ್ ಕುಮಾರ್ ಕಿಡಿ ಕಾರಿದರು. ಅಲ್ಲದೇ ತಮ್ಮ ವಿರುದ್ಧ ಮಾತನಾಡುವುದಕ್ಕೆ ಬೇರೆಯವರಿಂದ ಸಲಹೆಗಳನ್ನು ಕೇಳಿಕೊಂಡು ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಹಾರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಕ್ರೈಂಗಳ ಪಟ್ಟಿಯಲ್ಲಿ ಬಿಹಾರವು ಇಂದು 23ನೇ ಸ್ಥಾನದಲ್ಲಿರುವುದು ಸರ್ಕಾರಿ ಅಂಕಿ-ಅಂಶಗಳಿಂದಲೇ ದೃಢಪಟ್ಟಿದೆ. ನಾವು ಕಾರ್ಯದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆಯೇ ಹೊರತೂ ಸ್ವಯಂಪ್ರಚಾರದ ಮೇಲೆ ವಿಶ್ವಾಸ ಇಟ್ಟುಕೊಂಡಿಲ್ಲ ಎಂದು ನಿತೀಶ್ ಕುಮಾರ್ ಕಿಡಿ ಕಾರಿದ್ದಾರೆ.
ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ:
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಅಕ್ಟೋಬರ್.28ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮತದಾನ ಪ್ರಕ್ರಿಯೆಗೂ 48 ಗಂಟೆಗಳಿಗೆ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗುತ್ತದೆ. ಮುಂದಿನ 24 ಗಂಟೆಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಮನೆ ಮನೆ ಪ್ರಚಾರ ನಡೆಸಲಿದ್ದು, ಮತದಾರರ ಓಲೈಕೆಗೆ ಕಸರತ್ತು ಮುಂದುವರಿಸಲಿದ್ದಾರೆ.
ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ. ನವೆಂಬರ್.10ರಂದು ಎಲ್ಲಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.