ಹಣಕ್ಕೆ ಒತ್ತಾಯಿಸಿ ಹೆಣವನ್ನೇ ಬ್ಯಾಂಕ್ ನಲ್ಲಿಟ್ಟ ಗ್ರಾಮಸ್ಥರು
ಪಾಟ್ನಾ, ಜನವರಿ 11: ಅನಾರೋಗ್ಯದಿಂದ ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಬ್ಯಾಂಕ್ ಗೆ ತಂದು, ಆತನ ಖಾತೆಯಲ್ಲಿರುವ ಹಣ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ಬಿಹಾರದ ಶಹಜಹಾನ್ ಪುರ ಗ್ರಾಮದಲ್ಲಿ ಕಳೆದ ವಾರ ಮಹೇಶ್ ಯಾದವ್ (55) ಎಂಬುವರು ಸಾವನ್ನಪ್ಪಿದ್ದರು. ಒಬ್ಬಂಟಿ ಜೀವಿಸುತ್ತಿದ್ದ ಅವರು ಸಾವನ್ನಪ್ಪಿದ ಸಂಗತಿ ಅಕ್ಕಪಕ್ಕದವರಿಗೆ ತಡವಾಗಿ ಗಮನಕ್ಕೆ ಬಂದಿದೆ. ಆನಂತರ ಅವರೇ ಆತನ ಶವಸಂಸ್ಕಾರ ನಡೆಸಲು ತೀರ್ಮಾನಿಸಿದ್ದಾರೆ. ಶವಸಂಸ್ಕಾರ ನಡೆಸಲು ಆತ ಮನೆಯಲ್ಲಿ ಹಣ ಇಟ್ಟಿರಬಹುದೇ ಎಂದು ಎಲ್ಲಾ ಕಡೆ ತಡಕಾಡಿದ್ದಾರೆ. ಆದರೆ ಏನೂ ಸಿಗಲಿಲ್ಲ. ಕೊನೆಗೆ ಆತನ ಬ್ಯಾಂಕ್ ಪಾಸ್ ಬುಕ್ ಸಿಕ್ಕಿದ್ದು, ಆತನ ಖಾತೆಯಲ್ಲಿ 1.18 ಲಕ್ಷ ರೂಪಾಯಿ ಇದ್ದದ್ದು ಕಂಡುಬಂದಿದೆ.
ಕಣ್ಣೆದುರೇ ರೈತ ಸತ್ತರೂ ಭಾಷಣ ಮುಂದುವರಿಸಿದ ಬಿಜೆಪಿ ನಾಯಕರು
ಹೀಗಾಗಿ ನೆರೆ ಹೊರೆಯವರು ಯಾದವ್ ಪಾಸ್ ಬುಕ್ ಜೊತೆಗೆ ಆತನ ಶವವನ್ನೂ ಬ್ಯಾಂಕ್ ಗೆ ಎತ್ತಿಕೊಂಡು ಹೋಗಿ ಶವಸಂಸ್ಕಾರಕ್ಕಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆತನ ಹಣ ಕೊಡುವವರೆಗೂ ಹೆಣ ಎತ್ತುವುದಿಲ್ಲ, ಆತನ ಶವಸಂಸ್ಕಾರ ನಡೆಸುವುದಿಲ್ಲ ಎಂದು ಅಲ್ಲೇ ಕುಳಿತಿದ್ದಾರೆ.
ಬ್ಯಾಂಕ್ ಮೇಲೆ ಒತ್ತಡ ಹೆಚ್ಚಾದಂತೆ ಸ್ಥಳೀಯ ಪೊಲೀಸ್ ಠಾಣೆಯ ಒಪ್ಪಂದದ ಮೇರೆಗೆ ಕೊನೆಗೂ ಸ್ವಲ್ಪ ಹಣವನ್ನು ಬ್ಯಾಂಕ್ ಪರವಾಗಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಮರೇಂದರ್ ಕುಮಾರ್ ತಿಳಿಸಿದ್ದಾರೆ. "ಈ ರೀತಿ ಘಟನೆ ನಡೆದಿರುವುದು ಇದೇ ಮೊದಲು. ಯಾದವ್ ಯಾರನ್ನೂ ನಾಮಿನಿ ಮಾಡಿಲ್ಲ. ಹೀಗಾಗಿ ಆತನ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ನೌಕರರಿಂದ ದೇಣಿಗೆ ಸಂಗ್ರಹಿಸಿ ಆತನ ಶವಸಂಸ್ಕಾರಕ್ಕೆ ಹತ್ತು ಸಾವಿರ ಹಣ ನೀಡಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.