ಬಿಹಾರ ಉರಿಯುತ್ತಿದ್ದರೂ ನಿತೀಶ್, ಬಿಜೆಪಿ ಜಗಳಕ್ಕಿಳಿದಿದೆ: ಪ್ರಶಾಂತ್
ಪಾಟ್ನಾ, ಜೂ. 20: ಅಗ್ನಿಪಥ್ ಯೋಜನೆಯ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬಿಜೆಪಿ ಮತ್ತು ಆರ್ಜೆಡಿ ನಡುವಿನ ಜಗಳವನ್ನು ಖಂಡಿಸಿದ್ದಾರೆ. ಬಿಹಾರದ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಿಶೋರ್, "ಬಿಹಾರದ ಜನರು ಅಗ್ನಿಪಥ್ ಯೋಜನೆಯ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ನಡೆಸಬೇಕೆಂದು" ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಸೇನೆಯ ನೇಮಕಾತಿಗಾಗಿ ತಂದಿರುವ ಅಗ್ನಿಪಥ್ ಯೋಜನೆಯ ಅನುಷ್ಠಾನದ ವಿರುದ್ಧದ ಪ್ರತಿಭಟನೆಗಳು ದೇಶದಾದ್ಯಂತ ಭಾರೀ ಹಿಂಸಾಚಾರಕ್ಕೆ ಅದರಲ್ಲೂ ಬಿಹಾರದಲ್ಲಿ ಕಾರಣವಾಗಿವೆ. ಪ್ರತಿಭಟನೆಯಲ್ಲಿ ಹಲವಾರು ರೈಲು ಬೋಗಿಗಳನ್ನು ಸುಟ್ಟುಹಾಕಿದಾಗ ಮತ್ತು ಹಲವಾರು ನಗರಗಳಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದು ರಾಜ್ಯದಲ್ಲಿ ಅಗ್ನಿಪಥ್ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದುಕೊಂಡವು.
ನರೇಶ್ ಪಟೇಲ್, ಪ್ರಶಾಂತ್ ಕಿಶೋರ್: ಗುಜರಾತ್ ಚುನಾವಣೆಗೆ ಕಾಂಗ್ರೆಸ್ ತಂತ್ರ
ಬಿಹಾರದ ಜನರು ಜೆಡಿಯು ಮತ್ತು ಬಿಜೆಪಿ ನಡುವಿನ ಜಗಳದ ಭಾರವನ್ನು ಹೊತ್ತಿದ್ದಾರೆ. ಬಿಹಾರ ಹೊತ್ತಿ ಉರಿಯುತ್ತಿದೆ ಮತ್ತು ಉಭಯ ಪಕ್ಷಗಳ ನಾಯಕರು ಸಮಸ್ಯೆಯನ್ನು ಪರಿಹರಿಸುವ ಬದಲು ಅಗ್ನಿಪಥ್ ವಿರುದ್ಧದ ಪ್ರತಿಭಟನೆಯ ವಿಷಯದಲ್ಲಿ ಪರಸ್ಪರ ಹೋರಾಟದಲ್ಲಿ ನಿರತರಾಗಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
#Agnipath पर आंदोलन होना चाहिए, हिंसा और तोड़फोड़ नहीं।
— Prashant Kishor (@PrashantKishor) June 19, 2022
बिहार की जनता #JDU और #BJP के आपसी तनातनी का ख़ामियाज़ा भुगत रही है। बिहार जल रहा है और दोनों दल के नेता मामले को सुलझाने के बजाए एक दूसरे पर छींटाकशी और आरोप प्रत्यारोप में व्यस्थ हैं।
ಬಿಹಾರ ರಾಜ್ಯದಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳ ಹಿಂಸಾತ್ಮಕ ಪ್ರತಿಭಟನೆಗಳ ಕುರಿತು ಜೆಡಿಯು ಮತ್ತು ಬಿಜೆಪಿ ನಡುವೆ ಮಾತಿನ ಟೀಕಾ ಪ್ರಹಾರಗಳು ಪ್ರಾರಂಭವಾದ ಒಂದು ದಿನದ ನಂತರ ಪ್ರಶಾಂತ್ ಕಿಶೋರ್ ಈ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಬಿಹಾರದಲ್ಲಿ ಬಿಜೆಪಿ ನಾಯಕರ ನಿವಾಸಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಅಸಮರ್ಥತೆಗೆ ನಿತೀಶ್ ಕುಮಾರ್ ಸರ್ಕಾರವನ್ನು ಬಿಜೆಪಿ ಹೊಣೆಗಾರರನ್ನಾಗಿ ಮಾಡಿದೆ. ಅಗ್ನಿಪಥ್ ಯೋಜನೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಿಹಾರದ ಉಪಮುಖ್ಯಮಂತ್ರಿ ರೇಣು ದೇವಿ ಮತ್ತು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು, ಭಾರತೀಯ ಜನತಾ ಪಕ್ಷದಿಂದ ತೀವ್ರ ಟೀಕೆಗಳು ವ್ಯಕ್ತವಾಗಿದೆ. ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಶನಿವಾರ ರಾಜ್ಯ ಸರ್ಕಾರದ ವಿರುದ್ಧ ಟೀಕೆ ನಡೆಸಿದ್ದರು. ಬಿಹಾರ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ತಡೆಯಲು ಅದರ ಪ್ರಯತ್ನವು ಅಸಮರ್ಪಕ ಎಂದು ಆರೋಪಿಸಿದ್ದರು.
ಸಂಜಯ್ ಜೈಸ್ವಾಲ್ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದ ಜೆಡಿಯು ರಾಷ್ಟ್ರೀಯ ಮುಖ್ಯಸ್ಥ ರಾಜೀವ್ ರಂಜನ್ ಅಲಿಯಾಸ್ ಲಾಲನ್ ಸಿಂಗ್, ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಯುವಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದ್ದರಿಂದ ಅವರು ಪ್ರತಿಭಟನೆಗೆ ಇಳಿದಿದ್ದಾರೆ. ಇದಕ್ಕಾಗಿ ಬೇರೆ ರಾಜ್ಯಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ನಾವು ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಈ ಯುವಜನರನ್ನು ಚಿಂತೆಗೀಡು ಮಾಡುತ್ತಿರುವುದನ್ನು ಮತ್ತು ಅವರ ಕಳವಳವನ್ನು ಬಿಜೆಪಿ ಕೇಳಬೇಕು. ಬದಲಾಗಿ ಬಿಜೆಪಿ ಆಡಳಿತದ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
Recommended Video
ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರದಲ್ಲಿ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ರಾಜ್ಯದ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದಲ್ಲದೆ ಬಿಹಾರದ ಹಲವಾರು ನಗರಗಳಲ್ಲಿ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ.