ಬೆಲೆ ಏರಿಕೆ ಖಂಡಿಸಿ ಬಿಜೆಪಿಗೆ ತೇಜಸ್ವಿ ಯಾದವ್ ಈರುಳ್ಳಿ ಹಾರ
ಪಾಟ್ನಾ, ಅಕ್ಟೋಬರ್.26: ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನಕ್ಕೆ 48 ಗಂಟೆ ಬಾಕಿ ಇರುವಂತೆ ಕೇಂದ್ರ ಸರ್ಕಾರದ ವಿರುದ್ಧ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಬೆಲೆ ಏರಿಕೆ ಅಸ್ತ್ರ ಪ್ರಯೋಗಿಸಿದ್ದಾರೆ.
ಬೆಳ್ಳಂಬೆಳಗ್ಗೆ ಮಾರುಕಟ್ಟೆಯಲ್ಲಿ ಈರಳ್ಳಿ, ಆಲೂಗಡ್ಡೆಯಿಂದ ಸಿದ್ಧಪಡಿಸಿದ ಮಾಲೆ ಹಿಡಿದು ನಿಂತ ತೇಜಸ್ವಿ ಯಾದವ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈರುಳ್ಳಿ, ಆಲೂಗಡ್ಡೆ ಸೇರಿದಂತೆ ತರಕಾರಿ ಬೆಲೆ ಗಗನಮುಖಿಯಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗಳಿಂದ ಜನಸಾಮಾನ್ಯರು ಬಳಲುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಬಿಹಾರದಲ್ಲಿ ನಿರುದ್ಯೋಗ ನೀಗಿಸುವ ಪಕ್ಷಗಳಿಗೆ ಶಾಕಿಂಗ್ ನ್ಯೂಸ್!
"ರೈತರು, ಕಾರ್ಮಿಕರು, ಯುವಕರು ಮತ್ತು ವ್ಯಾಪಾರಿಗಳು ತಮ್ಮ ಅಗತ್ಯವಾದ ಆಹಾರವನ್ನು ಪಡೆದುಕೊಳ್ಳಲು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರವು ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಿಗಳನ್ನು ಕೊಲ್ಲುತ್ತಿದೆ. ಬೆಲೆ ಏರಿಕೆ ಇದ್ದಾಗ ಅವರು ಈರುಳ್ಳಿಯಿಂದ ತಯಾರಿಸಿದ ಹೂಮಾಲೆ ಧರಿಸಿ ಸುತ್ತಾಡುತ್ತಾರೆ. ಈಗ, ನಾವು ಅದನ್ನು ಅವರಿಗೆ ನೀಡುತ್ತಿದ್ದೇವೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಈರುಳ್ಳಿ ಬೆಲೆ 100 ಮುಟ್ಟಿದರೂ ನಾಯಕರ ಮೌನ:
ದೇಶದಲ್ಲಿ ಈ ಮೊದಲು ಈರುಳ್ಳಿ ಬೆಲೆಯು ಒಂದು ಕೆಜಿಗೆ 50 ರಿಂದ 60 ರೂಪಾಯಿ ಇದ್ದಾಗಲೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ನಾಯಕರು ಇದೀಗ ಎಲ್ಲಿದ್ದಾರೆ ಎಂದು ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದಾರೆ. ಈರುಳ್ಳಿ ಬೆಲೆ ಕೆಜಿಗೆ 80 ರೂಪಾಯಿಗಿಂತ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ಈರುಳ್ಳಿ ಬೆಲೆ 100 ರೂಪಾಯಿಗೂ ಹೆಚ್ಚಾಗಿದೆ. ಇಷ್ಟಾದರೂ ಆ ನಾಯಕರು ಮೌನವಾಗಿ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ರೈತರು ಬೆಲೆ ಏರಿಕೆ ಹೊಡೆತಕ್ಕೆ ಕುಸಿದು ಹೋಗಿದ್ದಾರೆ. ಯುವಕರು ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮತ್ತೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದಕ್ಕೆ ಶುರು ಮಾಡಿದ್ದಾರೆ ಎಂದು ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.