ತೇಜಸ್ವಿ ಯಾದವ್ ಹೆಸರು ಕೇಳಿ ನಡುಗಿದ ಅಧಿಕಾರಿ: ವೈರಲ್ ವಿಡಿಯೋ
ಪಟ್ನಾ, ಜನವರಿ 21: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಸರ್ಕಾರವನ್ನು ಉರುಳಿಸುವಲ್ಲಿ ಸಫಲರಾಗದಿದ್ದರೂ, ಹೆಚ್ಚೂ ಕಡಿಮೆ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಗಮನ ಸೆಳೆದಿದ್ದರು. ಅವರು ಸೋಲು ಕಂಡಿದ್ದರೂ ಅವರ ಸಾಮರ್ಥ್ಯ ಕಡಿಮೆಯೇನಿಲ್ಲ ಎನ್ನುವುದು ಸಾಬೀತಾಗಿದೆ. ಅವರು ಹಿರಿಯ ಅಧಿಕಾರಿಯೊಬ್ಬರ ಜತೆಗೆ ತಮ್ಮ ಫೋನ್ ಮೂಲಕ ನಡೆಸಿದ ಸಂಭಾಷಣೆಯ ವಿವರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಟ್ನಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ಶಿಕ್ಷಕರಿಗೆ ತೇಜಸ್ವಿ ಯಾದವ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಸ್ಥಳದಲ್ಲಿ ಅಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದರು. ಆದರೆ ತೇಜಸ್ವಿ ಯಾದವ್ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರು ಮತ್ತು ಪಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಜತೆ ಮಾತನಾಡಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಮಾಡಿದ್ದರು.
ಬಿಹಾರಕ್ಕೆ ಶಹನವಾಜ್ ಹುಸೇನ್: ಬಿಜೆಪಿಯ ಹೊಸ ತಂತ್ರ?
ಪ್ರತಿಭಟನಾನಿರತ ಶಿಕ್ಷಕರು ಸುತ್ತುವರೆದಿದ್ದ ಸ್ಥಳದಲ್ಲಿ ಕುಳಿತು ಪಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಜತೆ ಫೋನ್ನಲ್ಲಿ ತೇಜಸ್ವಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಈ ಜನರಿಗೆ ಇಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಏಕೆ?' ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ. ಮುಂದೆ ಓದಿ.
ತೇಜಸ್ವಿಯಿಂದ ಅಧಿಕಾರಿಗೆ ತರಾಟೆ
'ಪ್ರತಿದಿನವೂ ಅವರು ನಿಮ್ಮಿಂದ ಅನುಮತಿ ಕೋರುತ್ತಾ ಇರಬೇಕೇ? ಅಲ್ಲಿ ಲಾಠಿ ಚಾರ್ಜ್ ನಡೆದಿದೆ. ಅವರ ಆಹಾರವನ್ನು ದೂರ ಎಸೆಯಲಾಗಿದೆ. ಅವರನ್ನು ಎಳೆದು ಹಾಕಲಾಗಿದೆ. ಈಗ ಅವರೆಲ್ಲ ಹಂಚಿಹೋಗಿದ್ದಾರೆ. ಅವರಲ್ಲಿ ಕೆಲವರು ಈಗ ನನ್ನೊಂದಿಗೆ ಇದ್ದಾರೆ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾಟ್ಸಾಪ್ನಲ್ಲಿ ನೋಡಿ ಅನುಮತಿ ನೀಡಿ
'ಶಿಕ್ಷಕರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಬಯಸಿದ್ದಾರೆ. ನಿಮಗೆ ಅವರ ಅರ್ಜಿಯನ್ನು ವಾಟ್ಸಾಪ್ನಲ್ಲಿ ಕಳುಹಿಸುತ್ತೇನೆ. ನೀವು ಅವರಿಗೆ ಅನುಮತಿ ನೀಡಿ' ಎಂದು ತಾಕೀತು ಮಾಡಿದ್ದಾರೆ.
ತೇಜಸ್ವಿಗೆ ಸಿಎಂ ಸ್ಥಾನ, ನಿತೀಶ್ಗೆ ಪ್ರಧಾನಿ ಹುದ್ದೆ: ಎನ್ಡಿಎ ಒಕ್ಕೂಟಕ್ಕೆ ಸಂಚಕಾರ?
ಅದನ್ನು ನೋಡುವುದಾಗಿ ಸಿಂಗ್ ಹೇಳಿದಾಗ, ಯಾವಾಗ ಮಾಡುತ್ತೀರಿ? ಎಂದು ತೇಜಸ್ವಿ ಮತ್ತೊಂದು ಪ್ರಶ್ನೆ ಇರಿಸಿದ್ದಾರೆ. ಆಗ ಅಧಿಕಾರಿ ಸಿಟ್ಟಿನಿಂದ, 'ಯಾವಾಗ ಎಂದರೆ ಏನು?ನೀವು ನನ್ನನ್ನೇ ಪ್ರಶ್ನಿಸುತ್ತೀರಾ?' ಎಂದು ಕೇಳಿದ್ದಾರೆ.
ತೇಜಸ್ವಿ ಹೆಸರು ಕೇಳಿ ತಣ್ಣಗಾದ ಅಧಿಕಾರಿ
ಇದರಿಂದ ತೇಜಸ್ವಿ ಕೂಡ ಕೆರಳಿದ್ದಾರೆ. 'ನಾನು ತೇಜಸ್ವಿ ಯಾದವ್ ಮಾತನಾಡುತ್ತಿರುವುದು' ಎಂದು ಹೇಳಿದಾಗ ಅಧಿಕಾರಿ ತಣ್ಣಗಾಗಿದ್ದಾರೆ. ಸ್ವಲ್ಪ ಹೊತ್ತು ಸುಮ್ಮನಾದ ಅಧಿಕಾರಿ ಕೂಡಲೇ ತಮ್ಮ ಧ್ವನಿಯನ್ನು ಬದಲಿಸಿ, 'ಹೌದಾ ಸರ್. ಸರಿ ಸರ್ ಸರ್' ಎಂದು ಹೇಳಿದ್ದಾರೆ. ಅವರ ಧ್ವನಿ ಕೇಳಿದ ಪ್ರತಿಭಟನಾಕಾರರು ಜೋರಾಗಿ ನಕ್ಕಿದ್ದಾರೆ.
'ನಾನು ನಿಮಗೆ ವಾಟ್ಸಾಪ್ ಸಂದೇಶ ಕಳುಹಿಸುತ್ತೇನೆ. ಬೇಗನೆ ಪ್ರತಿಕ್ರಿಯಿಸಿ, ಇಲ್ಲವೇ ಇಡೀ ರಾತ್ರಿ ನಾವು ಇಲ್ಲಿಯೇ ಕೂರಬೇಕಾಗುತ್ತದೆ' ಎಂದು ತೇಜಸ್ವಿ ಕರೆ ಕಟ್ ಮಾಡಿದ್ದಾರೆ.
|
ವಿಡಿಯೋ ಹಂಚಿಕೊಂಡ ವಾಜಪೇಯಿ ಆಪ್ತ
ಈ ಸಂಭಾಷಣೆಯ ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಕಟವರ್ತಿ ಮತ್ತು ಕಾರ್ಯಕರ್ತ ಸುಧೀಂದ್ರ ಕುಲಕರ್ಣಿ, 'ನೀಡಲೇಬೇಕಾದ ವಿಡಿಯೋ. ಭಾರತದಲ್ಲಿ ಅತ್ಯಂತ ಭರವಸೆಯ ನಾಯಕರಲ್ಲಿ ಒಬ್ಬರಾಗಿ ತೇಜಸ್ವಿ ಯಾದವ್ ಏಕೆ ವೇಗವಾಗಿ ಹೊರಹೊಮ್ಮುತ್ತಿದ್ದಾರೆ ಎಂಬುದನ್ನು ತಿಳಿಯಲು ಕೊನೆಯವರೆಗೂ ವಿಡಿಯೋ ನೋಡಿ' ಎಂದು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.