ಬಿಹಾರದಲ್ಲಿ ಉಪ ಮುಖ್ಯಮಂತ್ರಿ ಯಾರಾಗಲಿದ್ದಾರೆ?
ಪಾಟ್ನಾ, ನ.15: ಚುನಾವಣೆಗೂ ಮುನ್ನ ಭರವಸೆ ನೀಡಿದಂತೆ ನಿತೀಶ್ ಕುಮಾರ್ ಅವರನ್ನು ಮತ್ತೊಮ್ಮೆ ಸಿಎಂ ಸ್ಥಾನದಲ್ಲಿ ಎನ್ಡಿಎ ಕೂರಿಸಿದೆ. ಆದರೆ, ಈ ಬಾರಿ ಡಿಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಸಚಿವ ಸಂಪುಟ ಸದಸ್ಯರ ಆಯ್ಕೆ ಕುರಿತಂತೆ ಸುಳಿವು ಬಿಟ್ಟುಕೊಟ್ಟಿಲ್ಲ.
ನಿತೀಶ್ ಅವರಿಗೆ ಸಿಎಂ ಸ್ಥಾನ ನೀಡಿದಂತೆ ಡಿಸಿಎಂ ಆಗಿ ಈ ಬಾರಿಯೂ ಬಿಜೆಪಿಯಿಂದ ಸುಶೀಲ್ ಮೋದಿ ಅವರಿಗೆ ಅವಕಾಶ ಸಿಗಲಿದೆ ಎಂದು ಸುದ್ದಿಯಿತ್ತು. 2005ರಿಂದ ಡಿಸಿಎಂ ಆಗಿ ನಿತೀಶ್ ಜೊತೆ ಒಳ್ಳೆ ಬಾಂಧವ್ಯ ಹೊಂದಿರುವ ಸುಶೀಲ್ ಹೆಸರು ಮುಂಚೂಣಿಯಲ್ಲಿದೆ. ಆದರೆ, ಈ ಬಾರಿ ಹೊಸಬರನ್ನು ಡಿಸಿಎಂ ಸ್ಥಾನದಲ್ಲಿ ಗಯಾ ಕ್ಷೇತ್ರದ ಎಂಟು ಬಾರಿ ಶಾಸಕ ಪ್ರೇಮ್ ಕುಮಾರ್, ದಲಿತ ಎಂಎಲ್ಸಿ ಕಾಮೇಶ್ವರ್ ಚೌಪಾಲ್ ಅವರ ಹೆಸರು ಡಿಸಿಎಂ ಸ್ಥಾನಕ್ಕಾಗಿ ಕೇಳಿ ಬಂದಿದೆ.
ಎನ್ಡಿಎ ಮೈತ್ರಿಕೂಟದಲ್ಲಿರುವ ಬಿಜೆಪಿ, ಜೆಡಿಯು, ಹಿಂದೂಸ್ತಾನ್ ಅವಾಮ್ ಮೋರ್ಚಾ, ವಿಕಾಶ್ ಶೀಲ್ ಇನ್ಸಾನ್ ಪಾರ್ಟಿಯಿಂದ ಯಾರು ಯಾರು ಕ್ಯಾಬಿನೆಟ್ ಸೇರಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.
ಬಿಜೆಪಿಗೆ ಹೆಚ್ಚಿನ ಸಚಿವ ಸ್ಥಾನ ಸಿಗಲಿದೆ
ಹಾಲಿ ಸಚಿವ ಸಂಪುಟದ 24 ಸದಸ್ಯರ ಪೈಕಿ ಜೆಡಿಯು ಹಾಗೂ ಬಿಜೆಪಿ ಸೇರಿದಂತೆ 10 ಮಂದಿ ಸೋಲು ಕಂಡಿದ್ದಾರೆ. ಸುಶೀಲ್ ಮೋದಿ ಸೇರಿದಂತೆ 6 ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹಾಲಿ ಬಿಹಾರ ಸಚಿವ ಸಂಪುಟದಲ್ಲಿ ಸಿಎಂ ನಿತೀಶ್, ಡಿಸಿಎಂ ಸುಶೀಲ್ ಮೋದಿ ಸೇರಿದಂತೆ 30 ಸಚಿವರಿದ್ದಾರೆ. ಈ ಪೈಕಿ 18 ಜೆಡಿಯು ಹಾಗೂ 12 ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಈ ಬಾರಿಗೆ ಬಿಜೆಪಿಗೆ ಹೆಚ್ಚಿನ ಸಚಿವ ಸ್ಥಾನ ಸಿಗಲಿದೆ.
ಹಾಲಿ ಕ್ಯಾಬಿನೆಟ್ಟಿನ 10 ಸಚಿವರಿಗೆ ಸೋಲು
ಜೆಡಿಯುನ ಶೈಲೇಶ್ ಕುಮಾರ್, ಸಂತೋಶ್ ಕುಮಾರ್ ನಿರಾಳ, ಜಯ್ ಕುಮರ್ ಸಿಂಗ್, ಕೃಷ್ಣಾನಂದನ್ ವರ್ಮ, ರಾಮ್ ಸೇವಕ್ ಸಿಂಗ್, ರಾಮೇಶ್ವ ರಿಶಿದೇವ್, ಖುರ್ಷಿದ್ ಅಲಿಯಾಸ್ ಫಿರೋಜ್ ಅಹ್ಮದ್, ಲಕ್ಷ್ಮೇಶ್ವರ್ ರಾಯ್ ಸೋಲು ಕಂಡಿದ್ದಾರೆ. ಬಿಜೆಪಿಯ ಸುರೇಶ್ ಕುಮಾರ್ ಶರ್ಮ, ಬ್ರಿಜ್ ಕುಮಾರ್ ಬಿಂಡ್ ಸೋತಿದ್ದಾರೆ. ಎಚ್ಎಎಂ ಮುಖ್ಯಸ್ಥ, ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಅವರು ಸಚಿವ ಸಂಪುಟ ಸೇರುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ನಿತೀಶ್ ಕುಮಾರ್ ಸಿಎಂ
ಬಿಹಾರದ 243 ವಿಧಾನಸಭಾ ಸದಸ್ಯ ಬಲವಿದ್ದು, ಯಾವದೇ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳು ಬೇಕು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) 125 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಎನ್ ಡಿಎ ಮೈತ್ರಿಕೂಟಕ್ಕೆ ಸಿಎಂ ಕುರ್ಚಿ ಖಾತ್ರಿಯಾಗಿದ್ದು, ಒಪ್ಪಂದದಂತೆ ನಿತೀಶ್ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ.
ಆರ್ ಜೆಡಿಗೆ ಹೆಚ್ಚಿನ ಸ್ಥಾನ ಲಭಿಸಿದೆ
ಈ ನಡುವೆ ಬಿಹಾರ ಚುನಾವಣೆಯಲ್ಲಿ ಅಬ್ಬರಿಸಿದ ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು, ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.
2015ರಲ್ಲಿ ಬಂದಿದ್ದ ತೀರ್ಪು
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.
Recommended Video