ಸುಶಾಂತ್ ಸಿಂಗ್ ಪ್ರಕರಣ: ಶಿವಸೇನಾ ಮುಖಂಡನಿಗೆ ಲೀಗಲ್ ನೊಟೀಸ್
ಪಾಟ್ನಾ, ಆ 12: ಇತ್ತೀಚಿಗೆ ಆತ್ಮಹತ್ಯೆಗೆ ಶರಣಾಗಿದ್ದ, ಬಾಲಿವುಡ್ ನ ಪ್ರತಿಭಾನ್ವಿತ ಕಲಾವಿದ ಸುಶಾಂತ್ ಸಿಂಗ್ ಪ್ರಕರಣದಲ್ಲಿ, ಶಿವಸೇನೆಯ ಮುಖಂಡ, ರಾಜ್ಯಸಭಾ ಸದಸ್ಯರೂ ಆಗಿರುವ ಸಂಜಯ್ ರಾವತ್ ಗೆ ಲೀಗಲ್ ನೊಟೀಸ್ ನೀಡಲಾಗಿದೆ.
ಸುಶಾಂತ್ ಹತ್ತಿರದ ಸಂಬಂಧಿ ಮತ್ತು ಬಿಜೆಪಿ ಶಾಸಕರೂ ಆಗಿರುವ ನೀರಜ್ ಕುಮಾರ್ ಬಬ್ಲು ಲೀಗಲ್ ನೊಟೀಸ್ ಕಳುಹಿಸಿದ್ದು, 48 ಗಂಟೆಯೊಳಗಾಗಿ, ಸಂಜಯ್ ರಾವತ್, ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ, ಕಾನೂನು ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ಸುಶಾಂತ್ ಕೇಸ್: ತಿರುವು ನೀಡುತ್ತಿದೆ ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿಕೆ
ಇತ್ತೀಚೆಗೆ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಜಯ್ ವಿವಾದಕಾರಿ ಕಾಮೆಂಟ್ ಒಂದನ್ನು ಹಾಕಿದ್ದರು. ಅದರಲ್ಲಿ, "ಸುಶಾಂತ್ ತನ್ನ ತಂದೆ ಕೆ.ಕೆ.ಸಿಂಗ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಸುಶಾಂತ್ ತಂದೆ ಎರಡನೇ ಮದುವೆಯಾಗಿರುವುದು ಅವರಿಗೆ ಇಷ್ಟವಿರಲಿಲ್ಲ" ಎಂದು ಸಂಜಯ್ ರಾವತ್, ಕಾಮೆಂಟ್ ಹಾಕಿದ್ದರು.
ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ಸಂಜಯ್ ರಾವತ್ ಅವರ ಕಾಮೆಂಟಿಗೆ, ಸುಶಾಂತ್ ಅವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. ಹಾಗಾಗಿ, ಬಹಿರಂಗ ಕ್ಷಮೆಗೆ ಒತ್ತಾಯಿಸಿದೆ.
"ನಿಜಾಂಶ ಏನೆಂದು ಗೊತ್ತಿಲ್ಲದೇ, ಅದು ಹೇಗೆ ನೀವು ಇಂತಹ ಹೇಳಿಕೆಯನ್ನು ನೀಡಿದ್ದೀರಿ. ಅವಶ್ಯಕತೆ ಬಿದ್ದಲ್ಲಿ, ನಿಮ್ಮ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ"ಎಂದು ನೀರಜ್ ಕುಮಾರ್ ಬಬ್ಲು ಎಚ್ಚರಿಕೆಯನ್ನು ನೀಡಿದ್ದರು.
'ಉದ್ದವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆಯ ಆಜ್ಞೆಯನ್ನು ಪಾಲಿಸಲು ಸಂಜಯ್ ರಾವತ್ ಇಂತಹ ಕ್ಷುಲ್ಲಕ ಹೇಳಿಕೆಯನ್ನು ನೀಡಿದ್ದಾರೆ. ಇಂತಹ ಅಸಂಬದ್ದ ಹೇಳಿಕೆಯಿಂದ ತಮ್ಮ ವರ್ಚಸ್ಸನ್ನು ಸಂಜಯ್ ರಾವತ್ ಕಳೆದುಕೊಳ್ಳುತ್ತಿದ್ದಾರೆ"ಎಂದು ಸುಶಾಂತ್ ಮಾವ ಆರ್.ಸಿ.ಸಿಂಗ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.