ಬಿಹಾರ ಆಶ್ರಮ ತಾಣಗಳಲ್ಲಿನ ರೇಪ್ ಕೇಸ್ ಸಿಬಿಐ ತನಿಖೆಗೆ
ನವದೆಹಲಿ, ನವೆಂಬರ್ 28: ಮುಜಾಫರ್ ಪುರ ಸೇರಿದಂತೆ ಬಿಹಾರದ 17ಕ್ಕೂ ಅಧಿಕ ಆಶ್ರಮ ತಾಣಗಳಲ್ಲಿ ನಡೆದಿರುವ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಗೆ ವಹಿಸಿ ಸುಪ್ರೀಂಕೋರ್ಟ್ ಇಂದು(ನವೆಂಬರ್ 28) ಆದೇಶ ಹೊರಡಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಮಂಗಳವಾರದಂದು ಬಿಹಾರ್ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಪ್ರಕರಣದ ತನಿಖೆ ಹಳ್ಳಹಿಡಿಯುವಂತೆ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತು.
ಈ ಪ್ರಕರಣದಲ್ಲಿ ಎಫ್ಐಆರ್ ಹಾಕುವುದರಿಂದ ಹಿಡಿದು ಸೆಕ್ಷನ್ 377 ಸೇರಿಸುವ ತನಕ ಹಾಗೂ ಪೋಸ್ಕೋ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸುವ ತನಕ ಎಲ್ಲದರಲ್ಲೂ ವಿಳಂಬ ನೀತಿ ಅನುಸರಿಸಲಾಗಿರುವುದೇಕೆ ಎಂದು ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿತ್ತು.
ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವೆಯಾಗಿದ್ದ ಮಂಜು ವರ್ಮಾ ಅವರು ಈ ಪ್ರಮುಖದ ಆರೋಪಿಯಾಗಿದ್ದರು. ಮಂಜು ಅವರು ತಮ್ಮ ಮೇಲೆ ಆರೋಪ ಕೇಳಿ ಬಂದ ಬಳಿಕ, ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ಸುಪ್ರೀಂಕೋರ್ಟ್, ಬಿಹಾರದ ಟಾಪ್ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಇದಾದ ಬಳಿಕ ಮಂಜು ವರ್ಮಾ ಅವರು ಇತ್ತೀಚೆಗೆ ಕೋರ್ಟಿಗೆ ಶರಣಾಗಿದ್ದರು.
ಮಂಜು ವರ್ಮಾ ಅವರ ಪತ್ನಿ ಚಂದ್ರಶೇಖರ್ ಅವರು ಕಳೆದ ತಿಂಗಳು, ಮಂಜುಹಾಲ್ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಮುಜಾಫರ್ ಪುರದ ಆಶ್ರಯ ಕೇಂದ್ರಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳಗಳು ನಡೆದಿದ್ದು, ಬ್ರಜೇಶ್ ಠಾಕೂರ್ ಎಂಬ ವ್ಯಕ್ತಿ ಮುಖ್ಯ ಆರೋಪಿಯಾಗಿದ್ದಾನೆ ಬ್ರಜೇಶ್ ಜತೆಗೆ ಚಂದ್ರಶೇಖರ್ ವರ್ಮಾ ಅವರು ಅನೇಕ ಬಾರಿ ಫೋನ್ ಕರೆ ಮೂಲಕ ಮಾತನಾಡಿರುವುದು ಪತ್ತೆಯಾಗಿದೆ.