ಹೀಗೊಂದು ಗಾಳಿಸುದ್ದಿ: ಕಾಂಗ್ರೆಸ್ ಪಕ್ಷದತ್ತ ಕನ್ಹಯ್ಯ ಕುಮಾರ್ ಚಿತ್ತ
ನವದೆಹಲಿ, ಸೆಪ್ಟೆಂಬರ್ 15: ಕೊರೊನಾ ಸಾಂಕ್ರಾಮಿಕದ ನಡುವೆ ದೇಶದಲ್ಲಿ ಮತ್ತೊಮ್ಮೆ ಚುನಾವಣಾ ಪರ್ವ ಆರಂಭವಾಗುತ್ತಿದ್ದು, ಹಲವು ಮುಖಂಡರು, ನಾಯಕರು, ಸಂಘಟನಾ ಚತುರರು, ರಾಜತಂತ್ರಜ್ಞರಿಗೆ ಭರಪೂರ ಕೆಲಸ ಸಿಗುತ್ತಿದೆ. ಈ ನಡುವೆ ಪಕ್ಷಗಳ ನಡುವಿನ ಮೈತ್ರಿ, ಪಕ್ಷಾಂತರ ಮಾಮೂಲಿ ಎನ್ನಬಹುದು. ಇತ್ತೀಚಿಗೆ ರಾಜಕೀಯ ವಲಯದಲ್ಲಿ ಅದರಲ್ಲೂ ಕಾಂಗ್ರೆಸ್ ಭವನದ ಪಡಸಾಲೆಯಲ್ಲಿ ಗಟ್ಟಿಯಾಗಿ ಕೇಳಿ ಬಂದ ಗುಸುಗುಸು ಸುದ್ದಿಯೆಂದರೆ ಕನ್ಹಯ್ಯ ಕುಮಾರ್ ಬಗ್ಗೆ ಎನ್ನಬಹುದು. ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಮುಖ್ಯಸ್ಥ, ಸಿಪಿಐ ಮುಖಂಡ ಕನ್ಹಯ್ಯ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಕನ್ಹಯ್ಯ ಆಪ್ತರು ಇದೆಲ್ಲ ಗಾಳಿಸುದ್ದಿ, ಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ, ಕಳೆದ ಲೋಕಸಭೆ ಚುನಾವಣೆ ಬಳಿಕ ಅನೇಕ ಬಾರಿ ರಾಹುಲ್ ಗಾಂಧಿ ಜೊತೆ ಕನ್ಹಯ್ಯ ಮಾತುಕತೆ ನಡೆಸಿದ್ದು, ಬಿಹಾರದಲ್ಲಿ ತನ್ನದೇ ಆದ ತಂಡ ಕಟ್ಟಲು ನೆರವು ಕೋರಿದ್ದರು ಎನ್ನಲಾಗಿದೆ. ಬಿಹಾರದಲ್ಲಿ ಕಾಂಗ್ರೆಸ್ ಬಲಗೊಳಿಸಿದ ಬಳಿಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಕನ್ಹಯ್ಯ ಮುಂದಾಗಿದ್ದಾರೆ ಎಂಬ ಸುದ್ದಿಯಿದೆ.
ಆದರೆ, ರಾಷ್ಟ್ರೀಯ ಜನತಾ ದಳ( ಆರ್ ಜೆ ಡಿ ) ಮುಖಂಡ ತೇಜಸ್ವಿ ಯಾದವ್ ಜೊತೆಗೂ ಕಾಂಗ್ರೆಸ್ ಮಾತುಕತೆ ನಡೆಸಿದ್ದು, ಆರ್ ಜೆಡಿ ಹಳೆ ದೋಸ್ತಿಕಳೆದುಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ಆದರೆ, ಮೊದಲು ಕಾಂಗ್ರೆಸ್ ಎಲ್ಲೆಡೆ ಬಲಗೊಳಿಸಿ ನಂತರ ಮಿತ್ರಪಕ್ಷಗಳತ್ತ ನೋಡಲು ರಾಹುಲ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬಿಹಾರದಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿ, ಮಹಾಘಟಬಂಧನದ ನೇತೃತ್ವ ವಹಿಸಿದ್ದ ಕಾಂಗ್ರೆಸ್ 19 ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿತ್ತು. ಮಿತ್ರಪಕ್ಷಗಳನ್ನು ಗೆಲುವಿನತ್ತ ಕೊಂಡೊಯ್ಯುವಲ್ಲೂ ವಿಫಲವಾಗಿತ್ತು.
ಆದರೆ, ಬಿಹಾರ ಕಾಂಗ್ರೆಸ್ ಘಟಕದಲ್ಲಿ ನೇತೃತ್ವ ವಹಿಸಲು ಭಾರಿ ಲಾಬಿ ನಡೆಯುತ್ತಿದ್ದು, ರಾಜ್ಯ ಉಸ್ತುವಾರಿ ಭಕ್ತ ಚರಣ್ ದಾಸ್ ಅವರು ರಾಜೇಶ್ ರಾಮ್ ಹೆಸರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದಾರೆ.
ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ಮದನ್ ಮೋಹನ್ ಝಾ ರಾಜೀನಾಮೆ ನೀಡಿದ್ದಾರೆ. ಮೈತ್ರಿಕೂಟದಿಂದಲೂ ಕಾಂಗ್ರೆಸ್ ಮೇಲೆ ಸೋಲಿನ ಹೊಣೆ ಹೊತ್ತುಕೊಳ್ಳುವಂತೆ ಮಾಡಲಾಯಿತು. ಹೀಗಾಗಿ, ಬಿಹಾರದಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳುವಂತೆ ಮಾಡಿ ಎಂದು ರಾಹುಲ್ ಹೇಳಿದ್ದಾರೆ.
2015ರಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಅವರು 2018ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿ, ಸಿಪಿ ಐ ಸದಸ್ಯರಾದರು, 2019ರಲ್ಲಿ ಬೇಗುಸರಾಯ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಬಯಸಿ ಸ್ಪರ್ಧಿಸಿದರು. ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಕನ್ಹಯ್ಯಾ ಸ್ಪರ್ಧೆಗೆ ಬೆಂಬಲ ನೀಡಿದ್ದರು. ಆದರೆ, ಕನ್ಹಯ್ಯಾ ಸ್ಪರ್ಧೆ ಕುರಿತು ಸಹಮತವಿಲ್ಲದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಅವರಿಗೆ ಟಿಕೆಟ್ ಸಿಗದಂತೆ ಆಯ್ಕೆಗಳಿಗೆ ಅಡ್ಡಿಪಡಿಸಿದ್ದರು. ಬಿಜೆಪಿಯ ಗಿರಿರಾಜ್ ಸಿಂಗ್ ಅವರ ಎದುರು ಸ್ಪರ್ಧಿಸುವಷ್ಟು ಕನ್ಹಯ್ಯಾ ಕುಮಾರ್ ಸಮರ್ಥರಾಗಿಲ್ಲ. ಗಿರಿರಾಜ್ ಸಿಂಗ್ ಅವರಿಗೆ ಇರುವ ಜಾತಿ ಬಲ ಕನ್ಹಯ್ಯಾಗೆ ಸಿಗಲಾರದು ಎಂದು ವಾದಿಸಿದ್ದರು.
2016ರಲ್ಲಿ ಜೆಎನ್ಯುನಲ್ಲಿ ಅಫ್ಜಲ್ ಗುರು ಸಾವಿನ ಸ್ಮರಣಾರ್ಥ ಫೆಬ್ರವರಿ 9, 2016ರಂದು ನಡೆದ ಕಾರ್ಯಕ್ರಮದ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್ಯು ಮಾಜಿ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅಖಿಬ್ ಹುಸ್ಸೇನ್ , ಮುಜೀಬ್ ಹುಸ್ಸೇನ್, ಮುನೀಬ್ ಹುಸ್ಸೇನ್, ಉಮರ್ ಗುಲ್, ರಯೀಬ್, ಬಸೀರ್ ಭಟ್ ಮತ್ತು ಬಶರತ್ ವಿರುದ್ಧ ಇಂದು ಚಾರ್ಜ್ಶೀಟ್ ದಾಖಲಿಸಲಾಗಿತ್ತು.
ಸಂಸತ್ ಭವನದ ಮೇಲೆ ದಾಳಿ ನಡೆಸಿದ ಪ್ರಕರಣದ ಪ್ರಮುಖ ರೂವಾರಿ ಅಫ್ಜಲ್ ಗುರುನನ್ನು ನೇಣಿಗೆ ಏರಿಸಿದ್ದನ್ನು ಖಂಡಿಸಿ ಈ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ನಲ್ಲಿ ವಿರೋಧಿಸಿದ್ದರು. ಆ ನಂತರ ಇವರನ್ನು ಬಂಧಿಸಿದ್ದು ದೇಶಾದ್ಯಂತ ದೊಡ್ಡ ವಿವಾದ ಸೃಷ್ಟಿಸಿತ್ತು. ಪೊಲೀಸರು ಆಡಳಿತಾರೂಢ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷ ಆರೋಪಿಸಿತ್ತು.