ತೇಜಸ್ವಿಗೆ ಸಿಎಂ ಸ್ಥಾನ, ನಿತೀಶ್ಗೆ ಪ್ರಧಾನಿ ಹುದ್ದೆ: ಎನ್ಡಿಎ ಒಕ್ಕೂಟಕ್ಕೆ ಸಂಚಕಾರ?
ಪಟ್ನಾ, ಡಿಸೆಂಬರ್ 29: ಅರುಣಾಚಲ ಪ್ರದೇಶದಲ್ಲಿ ಕಳೆದ ವಾರ ಜೆಡಿಯುದ ಆರು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಿಹಾರದಲ್ಲಿನ ಎನ್ಡಿಎ ಮೈತ್ರಿಕೂಟದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದೆ. ಜೆಡಿಯು ಶಾಸಕರಿಗೆ ಬಿಜೆಪಿ ಗಾಳ ಹಾಕಿರುವುದರಿಂದ ಬಿಹಾರದಲ್ಲಿನ ಮೈತ್ರಿ ಸರ್ಕಾರದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಲಾಭ ಪಡೆದುಕೊಳ್ಳಲು ಆರ್ಜೆಡಿ ಮುಂದಾಗಿದೆ.
ಬಿಹಾರದ ಮುಖ್ಯಮಂತ್ರಿಯನ್ನಾಗಿ ತೇಜಸ್ವಿ ಯಾದವ್ ಅವರನ್ನು ಬೆಂಬಲಿಸಲು ನಿತೀಶ್ ಕುಮಾರ್ ಅವರು ಸಿದ್ಧರಿರುವುದಾದರೆ 2024ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬೆಂಬಲಿಸಲು ವಿರೋಧಪಕ್ಷಗಳು ಆಸಕ್ತಿ ತೋರಿಸಲಿವೆ ಎಂದು ಆರ್ಜೆಡಿ ಹೊಸ ಆಫರ್ ಮುಂದಿಟ್ಟಿದೆ.
ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿರಲಿಲ್ಲ: ನಿತೀಶ್ ಕುಮಾರ್
ಆರ್ಜೆಡಿಯ ಹಿರಿಯ ನಾಯಕ ಮತ್ತು ಬಿಹಾರ ವಿಧಾನಸಭೆಯ ಮಾಜಿ ಸ್ಪೀಕರ್ ಉದಯ್ ನಾರಾಯಣ್ ಚೌಧರಿ ಅವರು ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರಿಗೆ ಈ ಆಫರ್ ನೀಡಿದ್ದಾರೆ. ಮುಂದೆ ಓದಿ.
ನಿತೀಶ್ ಪ್ರಧಾನಿ ಅಭ್ಯರ್ಥಿ
'ನಿತೀಶ್ ಕುಮಾರ್ ಅವರು ರಾಷ್ಟ್ರ ರಾಜಕಾರಣಕ್ಕೆ ಸ್ಥಳಾಂತರವಾಗಲು ಮತ್ತು ತೇಜಸ್ವಿ ಯಾದವ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮಾಡುವುದನ್ನು ಪರಿಗಣಿಸಬೇಕು. ನಮ್ಮ ರಾಷ್ಟ್ರೀಯ ವೇದಿಕೆಯ ವಿರೋಧಪಕ್ಷದ ನಾಯಕರನ್ನಾಗಿ ಅವರನ್ನು ಆಯ್ಕೆ ಮಾಡುತ್ತೇವೆ ಮತ್ತು 2024ರ ಚುನಾವಣೆಯಲ್ಲಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಪರಿಗಣಿಸುತ್ತೇವೆ' ಎಂದು ಉದಯ್ ನಾರಾಯಣ್ ಚೌಧರಿ ಹೇಳಿದ್ದಾರೆ.
ಆರ್ಜೆಡಿ ಅಧಿಕಾರ ದಾಹ
'ಅಧಿಕಾರ ಪಡೆದುಕೊಳ್ಳಲು ಯಾವ ಹಂತಕ್ಕೂ ಹೋಗುತ್ತೇವೆ ಎಂಬುದನ್ನು ಆರ್ಜೆಡಿ ಮತ್ತೊಮ್ಮೆ ಸಾಬೀತುಪಡಿಸಿದೆ. ತೇಜಸ್ವಿ ಯಾದವ್ ಅವರ ಪರವಾಗಿ ಉದಯ್ ನಾರಾಯಣ್ ಈ ಆಫರ್ ನೀಡಿದ್ದಾರೆ. ಅಧಿಕಾರ ಪಡೆದುಕೊಳ್ಳಲು ಆರ್ಜೆಡಿ ಹಪಹಪಿಸುತ್ತಿದೆ. ಬಿಜೆಪಿ ಮತ್ತು ಜೆಡಿಯು ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಮುಂದಿನ ಐದು ವರ್ಷಗಳವರೆಗೂ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಆರ್ಜೆಡಿ ಒಡ್ಡುವ ಯಾವುದೇ ಆಮಿಷಗಳಿಗೆ ಜೆಡಿಯು ಬೀಳುವುದಿಲ್ಲ' ಎಂದು ಜೆಡಿಯು ವಕ್ತಾರ ರಾಜೀವ್ ರಂಜನ್ ತಿರುಗೇಟು ನೀಡಿದ್ದಾರೆ.
ನಿತೀಶ್ಗೆ ಆಘಾತ: ಜೆಡಿಯುದ ಆರು ಶಾಸಕರು ಬಿಜೆಪಿಗೆ
ಬಿಜೆಪಿಯಿಂದ ನಿತೀಶ್ಗೆ ಒತ್ತಡ
ಇತ್ತೀಚಿನ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದೆ. ಜನತಾ ದಳ ಸಂಯುಕ್ತ ಪಕ್ಷಕ್ಕಿಂತಲೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರಿಂದ ನಿತೀಶ್ ಕುಮಾರ್ ತನ್ನ ಮಿತ್ರಪಕ್ಷ ಬಿಜೆಪಿಯಿಂದ ಅತೀವವಾದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಅರುಣಾಚಲ ಪ್ರದೇಶದಲ್ಲಿ ಜೆಡಿಯುದ ಆರು ಶಾಸಕರನ್ನು ಸೆಳೆದು ಬಿಜೆಪಿ ಸೇರಿಕೊಳ್ಳುವಂತೆ ಮಾಡಿರುವುದು ಕೂಡ ಅದರ ಅಸಮಾಧಾನ ಹೆಚ್ಚಿಸಿದೆ ಎಂದು ಚೌಧರಿ ತಿಳಿಸಿದ್ದಾರೆ.
ನಾವು ಬೆನ್ನಿಗೆ ಇರಿಯುವುದಿಲ್ಲ
ಅರುಣಾಚಲ ಪ್ರದೇಶದಲ್ಲಿನ ರಾಜಕೀಯ ಬೆಳವಣಿಗೆಯು ಬಿಹಾರ ಎನ್ಡಿಎ ಸರ್ಕಾರದ ಮೇಲೆ ದೊಡ್ಡ ಪರಿಣಾಮ ಬೀರುವ ಸಂಭವವಿದೆ. ಇತ್ತೀಚೆಗೆ ನಡೆದ ಜೆಡಿಯು ಸಭೆಯಲ್ಲಿ ಜೆಡಿಯುದ ನೂತನ ರಾಷ್ಟ್ರೀಯ ಅಧ್ಯಕ್ಷ ಆರ್ಸಿಪಿ ಸಿಂಗ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಾವು ಯಾರಿಗೂ ಬೆನ್ನಿಗೆ ಇರಿಯುವುದಿಲ್ಲ ಮತ್ತು ಅದನ್ನು ನಮಗೆ ಮಾಡಲು ಕೂಡ ಬಿಡುವುದಿಲ್ಲ. ನಮ್ಮ ಮಿತ್ರಪಕ್ಷಗಳಿಗೆ ನಾವು ಮೋಸ ಮಾಡುವುದಿಲ್ಲ ಮತ್ತು ಸಂಚು ರೂಪಿಸುವುದೂ ಇಲ್ಲ ಎಂದು ಹೇಳಿದ್ದರು.
ಜೆಡಿಯು ನೂತನ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಆಪ್ತ ಆರ್ಸಿಪಿ ಸಿಂಗ್ ಆಯ್ಕೆ