163 + 80 ಆರ್ ಜೆ ಡಿ-ಕಾಂಗ್ರೆಸ್ ಹೊಸ ಸೂತ್ರದಡಿಯಲ್ಲಿ ಕಣಕ್ಕೆ
ಪಾಟ್ನಾ, ಆ. 13: ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 29ಕ್ಕೆ ಅಂತ್ಯಗೊಳ್ಳಲಿದೆ. ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಈ ನಡುವೆ ಮಹಾಘಟಬಂಧನ್ ಸೀಟು ಹಂಚಿಕೆ ಬಗ್ಗೆ ಚರ್ಚೆ ಆರಂಭಿಸಿದೆ.
ಮುಂಬರುವ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಸತತ ನಾಲ್ಕನೆಯ ಅವಧಿಯಲ್ಲಿ ಗದ್ದುಗೆಗೆ ಏರಲು ನಿತೀಶ್ ಕುಮಾರ್ ಸಿದ್ಧತೆ ನಡೆಸಿದ್ದಾರೆ. ಅವರ ನಾಗಾಲೋಟಕ್ಕೆ ಕಡಿವಾಣ ಹಾಕಲು ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಮಗ ತೇಜಸ್ವಿ ಯಾದವ್ ತುದಿಗಾಲಲ್ಲಿ ನಿಂತಿದ್ದಾರೆ.
ಬಿಹಾರ ಚುನಾವಣೆ: ನಿತೀಶ್ ಹಣೆಬರಹ ಬದಲಿಸಬಹುದಾದ ಐದು ಅಂಶಗಳಿವು
ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು, ಆರ್ ಜೆ ಡಿ 81 ಹಾಗೂ ಕಾಂಗ್ರೆಸ್ 27 ಸ್ಥಾನ ಹೊಂದಿವೆ. ಈಗ 163 + 80 ಸೂತ್ರದಡಿಯಲ್ಲಿ ಸೀಟು ಹಂಚಿಕೆ ಸರಿ ಹೊಂದಿಸಲು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ(ವಿಐಪಿ) ಜೊತೆಗೆ ಸಿಪಿಐ -ಎಂಎಲ್ ಜೊತೆಗೆ ಆರ್ ಜೆಡಿ ಮಾತುಕತೆ ನಡೆಸಿದೆ. ಜೊತೆಗೆ ಬಹುಜನ ಸಮಾಜವಾದಿ ಪಾರ್ಟಿ ಕೂಡಾ ಕೈಜೋಡಿಸಲಿದೆ. ಇನ್ನೊಂದೆಡೆ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ಹಿಂದೂಸ್ತಾನಿ ಆವಾಯಂ ಪಾರ್ಟಿ(ಸೆಕ್ಯುಲರ್) ಜೊತೆಗೆ ಸಿಪಿಐ ಜೊತೆ ಕಾಂಗ್ರೆಸ್ ಮಾತುಕತೆ ನಡೆಸಿ 80 ಸ್ಥಾನ ಸರಿ ಹೊಂದಿಸಲಿದೆ.
ಹೆಚ್ಚು ಸಣ್ಣ ಪುಟ್ಟ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವುದು ಎರಡು ದೊಡ್ಡ ಪಕ್ಷಗಳ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಇನ್ನೂ 10 ಸ್ಥಾನಗಳನ್ನು ಪಡೆದುಕೊಳ್ಳಬಹುದಾಗಿತ್ತು ಎಂದು ಎಐಸಿಸಿ ಬಿಹಾರ ಉಸ್ತುವಾರಿ ಶಕ್ತಿ ಸಿಂಗ್ ಗೋಹಿಲ್ ಹೇಳಿದ್ದಾರೆ.
ಎಡಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಮಹಾ ಘಟಬಂಧನ್ ಇನ್ನಷ್ಟು ವಿಸ್ತಾರಗೊಂಡಿದೆ. ಸೀಟುಗಳ ಹಂಚಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ. 163 + 80 ಆರ್ ಜೆ ಡಿ-ಕಾಂಗ್ರೆಸ್ ಹೊಸ ಸೂತ್ರದಡಿಯಲ್ಲಿ ಚುನಾವಣೆ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ ಎಂದು ಆರ್ ಜೆ ಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
ಆರ್ ಎಲ್ ಎಸ್ ಪಿ, ಎಚ್ಎಎಂ(ಸೆಕ್ಯುಲರ್) ಹಾಗೂ ಎಡಪಕ್ಷಗಳನ್ನು ಸಂಭಾಳಿಸುವುದು ಆರ್ ಜೆ ಡಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಕಷ್ಟಕರವಾಗಬಹುದು ಎಂದು ವಿಶ್ಲೇಷಿಸಲಾಗಿದೆ.