ಭಾರತೀಯ ರೈಲ್ವೆ ಪರೀಕ್ಷೆಯಲ್ಲಿ ಹೆಬ್ಬೆರಳು ಹೇಳಿದ ಸತ್ಯ; ನಕಲಿ ಅಭ್ಯರ್ಥಿ ಅರೆಸ್ಟ್!
ವಡೋದರಾ, ಆಗಸ್ಟ್ 24: ವಡೋದರಾದಲ್ಲಿ ನಡೆದ ರೈಲ್ವೆ ನೇಮಕಾತಿ ಮಂಡಳಿ RCC ಲೆವೆಲ್-1 ಪರೀಕ್ಷೆಗೆ ಅಭ್ಯರ್ಥಿಯೊಬ್ಬರು ತಮ್ಮ ಪರವಾಗಿ ಪರೀಕ್ಷೆಗೆ ಹಾಜರಾಗಲು "ಡಮ್ಮಿ ಅಭ್ಯರ್ಥಿ"ಯನ್ನು ನೇಮಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಹೀಗೆ ನೇಮಕಗೊಂಡ ವ್ಯಕ್ತಿಯು ಬಯೋಮೆಟ್ರಿಕ್ ಪರಿಶೀಲನೆಗಳನ್ನು ಪಾಸ್ ಆಗಬೇಕಾಗುತ್ತದೆ ಎಂಬ ಕಾರಣಕ್ಕೆ ಅವರ ಎಡಗೈ ಹೆಬ್ಬೆರಳಿನ ಚರ್ಮವನ್ನು ಸುಲಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಕಲಿ ಅಭ್ಯರ್ಥಿಯನ್ನು ನೇಮಿಸಿಕೊಂಡ ವ್ಯಕ್ತಿಯನ್ನು ಮನೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ಪರವಾಗಿ ಪರೀಕ್ಷೆಗೆ ಹಾಜರಾಗಲು ತೆರಳಿದ ವ್ಯಕ್ತಿಯನ್ನು ರಾಜ್ಯಗುರು ಗುಪ್ತಾ ಎಂದು ಗೊತ್ತಾಗಿದೆ.
ಖಾನ್ ಸರ್ ಹಾಗೂ ರೈಲ್ವೆ ಪ್ರತಿಭಟನಾಕಾರರ ಮೇಲಿನ ಕೇಸ್ ವಾಪಸ್ ಪಡೆಯಿರಿ
ಈ ಇಬ್ಬರೂ ಅಭ್ಯರ್ಥಿಗಳು ಬಿಹಾರ ಮೂಲದವರು ಎಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಲಕ್ಷ್ಮೀಪುರ ಪೊಲೀಸರು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದೇ ವೇಳೆ ಕೋರ್ಟ್ ಆರೋಪಿಗಳನ್ನು ಮೂರು ದಿನ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಸ್ಯಾನಿಟೈಸರ್ ಹಚ್ಚಿಕೊಂಡಾಗ ಬಣ್ಣ ಬಯಲು:
ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪರೀಕ್ಷೆಗಳ ಕೇಂದ್ರದಲ್ಲಿ ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅಸಲಿ ಸತ್ಯ ಗೊತ್ತಾಗಿದೆ. ಎಡಗೈ ಹೆಬ್ಬರಳಿನ ಚರ್ಮದ ಪದರವು ಕಳಚಿಕೊಂಡಿದ್ದು, ಪೊಲೀಸರ ಅನುಮಾನವನ್ನು ಹೆಚ್ಚಿಸಿತು. ಈ ವೇಳೆ ವಿಚಾರಣೆ ನಡೆಸಿದಾಗ ಅಭ್ಯರ್ಥಿಯೇ ನಕಲಿ ಎಂಬುದು ಗೊತ್ತಾಯಿತು.
ಆಗಸ್ಟ್ 22 ರಂದು ನಿಗದಿಯಾಗಿದ್ದ ಪರೀಕ್ಷೆ:
ಕಳೆದ ಆಗಸ್ಟ್ 22ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ನಡೆಸುವ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಆಪರೇಷನ್ ಎಕ್ಸಿಕ್ಯೂಟಿವ್, ಟಿಸಿಎಸ್ ಕೇಂದ್ರದಿಂದ ಒಟ್ಟು 645 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
"ಆಗಸ್ಟ್ 22ರಂದು ಸಂಜೆ 5 ರಿಂದ 6.30 ರವರೆಗೆ ನಿಗದಿಪಡಿಸಲಾದ ಪರೀಕ್ಷೆಯ ಮೂರನೇ ಪಾಳಿಯಲ್ಲಿ, ಅಭ್ಯರ್ಥಿಗಳನ್ನು ನಾಲ್ಕನೇ ಮಹಡಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಲ್ಯಾಬ್ಗಳನ್ನು ನಿಗದಿಪಡಿಸಲಾಗಿದ್ದು, ಎಡ ಹೆಬ್ಬೆರಳಿನ ಗುರುತನ್ನು ಬಳಸಿಕೊಂಡು ಆಧಾರ್ ಕಾರ್ಡ್ ಡೇಟಾವನ್ನು ಬಯೋಮೆಟ್ರಿಕ್ ಪರಿಶೀಲನೆಗೆ ಒಳಪಡಿಸಲಾಯಿತು.
ಎರಡನೇ ಸುತ್ತಿನ ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಮನೀಶ್ ಕುಮಾರ್ ಹೆಬ್ಬೆರಳಿನ ಗುರುತು ಎರಡು ಬಾರಿ ಪ್ರಯತ್ನಿಸಿದರೂ ಯಶಸ್ವಿ ಆಗಿರಲಿಲ್ಲ. ಇದು ಇನ್ವಿಜಿಲೇಟರ್ ಅಖಿಲೇಂದ್ರ ಸಿಂಗ್ ಅನುಮಾನಕ್ಕೆ ಕಾರಣವಾಯಿತು ಎಂದು ಎಫ್ಐಆರ್ ಹೇಳುತ್ತದೆ.
"ಈ ಪರಿಶೀಲನೆಯನ್ನು ಮರುಪ್ರಯತ್ನಿಸುವ ಸಲುವಾಗಿ ಹೆಬ್ಬೆರಳನ್ನು ಸ್ವಚ್ಛಗೊಳಿಸಲಾಯಿತು. ಸ್ಯಾನಿಟೈಸರ್ ಅನ್ನು ಬಳಸಿದ ಸಂದರ್ಭದಲ್ಲಿ ವ್ಯಕ್ತಿಯ ಹೆಬ್ಬೆರಳಿನ ಮೇಲೆ ಚರ್ಮದ ಪದರ ಅಂಟಿಕೊಂಡಿರುವುದು ಪತ್ತೆ ಆಯಿತು. ಅದಕ್ಕಾಗಿ ಎರಡನೇ ಬಯೋಮೆಟ್ರಿಕ್ ಪರಿಶೀಲನೆಯನ್ನು ಎಷ್ಟು ಬಾರಿ ಪ್ರಯತ್ನಿಸಿದರೂ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ,"ಎಂದು ಎಫ್ಐಆರ್ ನಲ್ಲಿ ಸೇರಿಸಲಾಗಿದೆ.
ಆರೋಪಿ ಗುಪ್ತಾನನ್ನು ಪೊಲೀಸರಿಗೆ ಒಪ್ಪಿಸಿದ ಸಿಬ್ಬಂದಿ:
ಬಯೋಮೆಟ್ರಿಕ್ ವೇಳೆ ಅಸಲಿ ಕಥೆ ಗೊತ್ತಾಗುತ್ತಿದ್ದಂತೆ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಬಿಹಾರದ ಮುಂಗೇರ್ ತಾಲೂಕಿನ ಬೇಲಾಡಿ ಗ್ರಾಮದ ನಿವಾಸಿ ಆಗಿರುವ ಆರೋಪಿ ರಾಜ್ಯಗುರು ಗುಪ್ತಾ ಅನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಈತನನ್ನು ರೈಲ್ವೆ ನೇಮಕಾತಿಗೆ ಹಾಜರಾಗಲು ಕುಮಾರ್ ಎಂಬಾತ "ಡಮ್ಮಿ ಅಭ್ಯರ್ಥಿ" ಆಗಿ ನೇಮಿಸಿಕೊಂಡಿರುವುದಾಗಿ ಗುಪ್ತಾ ಒಪ್ಪಿಕೊಂಡನು.
ಈ ಸಂಬಂಧ ಲಕ್ಷ್ಮಿಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪೂಜಾ ತಿವಾರಿ ಮಾತನಾಡಿದ್ದು, "ಆಗಸ್ಟ್ 19 ರಂದು ಮನೀಶ್ ಕುಮಾರ್ ತನ್ನ ಎಡಗೈ ಹೆಬ್ಬೆರಳಿನ ಚರ್ಮದ ದಪ್ಪ ಪದರವನ್ನು ಕತ್ತರಿಸಿದ್ದಾನೆ ಎಂದು ಆರೋಪಿ ನಮಗೆ ತಿಳಿಸಿದ್ದಾರೆ ಎಂದರು. ಗುಪ್ತಾ ಜೊತೆಯಲ್ಲಿ ಅವರು ಪರೀಕ್ಷಾ ಕೇಂದ್ರಕ್ಕೆ ಬರಲು ವಡೋದರಾಗೆ ರೈಲು ಹತ್ತಿದರು. ಕುಮಾರ್ ಬೆರಳಚ್ಚು ಇರುವ ಚರ್ಮವನ್ನು ಪಾಲಿಥಿನ್ ಬ್ಯಾಗ್ನಲ್ಲಿ ತೆಗೆದುಕೊಂಡು ಹೋಗಿದ್ದರು ಎಂದು ಮಾಹಿತಿ ನೀಡಿದರು.
ಪೊಲೀಸರಿಂದ ಮುಂದಿನ ತನಿಖೆ:
"ಬುಧವಾರ ಸಂಜೆ ನ್ಯಾಯಾಲಯವು ನಮ್ಮನ್ನು ಕಸ್ಟಡಿಗೆ ನೀಡಿರುವುದರಿಂದ ನಾವು ಇನ್ನೂ ಆರೋಪಿಗಳನ್ನು ಪ್ರಶ್ನಿಸಲು ಪ್ರಾರಂಭಿಸಿಲ್ಲ. ಮಂಗಳವಾರ ರಾತ್ರಿ ಅವರನ್ನು ಬಂಧಿಸಿದ ನಂತರ ಪ್ರಾಥಮಿಕ ವಿಚಾರಣೆಯಿಂದ, ಮಧ್ಯವರ್ತಿಗಳು ಭಾಗಿಯಾಗಿದ್ದಾರೆ ಎಂದು ಅನುಮಾನಿಸಲಾಗಿದೆ. ಅವರು ಮೋಸಕ್ಕಾಗಿ ಈ ವಿಧಾನ ಬಳಸುತ್ತಿದ್ದಾರೆ. ಇತರ ಪರೀಕ್ಷೆಯಲ್ಲಿ ಕುಮಾರ್ ಮೊದಲ ಪ್ರಯತ್ನವಾಗಿದ್ದರೂ, ನಕಲಿ ಅಭ್ಯರ್ಥಿಯು ಇತರ ಅಭ್ಯರ್ಥಿಗಳಿಗೆ ಮೊದಲೇ ಸಹಾಯ ಮಾಡಿರಬಹುದು," ಎಂದು ಪೊಲೀಸರು ಅನುಮಾನಿಸಿದ್ದಾರೆ.