ಬಿಹಾರ ಚುನಾವಣೆ ದಿನ ಪಿಕ್ನಿಕ್ ಮಾಡುತ್ತಿದ್ದ ರಾಹುಲ್ ಗಾಂಧಿ: ಆರ್ಜೆಡಿ ನಾಯಕನ ವಾಗ್ದಾಳಿ
ಪಟ್ನಾ, ನವೆಂಬರ್ 16: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್ಜೆಡಿ-ಕಾಂಗ್ರೆಸ್-ಎಡಪಕ್ಷಗಳ ಮಹಾಘಟಬಂಧನ ಸೋಲು ಅನುಭವಿಸಿದ ಬೆನ್ನಲ್ಲೇ ಮೈತ್ರಿಕೂಟದೊಳಗೆ ಮೊದಲ ಕಿಡಿ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಎನ್ಡಿಎ ಸರ್ಕಾರವನ್ನು ಉರುಳಿಸಿ ಮಹಾಘಟಬಂಧನ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಪಕ್ಷಗಳಿಗೆ ನಿರಾಶೆಯಾಗಿದ್ದು, ಈ ಬಾರಿಯೂ ವಿರೋಧಪಕ್ಷದ ಸ್ಥಾನದಲ್ಲಿ ಕೂರುವುದು ಅನಿವಾರ್ಯವಾಗಿದೆ. ಬಿಹಾರದಲ್ಲಿನ ಮಹಾ ಮೈತ್ರಿಕೂಟದ ಸೋಲಿಗೆ ಕಾಂಗ್ರೆಸ್ ಹೀನಾಯ ಪ್ರದರ್ಶನ ಕಾರಣ ಎಂಬ ಅಸಮಾಧಾನ ಆರ್ಜೆಡಿಯಲ್ಲಿ ವ್ಯಕ್ತವಾಗಿದೆ.
'ಮಹಾಘಟಬಂಧನಕ್ಕೆ ಕಾಂಗ್ರೆಸ್ ಸಂಕೋಲೆಯಾಗಿ ಪರಿಣಮಿಸಿದೆ. ಅವರು 70 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ 70 ಸಾರ್ವಜನಿಕ ಸಮಾವೇಶಗಳನ್ನೂ ಅವರಿಂದ ನಡೆಸಲು ಸಾಧ್ಯವಾಗಲಿಲ್ಲ. ರಾಹುಲ್ ಗಾಂಧಿ ಮೂರು ದಿನ ಬಂದರು. ಪ್ರಿಯಾಂಕಾ ಗಾಂಧಿ ವಾದ್ರಾ ಬರಲೇ ಇಲ್ಲ. ಬಿಹಾರದ ಬಗ್ಗೆ ತಿಳಿಯದವರು ಇಲ್ಲಿಗೆ ಬಂದರು. ಇದು ಸರಿಯಲ್ಲ' ಎಂದು ಆರ್ಜೆಡಿ ನಾಯಕ ಶಿವಾನಂದ್ ತಿವಾರಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಕಳಪೆ ಪ್ರದರ್ಶನದ ಸತ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳಲೇಬೇಕು: ತಾರೀಖ್ ಅನ್ವರ್
ಇಂದು ಎನ್ಡಿಎ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಚುನಾವಣೆಯಲ್ಲಿ ಕೊಂಚ ಹೋರಾಟ ನಡೆಸಿದ್ದರೆ ಆರ್ಜೆಡಿಯ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಬೇಕಿತ್ತು. ಆದರೆ ಆರ್ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಮಿತ್ರಪಕ್ಷಗಳ, ಮುಖ್ಯವಾಗಿ ಕಾಂಗ್ರೆಸ್ನ ಕಳಪೆ ಪ್ರದರ್ಶನದಿಂದ ಆ ಅವಕಾಶ ಕಳೆದುಕೊಂಡಿದೆ.
'ನನ್ನ ಪ್ರಕಾರ ಇದು ಬಿಹಾರ ಒಂದರಲ್ಲಿಯ ವಿಷಯವಲ್ಲ. ಇತರೆ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಸಾದ್ಯವಾದಷ್ಟು ಗರಿಷ್ಠ ಸಂಖ್ಯೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹಾತೊರೆಯುತ್ತದೆ. ಆದರೆ ಗರಿಷ್ಠ ಸಂಖ್ಯೆಯ ಸೀಟುಗಳನ್ನು ಗೆಲ್ಲುವಲ್ಲಿ ವಿಫಲವಾಗುತ್ತದೆ. ಕಾಂಗ್ರೆಸ್ ಅದರ ಬಗ್ಗೆ ಆಲೋಚನೆ ಮಾಡಬೇಕು' ಎಂದು ತಿವಾರಿ ಹೇಳಿದ್ದಾರೆ.
ಕಾಂಗ್ರೆಸ್ ಜನರ ಆಯ್ಕೆಯಲ್ಲ ಎಂಬುದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ: ಕಪಿಲ್ ಸಿಬಲ್
'ಚುನಾವಣೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವಾಗ ರಾಹುಲ್ ಗಾಂಧಿ ಅವರು ಶಿಮ್ಲಾದಲ್ಲಿ ಪ್ರಿಯಾಂಕಾ ಗಾಂಧಿ ಪಿಕ್ನಿಕ್ ಮಾಡುತ್ತಿದ್ದರು. ಪಕ್ಷವನ್ನು ನಡೆಸುವ ರೀತಿ ಇದೆಯೇನು? ಕಾಂಗ್ರೆಸ್ ಪಕ್ಷವು ನಡೆಯುತ್ತಿರುವ ರೀತಿಯು ಬಿಜೆಪಿಗೆ ಲಾಭ ಮಾಡಿಕೊಡುತ್ತಿದೆ ಎಂದು ಅದರ ವಿರುದ್ಧ ಆರೋಪಗಳನ್ನು ಮಾಡಬಹುದು' ಎಂದು ಕಿಡಿಕಾರಿದ್ದಾರೆ.