ವಲಸೆ ಕಾರ್ಮಿಕರಿಗೆ ಕ್ವಾರೆಂಟೈನ್ ಕಡ್ಡಾಯವಲ್ಲ ಎಂದ 'ಆ' ಸರ್ಕಾರ!
ಪಾಟ್ನಾ, ಜೂನ್.02: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಅಂತರ್-ರಾಜ್ಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಅನ್ಯರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರನ್ನು ಕ್ವಾರೆಂಟೈನ್ ನಲ್ಲಿ ಇರಿಸುವ ಕಡ್ಡಾಯ ನಿಯಮವನ್ನು ಬಿಹಾರ ಸರ್ಕಾರವು ಸಡಿಲಗೊಳಿಸಲಾಗಿದೆ.
ಮಂಗಳವಾರದಿಂದ ಬಿಹಾರಕ್ಕೆ ಆಗಮಿಸಿದ ವಲಸಿಗರು ಯಾವುದೇ ರೀತಿ ಹೆಸರುಗಳನ್ನು ನೊಂದಾಯಿಸಿಕೊಳ್ಳುವ ಅಗತ್ಯವಿಲ್ಲ, ಕ್ವಾರೆಂಟೈನ್ ನಲ್ಲಿರುವ ಅಗತ್ಯವೂ ಇಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 3,945ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದುವರೆಗೂ ಮಹಾಮಾರಿಗೆ 23 ಮಂದಿ ಬಲಿಯಾಗಿದ್ದರೆ 1,741 ಸೋಂಕಿತರು ಗುಣಮುಖರಾಗಿದ್ದಾರೆ.
ಬದುಕು ಬದಲಿಸಿದ ಕೊರೊನಾ ವೈರಸ್; ಗೇಟ್ ಕಾದರೆ ಸಂಬಳ ಸಿಗುವುದಿಲ್ಲ!
ಜೂನ್.1ರ ಸೋಮವಾರದವರೆಗೂ ರಾಜ್ಯಕ್ಕೆ ಆಗಮಿಸಿದ ವಲಸಿಗರನ್ನು ಕ್ವಾರೆಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡ 13 ಲಕ್ಷಕ್ಕೂ ಅಧಿಕ ವಲಸಿಗರನ್ನು ರಾಜ್ಯದ 5,000 ಕ್ವಾರೆಂಟೈನ್ ಕೇಂದ್ರಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಜೂನ್.15ರ ನಂತರದಲ್ಲಿ ವಲಸೆ ಕಾರ್ಮಿಕರ 14 ದಿನಗಳ ಕ್ವಾರೆಂಟೈನ್ ಅವಧಿ ಪೂರ್ಣಗೊಳ್ಳಲಿದ್ದು, ಮುಂದೆ ಈ ಕೇಂದ್ರಗಳನ್ನೂ ಕೂಡಾ ಬಂದ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಥರ್ಮಲ್ ಸ್ಕ್ರೀನಿಂಗ್ ನಡೆಸದಿರಲು ತೀರ್ಮಾನ
ಬಿಹಾರ ರೈಲ್ವೆ ನಿಲ್ದಾಣಗಳಲ್ಲಿ ಈ ಮೊದಲು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಇದೀಗ ಈ ವ್ಯವಸ್ಥೆಯನ್ನೂ ರದ್ದುಗೊಳಿಸಲಾಗಿದೆ. ಬದಲಿಗೆ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಡೆಸ್ಕ್ ವ್ಯವಸ್ಥೆಯನ್ನು ಮಾಡಲಾಗಿದೆ. ಅನಾರೋಗ್ಯದ ಲಕ್ಷಣಗಳು ಕಂಡು ಬಂದವರಿಗೆ ಸ್ಥಳದಲ್ಲೇ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
ಬಿಹಾರಕ್ಕೆ ಆಗಮಿಸಿದ ಬಹುತೇಕರಲ್ಲಿ ಕೊವಿಡ್-19
ಹೊರರಾಜ್ಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಲಸೆ ಕಾರ್ಮಿಕರು ವಾಪಸ್ಸಾಗುತ್ತಿರುವ ಸಂದರ್ಭದಲ್ಲಿ ಬಹುತೇಕ ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲೇ ಸರ್ಕಾರವು ಇಂಥ ತೀರ್ಮಾನವನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಪತ್ತೆಯಾದ 3,872 ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ 2,743 ಪ್ರಕರಣಗಳು ಮೇ.03ರಿಂದ ಈಚೆಗೆ ರಾಜ್ಯಕ್ಕೆ ಆಗಮಿಸಿದ ವಲಸಿಗ ಕಾರ್ಮಿಕರಲ್ಲೇ ಕಾಣಿಸಿಕೊಂಡಿವೆ.
ಮಹಾರಾಷ್ಟ್ರದಿಂದ ಬಿಹಾರಕ್ಕೆ ಆಗಮಿಸಿದ ವಲಸಿಗರಿಗೆ ಸೋಂಕು
ಬಿಹಾರದಲ್ಲಿ ಕಾಣಿಸಿಕೊಂಡ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರು ಮಹಾರಾಷ್ಟ್ರದಿಂದಲೇ ಆಗಮಿಸಿದವರಾಗಿದ್ದಾರೆ. ಮಹಾರಾಷ್ಟ್ರದಿಂದ ಬಿಹಾರಕ್ಕೆ ತೆರಳಿದ 677 ಜನರಿಗೆ ಕೊವಿಡ್-19 ಸೋಂಕು ಕನ್ಫರ್ಮ್ ಆಗಿದೆ. ನವದೆಹಲಿಯಿಂದ ಆಗಮಿಸಿದ 628, ಗುಜರಾತ್ ನಿಂದ ಆಗಮಿಸಿದ 405, ಹರಿಯಾಣದಿಂದ ಆಗಮಿಸಿದ 237 ವಲಸೆ ಕಾರ್ಮಿಕರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇದರ ಜೊತೆಗೆ ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತೆಲಂಗಾಣದಿಂದ ಆಗಮಿಸಿದ ಕೆಲವು ವಲಸೆ ಕಾರ್ಮಿಕರಲ್ಲೂ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.
ದಾಖಲೆ ಮಟ್ಟದಲ್ಲಿ ವಲಸಿಗರ ಹೆಸರು ನೋಂದಣಿ
ಕೊರೊನಾ ವೈರಸ್ ಹರಡುವಿಕೆಯ ಸಂದಿಗ್ಧ ಪರಿಸ್ಥಿತಿಯಲ್ಲಿ 30ಲಕ್ಷಕ್ಕಿಂತ ಅಧಿಕ ವಲಸೆ ಕಾರ್ಮಿಕರನ್ನು ಬಿಹಾರಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಸೋಮವಾರ ಸಂಜೆಯಿಂದ ವಲಸೆ ಕಾರ್ಮಿಕರ ಹೆಸರು ನೋಂದಣಿ ಪ್ರಕ್ರಿಯೆಯನ್ನು ಬಂದ್ ಮಾಡಿರುವುದಾಗಿ ಬಿಹಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಿನ್ಸಿಪಲ್ ಸೆಕ್ರಟರಿ ಪ್ರತ್ಯಾಯ್ ಅಮೃತ್ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಡೋರ್ ಟು ಡೋರ್ ವೈದ್ಯಕೀಯ ತಪಾಸಣೆಯನ್ನು ಮುಂದುವರಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಥಮ ಹಂತದ ಆಸ್ಪತ್ರೆ ಮತ್ತು ದ್ವಿತೀಯ ಹಂತದ ಆಸ್ಪತ್ರೆಗಳಲ್ಲಿ ಎಂದಿನಂತೆ ಚಿಕಿತ್ಸೆ ನೀಡುಲಾಗುತ್ತದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಿನ್ಸಿಪಲ್ ಸೆಕ್ರಟರಿ ಪ್ರತ್ಯಾಯ್ ಅಮೃತ್ ತಿಳಿಸಿದರು.
ಹೋಮ್ ಕ್ವಾರೆಂಟೈನ್ ಆಯ್ಕೆಯೇ ಬೆಸ್ಟ್ ಎಂದ ಡಿಸಿಎಂ
ಬಿಹಾರದಲ್ಲಿ ವಲಸೆ ಕಾರ್ಮಿಕರಿಗೆ ಆರೋಗ್ಯದ ಕಿಟ್ ರೈಲ್ವೆ ಮತ್ತು ಬಸ್ ವ್ಯವಸ್ಥೆ ಸೇರಿದಂತೆ ಪ್ರತಿಯೊಬ್ಬರಿಗೂ 1,000 ರೂಪಾಯಿಯಷ್ಟು ಖರ್ಚು ಮಾಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಗೃಹ ದಿಗ್ಬಂಧನಕ್ಕೆ ಒಳಗಾಗುವುದೇ ಉತ್ತಮ ಆಯ್ಕೆ ಎಂದು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.
ಕ್ವಾರೆಂಟೈನ್ ತೆರವುಗೊಳಿಸಿದ ತೀರ್ಮಾನಕ್ಕೆ ಟೀಕೆ
ಬಿಹಾರದಲ್ಲಿ ಕ್ವಾರೆಂಟೈನ್ ಕೇಂದ್ರಗಳನ್ನು ಮುಚ್ಚುವ ಸರ್ಕಾದ ತೀರ್ಮಾನವನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಕ್ವಾರೆಂಟೈನ್ ಕೇಂದ್ರಗಳನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ. ಆದರೆ ರಾಜ್ಯ ಸರ್ಕಾರವು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ವಲಸೆ ಕಾರ್ಮಿಕರಲ್ಲಿ ಸೋಂಕಿತರಿದ್ದು ಅಂಥವರು ಸಾರ್ವಜನಿಕವಾಗಿ ಓಡಾಡಿದ್ದಲ್ಲಿ ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತದೆ ಎಂದು ಎಐಸಿಸಿ ಕಾರ್ಯದರ್ಶಿ ಚಂದನ್ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ.