ಲೋಕಸಭೆಯಲ್ಲಿ ಪ್ರಿಯಾಂಕಾ ವಾದ್ರಾರಿಂದ ಪವಾಡ ಸಾಧ್ಯವಿಲ್ಲ : ಪ್ರಶಾಂತ್ ಕಿಶೋರ್
ಭರ್ಜರಿ ಮೆರವಣಿಗೆಯ ಮೂಲಕ ರಾಜಕೀಯವನ್ನು ಅಧಿಕೃತವಾಗಿ ಪ್ರವೇಶಿಸಿರುವ ಪ್ರಿಯಾಂಕಾ (ಗಾಂಧಿ) ವಾದ್ರಾ ಅವರ ಉಪಸ್ಥಿತಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ನಿರ್ಣಾಯಕವಾಗಬಲ್ಲದೆ? ಅವರ ಅಬ್ಬರದ ಪ್ರಚಾರ ಅಲ್ಲೋಲಕಲ್ಲೋಲ ಎಬ್ಬಿಸಬಲ್ಲದೆ? ಇಡೀ ಲೋಕಸಭೆ ಚುನಾವಣೆಯ ಚಿತ್ರಣವನ್ನೇ ಅವರು ಬದಲಿಸಬಲ್ಲರೆ? ಅಥವಾ ಕಾಂಗ್ರೆಸ್ಸಿನ ಈ ಗೇಮ್ ಪ್ಲಾನ್ ಟುಸ್ ಪಟಾಕಿ ಆಗುವುದಾ?
ನಲವತ್ತೇಳು ವರ್ಷದ ಪ್ರಭಾವಿ ರಾಜಕಾರಣಿಯ ರಾಜಕೀಯ ಪ್ರವೇಶ ಆಗುತ್ತಿದ್ದಂತೆ ಇಂತಹ ಹಲವಾರು ಪ್ರಶ್ನೆಗಳು ಶ್ರೀಸಾಮಾನ್ಯರ ಮನದಲ್ಲಿ ಮಾತ್ರವಲ್ಲ, ನುರಿತ ರಾಜಕೀಯ ಪಂಡಿತರ ಮನದಲ್ಲೂ ಉದ್ಭವವಾಗುತ್ತಿದೆ. ಟಕ್ಕನೆ ನಿರ್ಣಯ ತೆಗೆದುಕೊಳ್ಳುವುದರಲ್ಲಿ, ರಾಜಕೀಯ ತಂತ್ರಗಳನ್ನು ಹೆಣೆಯುವಲ್ಲಿ ಪ್ರಿಯಾಂಕಾ ವಾದ್ರಾ ಅವರು ಕಾಂಗ್ರೆಸ್ ಅಧ್ಯಕ್ಷ, ಅವರ ಅಣ್ಣ ರಾಹುಲ್ ಗಾಂಧಿ ಅವರಿಗಿಂತ ನುರಿತವರು ಎಂಬುದರಲ್ಲಿ ಎರಡು ಮಾತೇ ಇಲ್ಲ ಎಂಬುದನ್ನು ಅವರ ಪಕ್ಷದವರೇ ಒಪ್ಪಿಕೊಳ್ಳುತ್ತಾರೆ.
ಉತ್ತರ ಪ್ರದೇಶದಲ್ಲಿ ಸಂಚಲನವೆಬ್ಬಿಸುತ್ತಾರಾ ಪ್ರಿಯಾಂಕಾ ವಾದ್ರಾ?
ರಾಜಕೀಯ ತಂತ್ರಗಳನ್ನು ಹೆಣೆಯುವಲ್ಲಿ ಅತ್ಯಂತ ನಿಸ್ಸೀಮರಾಗಿರುವ, ಜೆಡಿಯು ಪಕ್ಷದ ಉಪಾಧ್ಯಕ್ಷ, ಪಾಲಿಟಿಕಲ್ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ಅವರ ಪ್ರಕಾರ, ಇಂದು ಭಾರತದ ರಾಜಕೀಯದಲ್ಲಿ ಪ್ರಿಯಾಂಕಾ ಅವರದು ದೊಡ್ಡ ಹೆಸರು, ದೀರ್ಘಾವಧಿ ರಾಜಕೀಯದಲ್ಲಿ ಅವರು ಪಕ್ಷದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರಿಂದ ಪವಾಡವನ್ನು ನಿರೀಕ್ಷಿಸುವುದು ಅಸಾಧ್ಯ, ಅವರ ಉಪಸ್ಥಿತಿಯಿಂದ ಭಾರೀ ಬದಲಾವಣೆಗಳನ್ನು ಅಪೇಕ್ಷಿಸುವುದು ಸಲ್ಲ ಎಂದಿದ್ದಾರೆ.
ಉಪ್ರದಲ್ಲಿ ಪ್ರಿಯಾಂಗಾ ವಾದ್ರಾ ಸಂಚಲನ
ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯಾಗಿರುವ ಪ್ರಿಯಾಂಕಾ ವಾದ್ರಾ ಅವರು ಬ್ರದರ್ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಪಶ್ಚಿಮ ಭಾಗದ ಉಸ್ತುವಾರಿಯಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ, ಮಾಜಿ ಚಿತ್ರನಟ ರಾಜ್ ಬಬ್ಬರ್ ಮುಂತಾದವರೊಂದಿಗೆ ಲಕ್ನೋದಲ್ಲಿ ಸೋಮವಾರ ಭಾರೀ ರೋಡ್ ನಡೆಸುವುದರೊಂದಿಗೆ ತಮ್ಮ ಆಗಮನವನ್ನು ಸಾರಿದ್ದಾರೆ. ಸಹಸ್ರಾರು ಜನರಿಂದ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಎಲ್ಲೆಲ್ಲೂ ಪ್ರಿಯಾಂಕಾ ಎಂಬ ಜೈಜೈಕಾರ ಕೇಳಿಬಂದಿದೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಂತೂ ಪ್ರಿಯಾಂಕಾ ವಾದ್ರಾ ಸಂಚಲನವೆಬ್ಬಿಸಿದ್ದಾರೆ.
ವಿಧಾನಸಭೆ ವೇಳೆಯೇ ಸೇರಿದ್ದರೆ...
ಅವರು ಒಂದು ವೇಳೆ 2017ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿಯೇ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದ್ದರೆ ಭಾರೀ ಸ್ಥಿತ್ಯಂತರವನ್ನು ನಿರೀಕ್ಷಿಸಬಹುದಿತ್ತು ಮತ್ತು ಆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಹೀನಾಯವಾಗಿ ಸೋಲದಂತೆ ತಡೆಯಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತೆರೆಮರೆಯಲ್ಲಿಯೇ ಕುಳಿತುಕೊಂಡು ಬರೀ ತಂತ್ರ ಹೆಣೆಯುವುದರಲ್ಲಿ ಕಾಲ ಕಳೆದರು. ಬಿಟ್ಟುಹೋಗಬೇಕಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವನ್ನು ಒಟ್ಟಾಗಿ ಸ್ಪರ್ಧಿಸುವಂತೆ ಮನವೊಲಿಸಿದರು. ಅದು ಬ್ಯಾಕ್ ಫೈರ್ ಆಗಿದ್ದು ಈಗ ಇತಿಹಾಸ. 403 ಸೀಟುಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ಸೀಟುಗಳನ್ನು ಗೆದ್ದರೆ, ಕಾಂಗ್ರೆಸ್ ಗೆದ್ದಿದ್ದು ಕೇವಲ 7 ಸೀಟುಗಳು. ರಾಹುಲ್ ಗಾಂಧಿ ಅವರು ತಾವು ಮುಳುಗಿದ್ದಲ್ಲದೆ, ಸಮಾಜವಾದಿ ಪಕ್ಷವನ್ನೂ ಮುಳುಗಿಸಿದ್ದರು. ಈ ಕಾರಣದಿಂದಾಗಿಯೇ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್ ಸಹವಾಸಕ್ಕೇ ಹೋಗಿಲ್ಲ, ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿರುವ ತೀನ್ ದೇವಿಯಾ!
ಪ್ರಿಯಾಂಕಾರಿಂದ ಪವಾಡ ನಿರೀಕ್ಷಿಸುವಂತಿಲ್ಲ
ಪ್ರಶಾಂತ್ ಕಿಶೋರ್ ಅವರ ಅಭಿಪ್ರಾಯದಂತೆ, ಪ್ರಿಯಾಂಕಾ ವಾದ್ರಾ ಅವರಿಂದ ಪವಾಡವನ್ನು ನಿರೀಕ್ಷಿಸುವುದು ಒಪ್ಪತಕ್ಕ ಮಾತಲ್ಲ. ಲೋಕಸಭೆ ಚುನಾವಣೆಗೆ ಉಳಿದಿರುವ ಎರಡು ಮೂರು ತಿಂಗಳಲ್ಲಿ ಅವರು ಕಾಂಗ್ರೆಸ್ ಬಲವನ್ನು ಹೆಚ್ಚಿಸಬಹುದೇ ಹೊರತು ಎಲ್ಲವೂ ತಿರುವುಮುರುವು ಆಗುವಂತೆ ಮಾಡುವುದು ಅಸಾಧ್ಯ. ಆದರೆ, ಒಂದು ಮಾತು ನೆನಪಿರಲಿ, ಅವರದು ರಾಹುಲ್ ಗಾಂಧಿ ಅವರಿಗಿಂತ ದೊಡ್ಡ ಹೆಸರು ಮತ್ತು ಜನಪ್ರಿಯ ನಾಯಕಿ. ಅವರು ಸಕ್ರೀಯವಾಗಿ ರಾಜಕೀಯದಲ್ಲಿ ಮುಂದುವರಿದರೆ ಎನ್ಡಿಎಗೆ ಮತ್ತು ಅದರಲ್ಲೂ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಆತಂಕ ಸೃಷ್ಟಿಸಬಲ್ಲರು.
ಮಹಾಘಟಬಂಧನ್ ಯಶಸ್ಸು ಬಲು ಕಷ್ಟ
ಭಾರತೀಯ ಜನತಾ ಪಕ್ಷದ ವಿರೋಧಿಗಳು ರಚಿಸಿಕೊಂಡಿರುವ ಮಹಾಘಟಬಂಧನ್ ಬಗ್ಗೆ ಮಾತನಾಡುತ್ತ, ಐದಾರು ಪಕ್ಷಗಳು ಸೇರಿಕೊಂಡು ಮೈತ್ರಿಕೂಟ ರಚಿಸಿದರೆ ಅವು ಬಲಿಷ್ಠವಾಗಿ ಕಾಣಿಸಿಕೊಳ್ಳುತ್ತವೆ, ಆದರೆ, ಚುನಾವಣೆಯಲ್ಲಿ ಯಶಸ್ಸು ಕಾಣುವುದು ಬಲು ಕಷ್ಟದ್ದು. ಆದರೆ, ಒಂದು ವೇಳೆ ಅವರು ಯಶಸ್ವಿಯಾದರೆ ಉಳಿದ ಪಕ್ಷಗಳಿಗೆ ಮೈತ್ರಿಯ ಮಹತ್ವದ ಬಗ್ಗೆ ಪಾಠ ಕಲಿಸಬಲ್ಲವು ಎಂದು ಪ್ರಶಾಂತ್ ಕಿಶೋರ್ ಪತ್ರಕರ್ತರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಹಾಘಟಬಂಧನ್ ದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ, ತೆಲುಗು ದೇಶಂ ಪಕ್ಷ, ರಾಷ್ಟ್ರೀಯ ಜನತಾ ದಳ, ರಾಷ್ಟ್ರೀಯ ಲೋಕ ಸಮತಾ ಪಕ್ಷ, ಹಿಂದೂಸ್ತಾನಿ ಆವಾಮಿ ಪಕ್ಷ, ವಿಕಾಶೀಲ ಇನ್ಸಾನ್ ಪಕ್ಷ ಮುಂತಾದ ಇಪ್ಪತ್ತೆಂಟು ಪಕ್ಷಗಳು ಒಗ್ಗೂಡಿವೆ. ಇವು ಒಗ್ಗಟ್ಟಿನಿಂದ ಇರಬಲ್ಲವೆ?
'ಪ್ರಿಯಾಂಕಾರನ್ನು ಅಜ್ಜಿಗೆ ಹೋಲಿಸಿದರೆ, ರಾಹುಲ್ ರನ್ನು ತಾತನಿಗೆ ಹೋಲಿಸಬೇಕು'!
ಮತ್ತೆ ಮೋದಿ ಪ್ರಧಾನಿ, ಸಂಶಯವಿಲ್ಲ
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎನ್ಡಿಎ ಖಂಡಿತ ಮತ್ತೆ ಅಧಿಕಾರಕ್ಕೆ ಬರಲಿದೆ. ಆದರೆ, ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎಂಬುದು ಊಹಾತೀತವಾಗಿದೆ ಎಂದಿದ್ದಾರೆ. ಜೊತೆಗೆ, ಅಪನಗದೀಕರಣ ಮತ್ತು ಜಿಎಸ್ಟಿಯಂಥ ವಿಷಯಗಳು ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ ಅಂತಹ ತಲೆನೋವು ತಂದುಕೊಡಲಿಕ್ಕಿಲ್ಲ ಎಂಬುದು ಪ್ರಶಾಂತ್ ಅವರ ಅನಿಸಿಕೆ. ಚುನಾವಣೆಗೂ ಮುನ್ನ ನಡೆದಿರುವ ವಿದ್ಯಮಾನಗಳು ಮುಖ್ಯವಾಗುತ್ತವೆಯೇ ಹೊರತು ಎರಡು ವರ್ಷಗಳ ಹಿಂದೆ ನಡೆದ ವಿದ್ಯಮಾನಗಳು ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.