ಜೆಡಿಯುದಿಂದ ಚುನಾವಣಾ ಪ್ರಚಾರ 'ಚಾಣಕ್ಯ' ಪ್ರಶಾಂತ್ ಕಿಶೋರ್ ಉಚ್ಚಾಟನೆ
ಪಟ್ನಾ, ಜನವರಿ 29: ಬಿಹಾರದ ಹೊರಗೆ ಮತ್ತು ಒಳಗೆ ಬಿಜೆಪಿ ಜತೆಗಿನ ಮೈತ್ರಿಯನ್ನು ಗಟ್ಟಿಗೊಳಿಸುವ ಸ್ಪಷ್ಟ ಸೂಚನೆ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಂಡಾಯವೆದ್ದಿದ್ದ ನಾಯಕರಾದ ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕುರಿತಾದ ಬಿಜೆಪಿ ಮಿತ್ರಪಕ್ಷ ಜೆಡಿಯು ನಿಲುವನ್ನು ಈ ಇಬ್ಬರೂ ನಾಯಕರು ಪ್ರಶ್ನಿಸಿದ್ದರು.
ಕಳೆದ ವಾರ ಬಿಹಾರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ, ಬಿಹಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಎನ್ಡಿಎ, ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಎದುರಿಸಲಿದೆ ಎನ್ನುವ ಮೂಲಕ, ರಾಜ್ಯದಲ್ಲಿ ಜೆಡಿಯುಗೆ ಬಿಜೆಪಿ ಬೆಂಬಲ ನೀಡಲಿದ್ದು, ಅದರ ಮೂಲಕ ಮೈತ್ರಿಯನ್ನು ಉಳಿಸಿಕೊಳ್ಳಲಿದೆ ಎಂಬ ಸುಳಿವು ನೀಡಿದ್ದರು.
ಎನ್ಆರ್ಸಿಗೆ 'ನೋ' ಎನ್ನಿ: ರಾಹುಲ್ ಗಾಂಧಿಗೆ ಪ್ರಶಾಂತ್ ಕಿಶೋರ್ ಸಲಹೆ
'ಪ್ರಶಾಂತ್ ಕಿಶೋರ್ ಮತ್ತು ಪವನ್ ಶರ್ಮಾ ಅವರನ್ನು ಪಕ್ಷದಿಂದ ಹೊರಹಾಕುವುದು ಅನಿವಾರ್ಯವಾಗಿದೆ. ಇದರಿಂದ ಅವರು ಇನ್ನೂ ಕೆಳಮಟ್ಟಕ್ಕೆ ಹೋಗಲಾರರು' ಎಂದು ಜೆಡಿಯು ಹೇಳಿಕೆ ತಿಳಿಸಿದೆ.
ಪಕ್ಷದ ಶಿಸ್ತು ಉಲ್ಲಂಘನೆ
'ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಇಬ್ಬರೂ ಪಕ್ಷದ ನಿರ್ಧಾರಗಳು ಮತ್ತು ಅದರ ಕಾರ್ಯನಿರ್ವಹಣೆಯ ವಿರುದ್ಧವಾಗಿ ವರ್ತಿಸಿದ್ದಾರೆ. ಇದು ಪಕ್ಷದ ಆಂತರಿಕ ಶಿಸ್ತಿನ ಉಲ್ಲಂಘನೆಯಾಗಿದೆ. ಅಲ್ಲದೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್ ಅವಮಾನಕಾರಿ ಮಾತುಗಳನ್ನು ಆಡಿದ್ದಾರೆ' ಎಂದು ಜೆಡಿಯು ಹೇಳಿಕೆಯಲ್ಲಿ ಪಕ್ಷದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಆರೋಪಿಸಿದ್ದಾರೆ.
ಮರಳಿ ಸಿಎಂ ಹುದ್ದೆ ಸಿಗಲಿ
ತಮ್ಮ ಉಚ್ಚಾಟನೆಗೆ ಪ್ರಶಾಂತ್ ಕಿಶೋರ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 'ಧನ್ಯವಾದಗಳು ನಿತೀಶ್ ಕುಮಾರ್. ಬಿಹಾರದ ಮುಖ್ಯಮಂತ್ರಿ ಹುದ್ದೆಯನ್ನು ಮರಳಿ ಪಡೆಯುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ' ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸೋಲಿಗೆ ಕಾರಣವಾಗಿದ್ದು ಪ್ರಶಾಂತ್ ಕಿಶೋರ್ ತಂತ್ರ
ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದ
'ನಿಮ್ಮ ಮತ್ತು ನಿಮ್ಮ ನೀತಿಗಳನ್ನು ಸಮರ್ಥಿಸಿಕೊಳ್ಳಬೇಕಾದ ಒಪ್ಪಿಕೊಳ್ಳಲಾಗದ ಒತ್ತಡದ ಸ್ಥಿತಿಯಿಂದ ನನ್ನನ್ನು ಬಿಡುಗಡೆ ಮಾಡಿದ್ದಕ್ಕೆ ನಿತೀಶ್ ಕುಮಾರ್ ಅವರಿಗೆ ಧನ್ಯವಾದಗಳು. ಬಿಹಾರದ ಮುಖ್ಯಮಂತ್ರಿಯಾಗಿ ನಿಮ್ಮ ಎಲ್ಲ ಅಭಲಾಷೆಗಳಿಗೂ ಎಲ್ಲ ರೀತಿಯ ಶುಭ ಹಾರೈಸುತ್ತೇನೆ' ಎಂದು ಪವನ್ ಕೆ. ಶರ್ಮಾ ವ್ಯಂಗ್ಯವಾಗಿ ಹೇಳಿದ್ದಾರೆ.
ಇಲ್ಲವೆನ್ನುವಷ್ಟು ಧೈರ್ಯ ನಿಮಗಿಲ್ಲ
ಅಮಿತ್ ಶಾ ಅವರ ಸಲಹೆಯಂತೆ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯುಗೆ ಸೇರಿಸಿಕೊಳ್ಳಲಾಗಿತ್ತು ಎಂದು ನಿತೀಶ್ ಕುಮಾರ್ ಹೇಳಿಕೆ ನೀಡಿದ್ದರು. ಇದು ಶುದ್ಧ ಸುಳ್ಳು ಎಂದು ಪ್ರಶಾಂತ್ ಕಿಶೋರ್ ತಿರುಗೇಟು ನೀಡಿದ್ದರು. 'ನಿಮ್ಮ ಕಡೆಯಿಂದ ನನ್ನನ್ನು ಮತ್ತು ನನ್ನ ಬಣ್ಣವನ್ನು ನಿಮ್ಮ ರೀತಿಯೇ ಆಗಿಸುವ ವಿಫಲ ಪ್ರಯತ್ನ ಮಾಡಿದ್ದೀರಿ. ಒಂದು ವೇಳೆ ನೀವು ಸತ್ಯವನ್ನೇ ಹೇಳಿದರೂ, ಅಮಿತ್ ಶಾ ಶಿಫಾರಸು ಮಾಡಿದವರನ್ನು ತಿರಸ್ಕರಿಸುವಷ್ಟು ಧೈರ್ಯ ನಿಮಗೆ ಇದೆ ಎನ್ನುವುದನ್ನು ಕೂಡ ಯಾರೂ ನಂಬುವುದಿಲ್ಲ' ಎಂದು ಹೇಳಿದ್ದರು.