'ಪ್ರಶಾಂತ್ ಮೂಲಕ ನಿತೀಶ್ ರಿಂದ ಆರ್ ಜೆಡಿ- ಜೆಡಿಯು ವಿಲೀನ ಪ್ರಸ್ತಾವ'
ಪಾಟ್ನಾ (ಬಿಹಾರ), ಏಪ್ರಿಲ್ 12: ನನ್ನ ಪತಿ ಲಾಲೂಪ್ರಸಾದ್ ರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿ, ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಹಾಗೂ ನಿತೀಶ್ ಕುಮಾರ್ ರ ಜೆಡಿಯು ವಿಲೀನ ಮಾಡಿ, ಹೊಸ ಪಕ್ಷ ರಚಿಸಿ, ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿಯ ಘೋಷಣೆ ಮಾಡುವ ಪ್ರಸ್ತಾವ ಇರಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ಶುಕ್ರವಾರ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಂದು ವೇಳೆ ನನ್ನ ಪತಿಯನ್ನು ಭೇಟಿ ಆಗಿದ್ದನ್ನು ಪ್ರಶಾಂತ್ ಕಿಶೋರ್ ನಿರಾಕರಿಸುತ್ತಿದ್ದಾರೆ ಅಂದರೆ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಎಂಬುದಾಗಿ ರಾಬ್ರಿ ಹೇಳಿದ್ದಾರೆ. "ನನಗೆ ಸಿಟ್ಟು ಬಂದು ಅಲ್ಲಿಂದ ಹೊರಡುವಂತೆ ಪ್ರಶಾಂತ್ ಗೆ ಹೇಳಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಡಿದ ದ್ರೋಹದಿಂದಾಗಿ ಅವರ ಮೇಲೆ ವಿಶ್ವಾಸ ಹೊರಟುಹೋಗಿದೆ" ಎಂದು ಆವರು ಪ್ರಾದೇಶಿ ಸುದ್ದಿ ವಾಹಿನಿಯಲ್ಲಿ ಹೇಳಿದ್ದಾರೆ.
ಕಳೆದ ವರ್ಷ ನಿತೀಶ್ ಕುಮಾರ್ ಅವರು ಆರ್ ಜೆಡಿ, ಕಾಂಗ್ರೆಸ್ ಮಹಾಘಟ್ ಬಂಧನ್ ನಿಂದ ಹೊರಬಂದು ಬಿಜೆಪಿ ನೇತೃತ್ವದ ಎನ್ ಡಿಎ ಜತೆ ಮತ್ತೆ ಸೇರಿ, ಬಿಹಾರದಲ್ಲಿ ಮತ್ತೆ ಸರಕಾರ ರಚಿಸಿದ್ದರು.
ನಮ್ಮ ಎಲ್ಲ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸಾಕ್ಷಿ ಇದ್ದಾರೆ. ಅವರು ಕನಿಷ್ಠ ಐದು ಸಲ ಕರೆ ಕಳುಹಿಸಿದ್ದರು. ಎರಡೂ ಪಕ್ಷಗಳು ವಿಲೀನ ಮಾಡಿ, ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡೋಣ ಎಂದು ಪ್ರಶಾಂತ್ ಕಿಶೋರ್ ಮೂಲಕ ಪ್ರಸ್ತಾವ ಕಳುಹಿಸಿದ್ದರು ಎಂದು ರಾಬ್ರಿದೇವಿ ಹೇಳಿದ್ದಾರೆ.
ಲಾಲೂ ಪ್ರಸಾದ್ ಅವರು ಜೈಲಿನಿಂದಲೇ ಪ್ರಶಾಂತ್ ಕಿಶೋರ್ ಜತೆಗೆ ಮಾತುಕತೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ನಿತೀಶ್ ಕುಮಾರ್ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ರಾಬ್ರಿ ದೇವಿ, ನಮಗೇ (ಕುಟುಂಬ ಸದಸ್ಯರು) ಅವರ (ಲಾಲೂ) ಜತೆ ಫೋನ್ ನಲ್ಲಿ ಮಾತನಾಡುವ ಅವಕಾಶ ಸಿಗುತ್ತಿಲ್ಲ. ಇನ್ನು ಜೈಲಿನಿಂದ ಮಾತುಕತೆ ನಡೆಸಲು ವ್ಯವಸ್ಥೆ ಮಾಡಿದ್ದಾರೆ ಅಂದರೆ ನಂಬಬಹುದೇ ಎಂದಿದ್ದಾರೆ.
ಮೈತ್ರಿ ಬಿಡಲು ಸಿದ್ಧರಾಗಿದ್ದರೇ ನಿತೀಶ್?: ಲಾಲು ಹೇಳಿದ ಸ್ಫೋಟಕ ಮಾಹಿತಿ
ಈಚೆಗೆ ಲಾಲೂ ಪ್ರಸಾದ್ ಯಾದವ್ ಆತ್ಮಚರಿತ್ರೆ ಬಿಡುಗಡೆ ಅಗಿದೆ. ಅದರಲ್ಲಿ ಪ್ರಸ್ತಾವ ಆಗಿರುವಂತೆ, ಈಗ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಆಗಿರುವ ಪ್ರಶಾಂತ್ ಕಿಶೋರ್ ಅವರು ನಿತೀಶ್ ಪರವಾಗಿ ಭೇಟಿಯಾಗಿ, ಮಹಾಘಟಬಂಧನ್ ನಲ್ಲಿ ಮತ್ತೆ ಸೇರುವ ಪ್ರಸ್ತಾವ ಇರಿಸಿದ್ದರು ಎಂದಿದೆ.
ಅದಕ್ಕೆ ಉತ್ತರ ನೀಡಿರುವ ಪ್ರಶಾಂತ್ ಕಿಶೋರ್, ಜೆಡಿಯು ಸೇರುವ ಮುನ್ನ ಹಲವು ಸಲ ಲಾಲೂ ಅವರನ್ನು ಭೇಟಿ ಆಗಿದ್ದೇನೆ. ನಾವು ಆಗ ಏನೆಲ್ಲ ಚರ್ಚಿಸಿದ್ದೇವೆ ಎಂಬುದನ್ನು ಹೇಳಿದರೆ ಲಾಲೂ ಪ್ರಸಾದ್ ರಿಗೆ ಮುಜುಗರ ಆಗುತ್ತದೆ ಎಂದು ಹೇಳಿದ್ದಾರೆ.