ಮೊದಲ ಲಸಿಕೆಯನ್ನು ಮೋದಿಯೇ ತೆಗೆದುಕೊಳ್ಳಲಿ: ಲಾಲು ಪ್ರಸಾದ್ ಮಗನ ಒತ್ತಾಯ
ಪಾಟ್ನಾ, ಜನವರಿ 08: ದೇಶದಲ್ಲಿ ಕೊರೊನಾ ಲಸಿಕೆಯನ್ನು ಮೊದಲು ಪ್ರಧಾನಿ ಮೋದಿಯೇ ತೆಗೆದುಕೊಳ್ಳಬೇಕು. ಆನಂತರ ನಾವೂ ಲಸಿಕೆ ತೆಗೆದುಕೊಳ್ಳುತ್ತೇವೆ ಎಂದು ಲಾಲು ಪ್ರಸಾದ್ ಮಗ, ಆರ್ ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಒತ್ತಾಯಿಸಿದ್ದಾರೆ.
ಕೊರೊನಾ ಲಸಿಕೆಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷದ ನಾಯಕರೊಂದಿಗೆ ತೇಜ್ ಪ್ರತಾಪ್ ಯಾದವ್ ಕೂಡ ಈಗ ದನಿಗೂಡಿಸಿದ್ದಾರೆ. "ಮೋದಿಯವರೇ ಮೊದಲ ಲಸಿಕೆಯನ್ನು ತೆಗೆದುಕೊಳ್ಳುವ ಮೂಲಕ ಮುಂದಾಳತ್ವ ವಹಿಸಬೇಕು. ಆನಂತರ ನಾವೂ ಲಸಿಕೆ ತೆಗೆದುಕೊಳ್ಳುತ್ತೇವೆ. ಎಲ್ಲರೂ ಅವರನ್ನು ಅನುಸರಿಸುತ್ತಾರೆ" ಎಂದು ಹೇಳಿದ್ದಾರೆ.
"ಪಂಚತಾರಾ ಸಂಸ್ಕೃತಿಯ ಬಟ್ಟೆ ಧರಿಸಿದಂತಲ್ಲ ನೆಲದ ವಾಸ್ತವ ಅರಿಯುವುದು"
ಕಾಂಗ್ರೆಸ್ ನ ಮನೀಶ್ ತಿವಾರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿ ಪಕ್ಷದ ಹಲವು ನಾಯಕರು ಕೊರೊನಾ ಲಸಿಕೆ ಕುರಿತು ಅಸಮ್ಮತಿ ಸೂಚಿಸಿದ್ದರು. ಲಸಿಕೆಯ ಸಾಮರ್ಥ್ಯ ಹಾಗೂ ಪರಿಣಾಮದ ಕುರಿತು ಪ್ರಶ್ನೆ ಮಾಡಿದ್ದರು. ಈ ಬೆನ್ನಲ್ಲೇ ಆರ್ ಜಿಡಿ ನಾಯಕ ತೇಜ್ ಪ್ರತಾಪ್ ಕೂಡ ಈ ಹೇಳಿಕೆ ನೀಡಿದ್ದಾರೆ.
ಕಳೆದ ವಾರವಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯ ಸರ್ಕಾರ ಕೊರೊನಾ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ರಾಜ್ಯಾದ್ಯಂತ ಎಲ್ಲಾ ತಯಾರಿಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. 50 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು ಎಂದಿದ್ದರು.
ಆನಂತರ ಕಾಂಗ್ರೆಸ್ ಮುಖಂಡರಾದ್ ಮನೀಶ್ ತಿವಾರಿ, ಶಶಿ ತರೂರ್ ಹಾಗೂ ಜೈರಾಮ್ ರಮೇಶ್ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಕೊವ್ಯಾಕ್ಸಿನ್ ಲಸಿಕೆ ಕುರಿತು ಶಂಕೆ ವ್ಯಕ್ತಪಡಿಸಿದ್ದರು. ಮೂರನೇ ಹಂತದ ಪರೀಕ್ಷೆಗೆ ಒಳಗಾಗದೇ ಲಸಿಕೆಗೆ ಅನುಮತಿ ದೊರೆತಿರುವ ಕುರಿತು ಪ್ರಶ್ನೆಗಳು ಎದ್ದಿದ್ದವು. ಆತುರದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಭಾರತದ ಜನರನ್ನು ಅಪಾಯಕ್ಕೆ ದೂಡಬಹುದು ಎಂದು ಶಶಿ ತರೂರ್ ವಿರೋಧೀಸಿದ್ದರು. ಲಸಿಕೆ ಕುರಿತು ಶಿಷ್ಟಾಚಾರ ಪಾಲಿಸದೇ ಕೊವ್ಯಾಕ್ಸಿನ್ ಗೆ ಅನುಮತಿ ನೀಡಲಾಗಿದೆ ಎಂದು ಜೈರಾಮ್ ರಮೇಶ್ ಕೂಡ ಆಕ್ಷೇಪ ಎತ್ತಿದ್ದರು.