ಪ್ರಧಾನಿ ಮೇಲಿನ ವಿಶ್ವಾಸದಿಂದ ಮಿತ್ರಪಕ್ಷಗಳಿಗೂ ಲಾಭ: ಫಡ್ನವೀಸ್
ಪಾಟ್ನಾ, ಅಕ್ಟೋಬರ್.18: ದೇಶದ ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲಿಟ್ಟ ವಿಶ್ವಾಸದಿಂದ ಕೇವಲ ಭಾರತೀಯ ಜನತಾ ಪಕ್ಷಕ್ಕೆ ಒಳ್ಳೆಯದ್ದಾಗುವುದಿಲ್ಲ. ಬದಲಿಗೆ ಬಿಜೆಪಿಯ ಮಿತ್ರಪಕ್ಷಗಳಿಗೂ ಒಳಿತಾಗಲಿದೆ ಎಂದು ಬಿಹಾರ ಚುನಾವಣೆಯ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಬಿಹಾರದಲ್ಲಿ ಎಲ್ಲಿಯೇ ಹೋದರೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳುತ್ತಿದ್ದಂತೆ ಜನರಲ್ಲಿ ಒಂದು ಉತ್ಸಾಹ ಕಂಡು ಬರುತ್ತದೆ. ಜನರು ಪ್ರಧಾನಿ ಮೇಲಿಟ್ಟ ವಿಶ್ವಾಸ ಮತ್ತು ನಂಬಿಕೆ ಅಷ್ಟರ ಮಟ್ಟಿಗಿದೆ. ದೇಶದ ಜನರು ಪ್ರಧಾನಿ ಮೇಲಿಟ್ಟ ನಂಬಿಕೆಯಿಂದ ನಮಗಷ್ಟೇ ಅಲ್ಲ ನಮ್ಮ ಮಿತ್ರಪಕ್ಷಗಳಿಗೂ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಬಿಹಾರದಲ್ಲಿ ಪತ್ನಿಯನ್ನು ಸಿಎಂ ಮಾಡಿದ್ದೇ ಲಾಲೂ ಸಾಧನೆ: ಸಿಎಂ ನಿತೀಶ್ ಕುಮಾರ್
ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಲೋಕ ಜನಶಕ್ತಿ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ತೊರೆದು ಹೋಯಿತು. ಇನ್ನೊಂದು ಕಡೆಯಲ್ಲಿ ವಿಕಾಸ ಶೀಲ ಇನ್ಸಾನ್ ಪಕ್ಷವು ಎನ್ ಡಿಎ ಮೈತ್ರಿಕೂಟವನ್ನು ಸೇರಿಕೊಂಡಿತು. ಬಿಜೆಪಿ ಸ್ಪರ್ಧಿಸಲು ಸಿದ್ಧವಾಗಿದ್ದ 121 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳನ್ನು ಈ ಪಕ್ಷಕ್ಕೆ ಬಿಟ್ಟು ಕೊಟ್ಟಿತ್ತು.
ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.
ಶನಿವಾರ ಮಹಾಘಟಬಂಧನ್ ಮೈತ್ರಿಯು ರೂಪಿಸಿದ ಸಾಮಾನ್ಯ ಕನಿಷ್ಠ ಯೋಜನೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್ ಮುಖಂಡ ರಂದೀಪ್ ಸರ್ಜೆವಾಲಾ ಜಂಟಿಯಾಗಿ ಬಿಡುಗಡೆಗೊಳಿಸಿದರು.
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ 12 ರ್ಯಾಲಿ:
Recommended Video
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ)ದ ಅಭ್ಯರ್ಥಿಗಳ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 12 ರ್ಯಾಲಿಗಳನ್ನು ನಡೆಸಲಿದ್ದಾರೆ. ಅಕ್ಟೋಬರ್.23ರಂದು ಸಸಾರಮ್, ಗಯಾ, ಭಗಲ್ಪುರ್ ನಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ. ಅಕ್ಟೋಬರ್.28ರಂದು ದರ್ಭಂಗಾ, ಮುಜಾಫರ್ ಪುರ್ ಮತ್ತು ಪಾಟ್ನಾದಲ್ಲಿ ರ್ಯಾಲಿ ನಡೆಸಲಿದ್ದಾರೆ. ನವೆಂಬರ್.03ರಂದು ಛಪ್ರಾ, ಪೂರ್ವ ಚಂಪಾರಣ್, ಸಮಸ್ತಿಪುರ್ ನಲ್ಲಿ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಈ ಬಗ್ಗೆ ಬಿಹಾರ ಚುನಾವಣೆಯ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟನೆ ನೀಡಿದ್ದಾರೆ.