ಹಣ ಕೊಟ್ಟರೆ ಹೆಣ ಎಂದ ಆಸ್ಪತ್ರೆ; ಮಗನ ಶವ ಪಡೆಯಲು ಹಣಕ್ಕಾಗಿ ಭಿಕ್ಷೆ ಬೇಡಿದ ಪೋಷಕರು
ಸಮಸ್ತಿಪುರ ಜೂನ್ 08: ಮಗನ ಶವವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣವಿಲ್ಲದ ಪೋಷಕರು ಭಿಕ್ಷೆ ಬೇಡಿದ ಕರುಣಾಜನಕ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಮಗನ ಶವವನ್ನು ನೀಡಲು 50,000 ರೂಪಾಯಿಯನ್ನ ನೀಡುವಂತೆ ಆಸ್ಪತ್ರೆಯ ನೌಕರ ಪೋಷಕರಿಗೆ ಡಿಮ್ಯಾಂಡ್ ಮಾಡಿದ್ದಾನೆ. ಇದರಿಂದಾಗಿ ಮಗನ ಶವವನ್ನು ಪಡೆಯಲು ಪೋಷಕರು ಮನೆ ಮನೆಗೂ ಹೋಗಿ ಭಿಕ್ಷೆ ಬೇಡಿದ ಘಟನೆ ನಡೆದಿದೆ. ಪೋಷಕರು ತಮ್ಮ ಮಗನ ಶವವನ್ನು ಸದರ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣ ಸಂಗ್ರಹಿಸಲು ಮನೆ ಮನೆಗೂ ತೆರಳಿ ಹಣ ನೀಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮೃತನ ತಂದೆ ಮಹೇಶ್ ಠಾಕೂರ್, "ಕೆಲವು ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದನು, ಈಗ, ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿದೆ, ಆಸ್ಪತ್ರೆಯ ಉದ್ಯೋಗಿಯೊಬ್ಬರು 50,000 ರೂ. ನೀಡಿದರೆ ಮಾತ್ರ ನನ್ನ ಮಗನ ಶವವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ನಾವು ಬಡವರು, ನಾವು ಈ ಮೊತ್ತವನ್ನು ಹೇಗೆ ಪಾವತಿಸಬೇಕು ಎಂದು ನಮಗೆ ತಿಳಿಯಲಿಲ್ಲ. ಇದರಿಂದ ನಮಗೆ ಬೇರೆ ದಾರಿ ತೋರದೆ ಭೀಕ್ಷೆ ಬೇಡಲು ಮುಂದಾದವು'' ಎಂದಿದ್ದಾರೆ.
ಘಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಸ್ತಿಪುರ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಅವರು ಈ ವಿಷಯದಲ್ಲಿ ಖಂಡಿತವಾಗಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಮತ್ತು ಹೊಣೆಗಾರರಾದವರನ್ನು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)