ಕಾಶ್ಮೀರದಲ್ಲಿ ಕಾರ್ಮಿಕರ ಹತ್ಯೆ: ಬಿಹಾರ ಸಿಎಂ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಪಾಟ್ನಾ, ಅಕ್ಟೋಬರ್ 18: ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಇನ್ನಷ್ಟು ಅಧಿಕವಾಗಿದೆ. ಬಿಹಾರದ ಕಾರ್ಮಿಕರು ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದ್ದಾರೆ. ಇದರಿಂದಾಗಿ ಇಲ್ಲಿನ ಜನರು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದೆ.
ಕಳೆದ ಒಂದು ವಾರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ವರು ಬಿಹಾರದ ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ, ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ತೇಜಸ್ವಿ ಯಾದವ್ ಬಿಹಾರ ಸರ್ಕಾರದ ವಿರುದ್ದ ವಾಕ್ಸಮರ ನಡೆಸಿದ್ದಾರೆ.
ಉಗ್ರರ ಅಟ್ಟಹಾಸ: ಜಮ್ಮು-ಕಾಶ್ಮೀರ ತೊರೆದು ತವರು ರಾಜ್ಯದತ್ತ ಹೆಜ್ಜೆಯಿಟ್ಟ ಕಾರ್ಮಿಕರು
ಬಿಹಾರದ ಬಾಂಕಾ ನಿವಾಸಿ, ಗೋಲ್ಗಪ್ಪ ವ್ಯಾಪಾರಿ ಅರಂವಿದ್ ಕುಮಾರ್ ಶ್ರೀನಗರದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಭಾನುವಾರವೂ ಇಬ್ಬರು ಬಿಹಾರ ಕಾರ್ಮಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ.
ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ತೇಜಸ್ವಿ ಯಾದವ್, "ಈ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಡಬಲ್ ಧಿಕ್ಕಾರವಿದೆ. ಬಿಹಾರದಲ್ಲಿ ಉದ್ಯೋಗವನ್ನು ಜನರಿಗೆ ಈ ಸರ್ಕಾರವು ನೀಡುವುದಿಲ್ಲ. ನೀವು ಹೊರಗೆ ಹೋದರೆ ನಿಮ್ಮನ್ನು ಕೊಲ್ಲಲಾಗುತ್ತದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವನ್ನಪ್ಪಿದ ಕಾರ್ಮಿಕರ ಜೀವಕ್ಕೆ 2 ಲಕ್ಷ ಬೆಲೆ ಘೋಷಣೆ ಮಾಡುತ್ತಾರೆ" ಎಂದು ಟೀಕೆ ಮಾಡಿದ್ದಾರೆ.
ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್, "ಬಿಹಾರದ ಮಕ್ಕಳನ್ನು ಕಾಶ್ಮೀರದಲ್ಲಿ ಕೊಲ್ಲಲಾಗುತ್ತಿದೆ. ತಮ್ಮ ಜೀವನ ಸಾಗಿಸಲು ದುಡಿಮೆಗಾಗಿ ಅಲ್ಲಿಗೆ ಹೋದವರು ಈಗ ಸಾವನ್ನಪ್ಪಿದ್ದಾರೆ. ಬಿಹಾರದ ಜನರು ಎಲ್ಲಿ ಸುರಕ್ಷತೆಯ ಆತಂಕವಿರುತ್ತದೆಯೋ ಅಲ್ಲಿಗೆ ಯಾಕೆ ಹೋಗುತ್ತಾರೆ?, ಬಿಹಾರದಲ್ಲಿ ಯಾವುದೇ ಕೆಲಸವಿಲ್ಲ ಎಂಬ ಕಾರಣಕ್ಕಾಗಿ ಹೋಗುತ್ತಿದ್ದಾರೆಯೇ?, ಇದು ನಿತೀಶ್ ಜೀಗೆ ನನ್ನ ಪ್ರಶ್ನೆ. ಜನರಿಗೆ ಬಿಹಾರದಲ್ಲೇ ಉದ್ಯೋಗ ಇರುತ್ತಿದ್ದರೆ, ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಗುರಿಯಾಗುತ್ತಿದ್ದರೆ?" ಎಂದು ಟ್ವೀಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಮತ್ತಿಬ್ಬರು ಬಿಹಾರಿ ಕಾರ್ಮಿಕರು ಉಗ್ರರ ಗುಂಡೇಟಿಗೆ ಬಲಿ
ತೇಜಸ್ವಿ ಯಾದವ್ ಈ ಸಂದರ್ಭದಲ್ಲೇ ರಾಜ್ಯದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ ವ್ಯಕ್ತಿಗೆ ನೀಡಲಾದ ಪರಿಹಾರಕ್ಕಿಂತ ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ವ್ಯಕ್ತಿಗೆ ಕಡಿಮೆ ಪರಿಹಾರ ನೀಡಲಾಗಿದೆ ಎಂಬುವುದನ್ನು ಗುರುತಿಸಿದ್ದಾರೆ. "ಹಾವು ಕಚ್ಚಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಬಿಹಾರ ಸರ್ಕಾರವು 4 ಲಕ್ಷ ಪರಿಹಾರವನ್ನು ನೀಡಿದೆ. ಆದರೆ ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವನ್ನಪ್ಪಿದ ಬಿಹಾರಿ ಕಾರ್ಮಿಕನ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೀಡಿದ್ದಾರೆ. ಸರ್ಕಾರದ ವೈಫ್ಯಲ್ಯದಿಂದಾಗಿ ಭಯೋತ್ಪಾದಕರು ಈ ಹತ್ಯೆಯನ್ನು ಮಾಡಿದ್ದಾರೆ. ಅನ್ಯಾಯದೊಂದಿಗೆ ವಿನಾಶ ಎಂಬುದು ನಿತೀಶ್-ಬಿಜೆಪಿ ಸರ್ಕಾರದ ಮೂಲ ಮಂತ್ರವಾಗಿದೆ" ಎಂದು ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ವಲಸೆಯ ಮೇಲೆ ನಿಯಂತ್ರಣಕ್ಕೆ ಕರೆ ನೀಡಿದ್ದಾರೆ. ಆದರೆ ಈ ಸಂದರ್ಭದಲ್ಲೇ ಬಿಹಾರದಿಂದ ಕಾರ್ಮಿಕರು ವಲಸೆ ಹೋಗುವುದನ್ನು ನಾವು ನಿಲ್ಲಿಸಲು ಸಾಧ್ಯವೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. "ನಾನು ಏನೇ ಮಾಡಿದರೂ, ಇಲ್ಲಿ ಸಾಕಷ್ಟು ಕೆಲಸದ ಅವಕಾಶಗಳನ್ನು ಸೃಷ್ಟಿಸಿದರೂ, ಜನರು ಬೇರೆ ಕಡೆಗಳಲ್ಲಿ ಕೆಲಸ ಅರಸಿ ಹೋಗುವುದನ್ನು ನಾನು ಹೇಗೆ ನಿಷೇಧಿಸಲು ಸಾಧ್ಯ?" ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೆ ರಾಜ್ಯದ ಜನರನ್ನು ಉಗ್ರರು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರವನ್ನು ತೊರೆದು ಕಾರ್ಮಿಕರು ಮತ್ತೆ ತಮ್ಮ ಊರಿಗೆ ತೆರಳುತ್ತಿದ್ದಾರೆ. "ಕಳೆದ ರಾತ್ರಿ ನಾವು ನಿದ್ದೆ ಮಾಡುತ್ತಿದ್ದಾಗ ಪೊಲೀಸರು ಬಂದು ನಮ್ಮನ್ನು ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದರು. ನಮ್ಮ ಕುಟುಂಬದಲ್ಲಿ ನಾನು ಓರ್ವನೇ ಕೆಲಸ ಮಾಡುವ ವ್ಯಕ್ತಿ. ಬಿಹಾರದಲ್ಲಿ ಬೇರೆ ಯಾವುದೇ ಕೆಲಸವೂ ಇಲ್ಲ" ಎಂದು ಬಿಹಾರ ಮೂಲದ ಕಾರ್ಮಿಕ ರಾಹುಲ್ ನೊಂದು ನುಡಿದಿದ್ದಾರೆ.