ತ್ರಿವಳಿ ತಲಾಖ್ ಜೆಡಿಯುನಿಂದ ಅಪಸ್ವರ, ರಾಜ್ಯಸಭೆಯಲ್ಲಿ ಮಸೂದೆ ಡೌಟು
ಪಾಟ್ನಾ, ಜನವರಿ 3: ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ಶಿವಸೇನೆಯು ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸಿರುವುದು ಇನ್ನೂ ಹಸಿರಾಗಿ ಇರುವಾಗಲೇ ಬಿಹಾರದ ಜೆಡಿಯುನಿಂದ ಮತ್ತೊಂದು ಭಿನ್ನ ಧ್ವನಿ ಕೇಳಿದೆ. ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಘೋಷಿಸಲು ಬಿಜೆಪಿ ಆತುರ ಪಡುತ್ತಿದೆ ಎಂದಿದೆ.
ಈಗಾಗಲೇ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿರುದ್ಧದ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಅದು ರಾಜ್ಯ ಸಭೆಯಲ್ಲಿ ಅಂಗೀಕಾರ ಆಗಬೇಕಿದೆ. ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾದಲ್ಲಿ ಅದಕ್ಕೆ ವಿರುದ್ಧವಾಗಿ ಮತ ಚಲಾಯಿಸುವುದಾಗಿ ಜೆಡಿಯು ಹೇಳಿದೆ. ಈ ಮಸೂದೆಯು ಮುಸ್ಲಿಂ ವಿರೋಧಿಯಾಗಿದೆ. ಆದ್ದರಿಂದ ಅದರ ಪುನರ್ ವಿಮರ್ಶೆಗೆ ಸಂಸದೀಯ ಸಮಿತಿಗೆ ಕಳಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
ತ್ರಿವಳಿ ತಲಾಖ್, ಶಬರಿಮಲೆ ಒಂದೇ ಮಾದರಿ ಸಮಸ್ಯೆಗಳಲ್ಲ: ಮೋದಿ
ಕಳೆದ ಸೋಮವಾರದಂದು ಮಸೂದೆಯು ರಾಜ್ಯಸಭೆಯಲ್ಲಿ ಚರ್ಚೆಯಾದರೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ತ್ರಿವಳಿ ತಲಾಖ್ ವಿರುದ್ಧದ ಮಸೂದೆ ಅಂಗೀಕಾರಕ್ಕೆ ಇಷ್ಟು ಆತುರ ಮಾಡುವ ಅಗತ್ಯವಿಲ್ಲ. ಇನ್ನಷ್ಟು ಚರ್ಚೆಯ ಅಗತ್ಯವಿದೆ ಎಂದು ಜೆಡಿಯು ನಾಯಕ ವಶಿಷ್ಟ ನಾರಾಯಣ್ ಸಿಂಗ್ ಹೇಳಿದ್ದಾರೆ.
ಇನ್ನು ರಾಮವಿಲಾಸ್ ಪಾಸ್ವಾನ್ ರ ಲೋಕ ಜನಶಕ್ತಿ ಪಕ್ಷ ಹಾಗೂ ನಿತೀಶ್ ರ ಜೆಡಿಯುನಿಂದ ಬಿಜೆಪಿಯ ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾರ್ಯಸೂಚಿಗೆ ಬೆಂಬಲವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಸ್ಥಾನ ಹಂಚಿಕೆ ವಿಚಾರವಾಗಿ ಉತ್ತರಪ್ರದೇಶದಲ್ಲಿ ಅಪ್ನಾದಳ್ ಗೆ ಅಸಮಾಧಾನವಿದೆ.
ಬಿಹಾರದಲ್ಲಿ ಶೇಕಡಾ ಹದಿನಾರರಷ್ಟು ಮುಸ್ಲಿಮರ ಮತಗಳಿವೆ. ಪಾರಂಪರಿಕವಾಗಿ ಅವರು ಲಾಲೂ ಪ್ರಸಾದ್ ರ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಗೆ ಮತ ಹಾಕುತ್ತಾ ಬಂದಿದ್ದಾರೆ. ಸದ್ಯಕ್ಕೆ ನಿತೀಶ್ ನಿರ್ಧಾರದ ಬಗ್ಗೆ ಬಿಜೆಪಿ ಏನನ್ನೂ ಹೇಳಿಲ್ಲ. ಆದರೆ ನಾಯಕರು ಖಾಸಗಿಯಾಗಿ ಮಾತನಾಡುವಾಗ, ಪ್ರತಿಯೊಬ್ಬರಿಗೂ ಅವರದೇ ಒತ್ತಡ ಇರುತ್ತದೆ ಮತ್ತು ತಮಗೇ ಬೇಕಾದಂತೆ ಮತ ಚಲಾಯಿಸಬಹುದು ಎಂದಿದ್ದಾರೆ.