ನಟ ಸುಶಾಂತ್ ಸಿಂಗ್ ಸಾವಿನ ಕೇಸ್: ನ್ಯಾಯ ಕೇಳಿದ ನಾಯಕರು ಮೌನಕ್ಕೆ ಶರಣು
ಪಾಟ್ನಾ, ಅಕ್ಟೋಬರ್.21: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತೆರೆಮರೆಗೆ ಸರಿದಂತೆ ಕಾಣುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧದ ಹೋರಾಟ, ಪ್ರತಿಭಟನೆ, ಧಿಕ್ಕಾರ ಘೋಷಣೆಗಳೆಲ್ಲ ಇದೀಗ ಮಾಯವಾಗಿ ಬಿಟ್ಟಿವೆ. ಬಿಹಾರದಲ್ಲಿ ಈಗೇನಿದ್ರೂ ವಿಧಾನಸಭಾ ಚುನಾವಣೆಯದ್ದೇ ಸದ್ದು.
ಬಿಹಾರದಲ್ಲಿ ಕಳೆದ ಐದು ತಿಂಗಳಿನಿಂದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ನಾಯಕರು ಮಾತನಾಡುತ್ತಿದ್ದರು. ಪ್ರತಿಯೊಂದು ಹೋರಾಟ ಮತ್ತು ನಾಯಕರ ಹೇಳಿಕೆಯ ಹಿಂದೆ ರಾಜಕೀಯ ಉದ್ದೇಶ ಅಡಗಿತ್ತು. ಜೂನ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಲು ಬಿಹಾರದಲ್ಲಿ ಹಲವಾರು ಪಕ್ಷಗಳು ಪ್ರೇರೇಪಿಸಿದವು. ಮಹಾರಾಷ್ಟ್ರದ ಬಿಜೆಪಿ ಮತ್ತು ಮಹಾ ವಿಕಾಸ್ ಅಘಾಡಿ ಸರ್ಕಾರವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿತ್ತು. ಪಾಟ್ನಾ ಮತ್ತು ಮುಂಬೈ ಪೊಲೀಸ್ ಇಲಾಖೆಗಳ ನಡುವೆ ಇದೇ ವಿಚಾರಕ್ಕೆ ಗಲಾಟೆಯೂ ಆಗಿತ್ತು.
ಸುಶಾಂತ್ ಸಿಂಗ್ ಪ್ರಕರಣ: ತನಿಖೆ ಮುಕ್ತಾಯಕ್ಕೆ ಸಿಬಿಐ ತೀರ್ಮಾನ
ಬಿಹಾರದಲ್ಲಿ ಇಂದಿನ ಚಿತ್ರಣ ಸಂಪೂರ್ಣ ಬದಲಾಗಿದೆ. ರಾಜ್ಯದಲ್ಲಿ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನಾಯಕರೆಲ್ಲ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಗ್ಗೆ ಇಂದು ರಾಜಕೀಯ ನಾಯಕರು ತುಟಿ ಬಿಚ್ಚುತ್ತಿಲ್ಲ.
ಇಂದು ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತು
ಬಿಹಾರದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕರ ಹೋರಾಟವಷ್ಟೇ ಅಲ್ಲ ಜನಾಭಿಪ್ರಾಯವೂ ಬದಲಾದಂತೆ ಕಾಣುತ್ತಿಲ್ಲ. ಅಂದು ಹೋರಾಟ ಮತ್ತು ಪ್ರತಿಭಟನೆ ನಡೆಸಿದ ಜನರೇ ಇಂದು ಸಾಕಾಗಿ ಹೋಗಿದ್ದಾರೆ. "ಅವನು ಗಾಂಜಾ ಸೇವನೆ ಮಾಡುತ್ತಿದ್ದು, ಅದರಿಂದ ಸಾವನ್ನಪ್ಪಿದ್ದಾನೆ" ಎಂದು ಪಾಟ್ನಾ ಹೊರವಲಯದ ನಿವಾಸಿ ಸುಧಾಕರ್ ಸಿಂಗ್ ಎಂಬುವವರು "ದಿ ಪ್ರಿಂಟ್"ಗೆ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸ್ವಗ್ರಾಮ ಮೊಕಾಮ್ ನಲ್ಲೇ ಜನರು ಬಾಲಿವುಡ್ ನಟನ ಸಾವಿನ ಬಗ್ಗೆ ಮರೆತಿದ್ದಾರೆ. ರಜಪೂತ್ ಸಮುದಾಯದ ಜನರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಪ್ರಶ್ನಿಸಿದ್ದಕ್ಕೆ, "ಅವರು ಮುಂಬೈನಲ್ಲಿದ್ದ ನಟರಷ್ಟೇ, ಇಲ್ಲಿ ನಮಗೆ ನಮ್ಮದೇ ಆಗಿರುವ ಸಾಕಷ್ಟು ಸಮಸ್ಯೆಗಳಿವೆ" ಎಂದು ಬಸಂತ್ ಸಿಂಗ್ ಎನ್ನುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಿಂಗ್ ಸಾವು ಚುನಾವಣೆ ವಿಷಯ ಅಲ್ಲ
ಬಾಲಿವುಡ್ ಸ್ಟಾರ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವೂ ಚುನಾವಣೆ ವಿಷಯವೂ ಆಗಿಲ್ಲ. ಛತ್ತರ್ಪುರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನೀರಜ್ ಕುಮಾರ್ ಬಬ್ಲು ಸುಶಾಂತ್ ಸಿಂಗ್ ರಜಪೂತ್ ಸಹೋದರ ಸಂಬಂಧಿ ಎಂದು ಬಿಜೆಪಿ ಮೂಲಗಳಿಂದಲೇ ತಿಳಿದು ಬಂದಿದೆ. ಸ್ವತಃ ಬಿಜೆಪಿ ಅಭ್ಯರ್ಥಿ ಹಾಗೂ ಸುಶಾಂತ್ ಸೋದರ ಸಂಬಂಧಿಯೇ ಅವರ ಸಾವಿನ ವಿಚಾರದ ಬಗ್ಗೆ ಚಕಾರ ಎತ್ತುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಕರಣದ ಬಗ್ಗೆ ಮಾತನಾಡದಂತೆ ಸ್ವತಃ ಬಿಜೆಪಿ ಅಭ್ಯರ್ಥಿಯೇ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
Fact Check: ರಿಯಾ ಚಕ್ರವರ್ತಿ ಪರ ಟ್ವಿಟರ್ ಪೋಸ್ಟ್ ಗಳ ಹಿಂದಿನ ರಹಸ್ಯ
ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹಾಡು ಬಿಡುಗಡೆ
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಹಲವು ಪ್ರಶ್ನೆ ಮತ್ತು ಅನುಮಾನಗಳು ಹುಟ್ಟಿಕೊಂಡಿದ್ದರೂ ಸ್ವತಃ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದೇ ಒಂದು ಮಾತು ಆಡಿರಲಿಲ್ಲ. ನಟನ ಸಂಬಂಧಿಕರು ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಒತ್ತಾಯದ ಮೇಲೆ ಪ್ರಕರಣವನ್ನು ಸಿಬಿಐಗೆ ವಹಿಸಿದರು. ಡಿಜಿಪಿ ಹುದ್ದೆಗೆ ಸ್ವಯಂನಿವೃತ್ತಿ ಘೋಷಿಸಿದ ಗುಪ್ತೇಶ್ವರ ಪಾಂಡೆ ಅವರು, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಸಿಗಬೇಕು ಎನ್ನುವ ಅರ್ಥದಲ್ಲಿ ರಚಿಸಿದ್ದ ಹಾಡನ್ನು ಬಿಡುಗಡೆಗೊಳಿಸಿದ್ದರು. ಬಕ್ಸಾರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಹೊತ್ತಿದ್ದ ಗುಪ್ತೇಶ್ವರ ಪಾಂಡೆ, ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಸೀಟು ಹಂಚಿಕೆ ಸಂದರ್ಭದಲ್ಲಿ ಬಕ್ಸಾರ್ ಕ್ಷೇತ್ರವು ಬಿಜೆಪಿಗೆ ಹೋದ ಹಿನ್ನೆಲೆ ಈ ಬಾರಿ ಬಕ್ಸಾರ್ ಕ್ಷೇತ್ರದಿಂದ ಸ್ಪರ್ಧಿಸುವ ಗುಪ್ತೇಶ್ವರ ಪಾಂಡೆಯವರ ಕನಸು ನುಚ್ಚು ನೂರಾಗಿತ್ತು.
ಸಾವಿನ ವಿಚಾರ ರಾಜಕೀಯದ ವಿಷಯವಲ್ಲ
"ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವು ನಮಗೆ ಎಂದಿಗೂ ರಾಜಕೀಯದ ವಿಷಯವಾಗಿರದು. ಬದಲಿಗೆ ಅದೊಂದು ಭಾವನಾತ್ಮಕ ಅಂಶವಾಗಿದೆ. ಏಕೆಂದರೆ ಅವರು ಬಿಹಾರಿ ಆಗಿದ್ದಾರೆ. ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸುವ ಉದ್ದೇಶದಿಂದ ಸಿಬಿಐ ತನಿಖೆ ನಡೆಸಬೇಕು ಎಂಬುದಷ್ಟೇ ನಮ್ಮ ಬೇಡಿಕೆಯಾಗಿತ್ತು" ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಜಯ್ ಮಯೂಕ್ "ದಿ ಪ್ರಿಂಟ್"ಗೆ ಹೇಳಿದ್ದಾರೆ.
ಅಂದು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದವರೂ ಇಂದು ಮೌನ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಪತ್ರ ಬರೆದಿದ್ದರು. ಸುದ್ದಿಗೋಷ್ಠಿ ನಡೆಸಿ, ನ್ಯಾಯಯುತ ತನಿಖೆಗೆ ಒತ್ತಾಯಿಸಿದ್ದರು. ಆದರೆ ಇಂದು ಸ್ವತಃ ತೇಜಸ್ವಿ ಯಾದವ್ ಅವರು ಪ್ರಕರಣದ ಬಗ್ಗೆ ಚಕಾರ ಎತ್ತುತ್ತಿಲ್ಲ. ಬದಲಿಗೆ ಆರ್ ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಕೂಡಾ ಬಿಜೆಪಿಯವರಂತೆ ರಾಗ ಹಾಡುತ್ತಿದ್ದಾರೆ. "ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವು ನಮಗೆ ರಾಜಕೀಯ ವಿಷಯವಲ್ಲ. ಬಾಲಿವುಡ್ ಅಂಗಳದಲ್ಲಿ ಮಿಂಚಿದ ಬಿಹಾರದ ಪುತ್ರ ಅವರು. ಅಂಥವರ ಸಾವಿನ ಮತ್ತು ಕುಟಂಬಕ್ಕೆ ನ್ಯಾಯ ಕೊಡಿಸುವುದು ನಮ್ಮ ಉದ್ದೇಶ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ತೇಜಸ್ವಿ ಯಾದವ್ ಮೊದಲು ಬೇಡಿಕೆಯಿಟ್ಟಿದ್ದರು" ಎಂದು ಆರ್ ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ "ದಿ ಪ್ರಿಂಟ್"ಗೆ ಹೇಳಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಾವು, ಏಮ್ಸ್ ವರದಿ
ಕಳೆದ ಜೂನ್.14ರಂದು ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್ ಮೆಂಟ್ವೊಂದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂದು ಘೋಷಿಸಿದ್ದರು. ಮುಂಬೈ ಪೊಲೀಸರ ತನಿಖೆ ಪ್ರಗತಿಯಲ್ಲಿರುವಾಗಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಮಾದಕವಸ್ತು ನಿಯಂತ್ರಣ ಸಂಸ್ಥೆಗಳು ಕೂಡ ಅಕ್ರಮ ಹಣ ವರ್ಗಾವಣೆ ಹಾಗೂ ಮಾದಕವಸ್ತು ಸಾಗಣೆಯ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದವು. ಇದರ ನಡುವೆ ನವದೆಹಲಿಯ ಏಮ್ಸ್ ಪ್ರಯೋಗಾಲಯವು ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆ ಎಂದು ವರದಿ ನೀಡಿತ್ತು.