ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್, ತೇಜಸ್ವಿ ಯಾದವ್
ಪಟ್ನಾ, ಆಗಸ್ಟ್ 10: ಮಂಗಳವಾರ ಬಿಜೆಪಿಯನ್ನು ತೊರೆದು ರಾಷ್ಟ್ರೀಯ ಜನತಾದಳ ಮತ್ತು ಇತರ ವಿರೋಧ ಪಕ್ಷಗಳನ್ನು ಒಳಗೊಂಡಿರುವ ಹೊಸ ಮಹಾಘಟಬಂಧನ್ ಘೋಷಿಸಿದ ನಂತರ ನಿತೀಶ್ ಕುಮಾರ್ ಬುಧವಾರ ಮಧ್ಯಾಹ್ನ 2 ಗಂಟೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೂಲಗಳ ಪ್ರಕಾರ, ಬಿಹಾರದಲ್ಲಿ ಹೊಸ ಸರ್ಕಾರದಲ್ಲಿ ಕಾಂಗ್ರೆಸ್ ನಾಲ್ಕು ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ನಾಲ್ಕು ಸಚಿವ ಸ್ಥಾನಗಳ ಜೊತೆಗೆ, ಕಾಂಗ್ರೆಸ್ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಸಹ ಕೋರಿದೆ ಎಂದು ಹೇಳಲಾಗಿದೆ.
"ಏಳು ಪಕ್ಷಗಳ ಮಹಾಘಟಬಂಧನ್ (ಮಹಾಮೈತ್ರಿಕೂಟ) ನಿಕಟವಾಗಿ ಕೆಲಸ ಮಾಡುತ್ತದೆ" ಎಂದು ನಿತೀಶ್ ಕುಮಾರ್ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾದ ನಂತರ ಹೇಳಿದರು. ಅವರು ತಮ್ಮ ಪಕ್ಷವಾದ ಜನತಾ ದಳ ಸಂಯುಕ್ತ ಮತ್ತು ಬಿಜೆಪಿಯನ್ನು ಒಳಗೊಂಡಿರುವ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಒಂದು ಗಂಟೆಯ ನಂತರ, ನಿತೀಶ್ ಕುಮಾರ್ ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರೊಂದಿಗೆ ರಾಜ್ಯಪಾಲರ ಬಳಿಗೆ ವಾಪಸ್ ಹೋದರು, ಅವರ ಒಟ್ಟು ಬಲದ ಆಧಾರದ ಮೇಲೆ ಮುಂದಿನ ಸರ್ಕಾರವನ್ನು ರಚಿಸಲು ಆಹ್ವಾನಿಸಬೇಕು ಎಂದು ಕೇಳಿಕೊಂಡರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರತಿಕ್ರಿಯೆ
"ನಾನು ರಾಜೀನಾಮೆ ನೀಡಿದ್ದೇನೆ, ನನ್ನ ಎಲ್ಲಾ ಶಾಸಕರಿಗೆ ತಿಳಿಸಿದ್ದೇನೆ" ಎಂದು ನಿತೀಶ್ ಕುಮಾರ್ ರಾಜ್ಯಪಾಲರೊಂದಿಗಿನ ಭೇಟಿಯ ನಂತರ ಹೇಳಿದರು. ಒಂಬತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ದೂರಾಗಿದ್ದಾರೆ. ಶಾಸಕರ ಅಭಿಪ್ರಾಯದಂತೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.
ಇನ್ನು ಬಿಹಾರ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕೂಡ ಪ್ರತಿಕ್ರಿಯೆ ನೀಡಿದ್ದು, "ನಾನು ಬಿಹಾರದ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಇದು ಜನತಾ ದಳ ಒಂದೇ ಪರಿವಾರವಾಗಿದ್ದ ದಿನಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಆರಂಭದ ದಿನಗಳಲ್ಲಿ ಜನತಾ ಪರಿವಾರ ದೇಶಕ್ಕೆ ಮೂವರು ಪ್ರಧಾನಿಗಳನ್ನು ನೀಡಿದೆ. ಕಿರಿಯರು ನಿರ್ಧರಿಸಿದರೆ ದೇಶದ ರಾಜಕೀಯದಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿ ಬೆಳೆಯಬಹುದು" ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮಹಾಘಟಬಂಧನ್ ಬೆಂಬಲಿಸಿ ಬಿಹಾರದಲ್ಲಿ ಸರ್ಕಾರ ರಚಿನೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮೈತ್ರಿ ಮುರಿದುಕೊಂಡ ಬಗ್ಗೆ ಬಿಜೆಪಿ ಸಂಸದ ಸುಶೀಲ್ ಮೋದಿ ಪ್ರತಿಕ್ರಿಯೆ ನೀಡಿ, "ಬಿಜೆಪಿ ಜೊತೆಯಲ್ಲಿದ್ದಾಗ ನಿತೀಶ್ ಕುಮಾರ್ ಅವರಿಗೆ ಆರ್ಜೆಡಿ ಸಿಗುವ ಗೌರವ ನೀಡಲಿಲ್ಲ. ನಮಗೆ ಹೆಚ್ಚು ಸ್ಥಾನಗಳಿದ್ದರೂ ನಾವು ನಿತೀಶ್ ಕುಮಾರ್ ಅವರನ್ನು ಸಿಎಂ ಮಾಡಿದ್ದೆವು. ಅವರ ಪಕ್ಷವನ್ನು ಒಡೆಯಲು ನಾವು ಪ್ರಯತ್ನ ಮಾಡಿಲ್ಲ. ನಮಗೆ ದ್ರೋಹ ಮಾಡಿದವರನ್ನು ಮಾತ್ರ ಸುಮ್ಮನೆ ಬಿಡಲ್ಲ. ಮಹಾರಾಷ್ಟ್ರದಲ್ಲಿ, ಶಿವಸೇನೆ ನಮಗೆ ದ್ರೋಹ ಮಾಡಿತ್ತು ಮತ್ತು ಅದರ ಪರಿಣಾಮಗಳನ್ನು ಎದುರಿಸಿತು." ಎಂದು ಹೇಳಿದ್ದಾರೆ.