ಎಲ್ ಜೆಪಿ ಅಧಿಕಾರಕ್ಕೆ ಬಂದರೆ ನಿತೀಶ್ ಗೆ ಜೈಲು: ಚಿರಾಗ್ ಪಾಸ್ವಾನ್ ಸ್ಪಷ್ಟನೆ
ಪಾಟ್ನಾ, ಅಕ್ಟೋಬರ್.26: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲೋಕಜನಶಕ್ತಿ ಪಕ್ಷವು ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ತಮ್ಮ ಹೇಳಿಕೆಗೆ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸ್ಪಷ್ಟನೆ ನೀಡಿದ್ದಾರೆ.
"ನನ್ನ ಮಾತಿನ ಅರ್ಥ, ಒಂದು ವೇಳೆ ಅವರು ತಪ್ಪಿತಸ್ಥರೇ ಆಗಿದ್ದಲ್ಲಿ ಅಪರಾಧ ದೃಢಪಟ್ಟ ಮೇಲೆ ಜೈಲಿಗೆ ಹೋಗುವುದು ಪಕ್ಕಾ ಎಂದು ಹೇಳಿದ್ದೇನೆ. ಒಬ್ಬ ಮುಖ್ಯಮಂತ್ರಿ ಆಗಿ ರಾಜ್ಯದಲ್ಲಿ ನಡೆದ ಬೃಹತ್ ಹಗರಣಗಳ ಬಗ್ಗೆ ಹೇಗೆ ತಾನೇ ಮಾಹಿತಿ ಇಲ್ಲದೇ ಇರುವುದಕ್ಕೆ ಸಾಧ್ಯ ಎಂದು ಚಿರಾಗ್ ಪಾಸ್ವಾನ್ ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ನಿರುದ್ಯೋಗ ನೀಗಿಸುವ ಪಕ್ಷಗಳಿಗೆ ಶಾಕಿಂಗ್ ನ್ಯೂಸ್!
ಬಹುಶಃ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡಾ ಅಪರಾಧದಲ್ಲಿ ಶಾಮೀಲಾಗಿದ್ದಾರೆ. ಒಂದು ವೇಳೆ ಅದು ಸುಳ್ಳಾಗಿದ್ದರೆ ತನಿಖೆಯಿಂದ ಗೊತ್ತಾಗುತ್ತದೆ. ಆದರೆ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ನಾನು ಮತ್ತು ಪ್ರಜೆಗಳು ನಂಬಿದ್ದಾರೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಮದ್ಯ ನಿಷೇಧ ಕಾನೂನು ಜಾರಿಗೊಳಿಸುವಲ್ಲಿ ವೈಫಲ್ಯ
ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿಗೊಳಿಸುವಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಚಿರಾಗ್ ಪಾಸ್ವಾನ್ ದೂರಿದ್ದಾರೆ. ರಾಜ್ಯದಲ್ಲಿ ಜಾರಿಗೊಳಿಸಿದ ಕಾನೂನು ಪರಿಶೀಲನೆ ಬಗ್ಗೆ ಸಿಎಂ ಏಕೆ ಲಕ್ಷ್ಯ ವಹಿಸಲಿಲ್ಲ. ಅಕ್ರಮ ಮದ್ಯ ಸಾಗಾಣಿಕೆ ಇಂದಿಗೂ ಚಾಲ್ತಿಯಲ್ಲಿದ್ದು, ಈ ಬಗ್ಗೆ ತನಿಖೆ ನಡೆಸುವ ಮನಸು ಮಾಡಲಿಲ್ಲವೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ಕುಮ್ಮಕ್ಕು
ಬಿಹಾರದಲ್ಲಿ ಅಕ್ರಮ ಮದ್ಯ ಉತ್ಪಾದನೆ, ಮಾರಾಟ ಮತ್ತು ಸಾಗಾಣಿಕೆಯು ಇಂದಿಗೂ ಯತೇಚ್ಛೆವಾಗಿ ನಡೆಯುತ್ತಿದೆ. ರಾಜ್ಯದ ಪ್ರತಿಯೊಬ್ಬ ಶಾಸಕ, ಸಚಿವರು ಮತ್ತು ಅಧಿಕಾರಿಗಳಿಗೂ ಈ ಬಗ್ಗೆ ತಿಳಿದಿದೆ. ಎಲ್ಲ ಸಚಿವರೂ ಈ ಬಗ್ಗೆ ತಿಳಿದುಕೊಂಡಿದ್ದರೂ ಮೌನ ವಹಿಸಿರುವುದು ಏಕೆ. ನಿಮಗೆ ಕಾನೂನಿನ ಮರುಪರಿಶೀಲನೆ ಮಾಡಬೇಕು ಎಂದು ಅನ್ನಿಸಲಿಲ್ಲವೇ. ನೀವೇಕೆ ತನಿಖೆ ನಡೆಸಿ ಸತ್ಯಶೋಧನೆಗೆ ಮುಂದಾಗಲಿಲ್ಲ. ಅಂದರೆ ನೀವೂ ಕೂಡಾ ಅಕ್ರಮದಲ್ಲಿ ಶಾಮೀಲಾಗಿದ್ದೀರಾ ಎಂದು ಚಿರಾಗ್ ಪಾಸ್ವಾನ್ ಸಿಎಂ ನಿತೀಶ್ ಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ.
ಎಲ್ ಜೆಪಿ ಅಧಿಕಾರಕ್ಕೆ ಬಂದರೆ ವಸ್ತುನಿಷ್ಠ ತನಿಖೆ
ಅಕ್ರಮವಾಗಿ ಬಂದ ಹಣವು ಎಲ್ಲಿಗೆ ಹೋಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಸಿಎಂ ನಿತೀಶ್ ಕುಮಾರ್ ಕೂಡಾ ಸಾಕಷ್ಟು ತಪ್ಪುಗಳನ್ನು ಮಾಡಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಬೇಕಿದೆ. ಲೋಕ ಜನಶಕ್ತಿ ಪಕ್ಷವು ಅಧಿಕಾರಕ್ಕೆ ಬಂದರೆ ವಸ್ತುನಿಷ್ಠ ತನಿಖೆ ಕೈಗೊಳ್ಳುವುದಾಗಿ ಚಿರಾಗ್ ಪಾಸ್ವಾನ್ ಭರವಸೆ ನೀಡಿದ್ದಾರೆ.
ಚಿರಾಗ್ ಪಾಸ್ವಾನ್ ಭಾನುವಾರ ನೀಡಿದ್ದ ಹೇಳಿಕೆ ಏನು?
"ಬಿಹಾರದಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕಂಬಿ ಹಿಂದೆ ನಿಲ್ಲಿಸಾಗುವುದು ಎಂದು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದರು. ಬಕ್ಸಾರ್ ವಿಧಾನಸಭಾ ಕ್ಷೇತ್ರದ ದಮ್ರೋನ್ ಪ್ರದೇಶದಲ್ಲಿ ಚುನಾವಣಾ ರ್ಯಾಲಿ ನಡೆಸಿದ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಲೆ ಜೆಡಿ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಸಿಎಂ ನಿತೀಶ್ ಕುಮಾರ್ ಹಾಗೂ ಅವರ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು. ಮದ್ಯ ಮಾರಾಟ ನಿಷೇಧ ಕಾನೂನು ವಿಫಲವಾಗಿದೆ. ಅಕ್ರಮ ಮದ್ಯ ಮಾರಾಟವು ಯತೇಚ್ಛವಾಗಿ ನಡೆಯುತ್ತಿದ್ದು, ಸಿಎಂ ನಿತೀಶ್ ಕುಮಾರ್ ಅವರು ಲಂಚ ಪಡೆದು ಸುಮ್ಮನಾಗಿದ್ದಾರೆ ಎಂದು ಆರೋಪಿಸಿದ್ದರು.