ತೇಜಸ್ವಿ ಯಾದವ್ರನ್ನೇ ಬಿಹಾರ ಸಿಎಂ ಮಾಡುತ್ತಾರಾ ನಿತೀಶ್ ಕುಮಾರ್?
ಪಾಟ್ನಾ, ನವೆಂಬರ್.11: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ ಹೊರ ಬರಬೇಕು. ರಾಷ್ಟ್ರೀಯ ಜನತಾ ದಳ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ತೇಜಸ್ವಿ ಯಾದವ್ ರನ್ನು ಮುಖ್ಯಮಂತ್ರಿ ಸ್ಥಾನಕ್ಕೇರುವುದಕ್ಕೆ ಸಹಕರಿಸಬೇಕು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆಹ್ವಾನಿಸಿದ್ದಾರೆ.
ರಾಜ್ಯದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ ಡಿಎ 125 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದಿದ್ದು, 37ನೇ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಆಯ್ಕೆ ನಡುವೆಯೂ ದಿಗ್ವಿಜಯ್ ಸಿಂಗ್ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
ಬಿಹಾರದಲ್ಲಿ 7ನೇ ಬಾರಿ ಸಿಎಂ ಆಗಿರುವ ನಿತೀಶ್ ಕುಮಾರ್ ರಾಜಕೀಯ ಇತಿಹಾಸ
ಭಾರತೀಯ ಜನತಾ ಪಕ್ಷವು ಒಂದು ರೀತಿಯ ಬಳ್ಳಿ ಇದ್ದಂತೆ. ಈ ಬಳ್ಳಿಯು ಬೆಳೆಯುವುದಕ್ಕೆ ಮತ್ತೊಂದು ಮರದ ಆಸರೆಯನ್ನು ಪಡೆದುಕೊಳ್ಳುತ್ತದೆ. ಮರ ಒಣಗಿದ ಸಂದರ್ಭದಲ್ಲಿ ಬಳ್ಳಿಯು ಅಭಿವೃದ್ಧಿ ಹೊಂದುತ್ತಾ ಹೋಗುತ್ತದೆ ಎಂದು ಬಿಜೆಪಿ ಕುರಿತು ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ.
"ಬಿಜೆಪಿಯ ಬಳ್ಳಿ ಬೆಳೆಯಲು ಬಿಡಬೇಡಿ ಎಂದು ಟ್ವೀಟ್"
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ, ನೀವು ಮತ್ತು ಲಾಲೂ ಪ್ರಸಾದ್ ಯಾದವ್ ಒಗ್ಗಟ್ಟಾಗಿ ಹೋರಾಟ ಮಾಡಿದ್ದೀರಿ. ಅವರು ಇಂದು ಜೈಲಿಗೆ ಹೋಗಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ಸಿದ್ಧಾಂತವನ್ನು ನೀವು ಈಗ ಅರ್ಥ ಮಾಡಿಕೊಳ್ಳಬೇಕಿದೆ. ತೇಜಸ್ವಿ ಯಾದವ್ ರಿಗೆ ಆಶೀರ್ವದಿಸಿ, ಬಿಜೆಪಿಯ ಕೆಟ್ಟ ಬಳ್ಳಿಯು ಬಿಹಾರದಲ್ಲಿ ಬೆಳೆಯುವುದನ್ನು ತಡೆಯಿರಿ" ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರ ರಾಜಕಾರಣಕ್ಕೆ ನಿತೀಶ್ ರನ್ನು ಆಹ್ವಾನಿಸಿದ ದಿಗ್ವಿಜಯ್ ಸಿಂಗ್
ತಮ್ಮ ಎರಡನೇ ಟ್ವೀಟ್ ನಲ್ಲಿ ದಿಗ್ವಿಜಯ್ ಸಿಂಗ್ ಅವರು ನಿತೀಶ್ ಕುಮಾರ್ ರನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದ್ದಾರೆ. "ನಿತೀಶ್ ಜೀ ನಿಮ್ಮ ಮಟ್ಟಕ್ಕೆ ಬಿಹಾರ ರಾಜಕಾರಣವು ತೀರಾ ಸಣ್ಣದು ಎನಿಸುತ್ತಿದ್ದು, ನೀವು ರಾಷ್ಟ್ರ ರಾಜಕಾರಣಕ್ಕೆ ಬರಬೇಕು. ಒಡೆದು ಆಳುವ ನೀತಿಯನ್ನು ನೆಚ್ಚಿಕೊಂಡಿರುವ ಜಾತ್ಯಾತೀತ ಸಮಾನ ಮನಸ್ಕರ ಜೊತೆಗೆ ನೀವು ಬಂದು ಸೇರಿಕೊಳ್ಳಬೇಕಿದೆ" ಎಂದು ಬರೆದುಕೊಂಡಿದ್ದಾರೆ.
ನಿಮಗ್ಯಾಕೆ ನಿತೀಶ್ ಕುಮಾರ್ ವಿಷಯ ಸ್ವಾಮಿ ಎಂದ ಬಿಜೆಪಿ
ಬಿಹಾರವನ್ನು ತೊರೆದು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಬೇಕು ಎಂಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆಹ್ವಾನಕ್ಕೆ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ. "ನಿತೀಶ್ ಕುಮಾರ್ ಅವರು ಎನ್ ಡಿಎ ಮುಖಂಡರಾಗಿದ್ದು, ಸೋಲು-ಗೆಲುವಿನಿಂದ ಅವರ ಘನತೆಯಲ್ಲಿ ವ್ಯತ್ಯಾಸ ಆಗುವುದಿಲ್ಲ. ನಿತೀಶ್ ಕುಮಾರ್ ವಿರುದ್ಧ ಆರೋಪಗಳನ್ನು ಮಾಡಿದ ತೇಜಸ್ವಿ ಯಾದವ್ ಅವರಿಗೆ ಎಲ್ಲಿ ಗೆಲುವು ಸಿಕ್ಕಿದೆ. ಈಗ ಬಿಹಾರದ ಜನರು ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ದಿಗ್ವಿಜಯ್ ಸಿಂಗ್ ಅವರೇ ನೀವು ನಿಮ್ಮ ರಾಜ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿರಿ" ಎಂದು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಎನ್ ಡಿಎ ಮೈತ್ರಿಕೂಟಕ್ಕೆ ಗೆಲುವಿನ ಮುದ್ರೆ ಒತ್ತಿದ ಮತದಾರ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ಪೈಕಿ ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.
ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.