"ಹೆಣ್ಣು ಆಗುವ ಭೀತಿಯಲ್ಲಿ 2ನೇ ಮಗುವನ್ನು ಹೊಂದಲಿಲ್ಲವೇ ಸಿಎಂ"
ಪಾಟ್ನಾ, ನವೆಂಬರ್.27: ಬಿಹಾರ ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ನಡುವಿನ ಮಾತಿನ ಸಮರ ಮುಂದುವರಿದಿದೆ. ಚುನಾವಣೆ ಸಂದರ್ಭದಲ್ಲಿ ಉಭಯ ಪಕ್ಷದ ನಾಯಕರು ಆಡಿದ ಮಾತುಗಳು ಅಧಿವೇಶನದಲ್ಲಿ ಪ್ರತಿಧ್ವನಿಸಿತು.
ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅಸಂಬದ್ಧವಾಗಿ ಮಾತನಾಡುತ್ತಿದ್ದು, ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ನಿತೀಶ್ ಕುಮಾರ್ ದೂಷಿಸಿದರು. ನನ್ನ ಸಹೋದರನಂತೆ ಇರುವ ಗೆಳೆಯನ ಪುತ್ರ ಆಗಿರುವುದರಿಂದ ಅವರು ಹೇಳುವುದನ್ನು ನಾನು ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದೆನು. ಆದರೆ ನಾನು ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಶೇಕಡಾವಾರು ಪ್ರಮಾಣದ ವ್ಯತ್ಯಾಸದ ಬಗ್ಗೆ ಹಾಸ್ಯವಾಗಿ ಆ ಮಾತನ್ನು ಆಡಿದ್ದೆನು. ಅದರ ಹಿಂದೆ ಯಾರನ್ನೂ ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ನಿತೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಶಾಸಕರಿಗೆ ಫೋನ್ ಕರೆ; ಲಾಲೂ ಪ್ರಸಾದ್ ಯಾದವ್ ವಿರುದ್ಧ ಎಫ್ಐಆರ್
"ನಾನು ಹಾಸ್ಯವಾಗಿ ಹೇಳಿದ ಮಾತುಗಳನ್ನೇ ಕೆಲವರು ತಮಗೆ ಇಷ್ಟ ಬಂದಂತೆ ವ್ಯಾಖ್ಯಾನಿಸುತ್ತಿದ್ದಾರೆ. ನನ್ನ ಹೇಳಿಕೆಯ ಹಿಂದೆ ಯಾರನ್ನೂ ಹೀಯಾಳಿಸುವ ಉದ್ದೇಶ ಅಡಗಿರಲಿಲ್ಲ" ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಬಿಹಾರ ಚುನಾವಣೆ ಸಂದರ್ಭದಲ್ಲಿ ಆಡಿದ ಮಾತು:
ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ನಿತೀಶ್ ಕುಮಾರ್ ಅವರು ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬದ ಬಗ್ಗೆ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಇದಕ್ಕೆ ತೇಜಸ್ವಿ ಯಾದವ್ ಕೂಡಾ ಪ್ರತಿಕ್ರಿಯೆ ನೀಡಿದ್ದರು. "ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದುಕೊಂಡು, ಪ್ರಚಾರದ ಸಂದರ್ಭದಲ್ಲಿ ನನ್ನ ಸಹೋದರಿಯರ ಬಗ್ಗೆ ಮಾತನಾಡಿರುವುದ ತರವಲ್ಲ. ಹೆಣ್ಣು ಮಕ್ಕಳ ಬಗ್ಗೆ ನಿತೀಶ್ ಕುಮಾರ್ ಅವರು ಮಾತನಾಡುತ್ತಾರೆ. ಅವರಿಗೆ ಒಬ್ಬರೇ ಪುತ್ರನಿದ್ದು, ಹೆಣ್ಣು ಮಗು ಆಗುತ್ತದೆ ಎಂಬ ಭಯದಲ್ಲೇ ಎರಡನೇ ಮಗುವನ್ನು ಹೊಂದುವುದಕ್ಕೆ ಬಯಸಲಿಲ್ಲ ಎಂದು ನಾನು ಹೇಳಬಹುದಿತ್ತು. ಆದರೆ ಚುನಾವಣೆ ಪ್ರಚಾರದ ವೇಳೆಯಲ್ಲಿ ನಾನು ಈ ಕುರಿತು ಮಾತನಾಡಲಿಲ್ಲ" ಎಂದು ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.
#WATCH | I was speaking about the fertility rate and said that in humour. Did I say anything about anyone? People are taking it on themselves on their own: Bihar CM Nitish Kumar on RJD leader Tejashwi Yadav's remarks https://t.co/UkBSPdNJnL pic.twitter.com/0rMqsLub9f
— ANI (@ANI) November 27, 2020
ತೇಜಸ್ವಿ ಹೇಳಿಕೆಗೆ ನಿತೀಶ್ ಕುಮಾರ್ ಉತ್ತರ:
ನಾನು ಹೆಣ್ಣು ಮತ್ತು ಗಂಡು ಮಕ್ಕಳ ಜನನ ಸರಾಸರಿ ಬಗ್ಗೆ ಹಾಸ್ಯವಾಗಿ ಆ ಮಾತುಗಳನ್ನು ಆಡಿದ್ದೆನೇ ಹೊರತೂ ಉದ್ದೇಶಪೂರ್ವಕವಾಗಿ ಅಲ್ಲ. ಈಗ ಆ ಮಾತಿನ ಬಗ್ಗೆ ಕೆಲವರು ತಮಗಿಷ್ಟ ಬಂದಂತೆ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.