ಬಿಹಾರ ಸಿಎಂಗೆ ಆಪ್ತರಿಂದಲೇ ಅಪಾಯ: ಹೀಗೆ ಹೇಳಿದ್ದೇಕೆ ಚಿರಾಗ್ ಪಾಸ್ವಾನ್?
ಪಾಟ್ನಾ, ಆಗಸ್ಟ್, 8: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನನಗಿಂತ ತಮ್ಮ ಆಪ್ತರಿಂದಲೇ ಹೆಚ್ಚು ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮಾಜಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಸೋಮವಾರ ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಜನಪ್ರಿಯತೆಯನ್ನು ಕುಗ್ಗಿಸುತ್ತಿದ್ದಾರೆ ಎಂಬು ಆರೋಪಿಸುವುದರ ಬದಲು ಮೊದಲ ಬಾರಿಗೆ ಬಿಜೆಪಿಯನ್ನು ಎದುರಿಸುವುದಕ್ಕೆ ಧೈರ್ಯ ಮಾಡಿದ್ದಾರೆ ಎಂದರು.
ಬಿಜೆಪಿ ಜೊತೆ ಮುನಿಸು: ಮಂಗಳವಾರ ಪಕ್ಷದ ಸಭೆ ಕರೆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಸ್ವಾನ್, ಬಿಹಾರ ಸಿಎಂ ತಮ್ಮ ಆಪ್ತರಿಂದಲೇ ಹೆಚ್ಚು ಅಪಾಯವನ್ನು ಹೊಂದಿದ್ದಾರೆ ಎಂದರು. ನಿತೀಶ್ ಕುಮಾರ್ ಈಗ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್ಸಿಪಿ ಸಿಂಗ್ ಅನ್ನು ಅವಮಾನಿಸಿದ್ದಾರೆ. ಅದೇ ರೀತಿ ಈ ಹಿಂದೆ ಶರದ್ ಯಾದವ್ ಮತ್ತು ಜಾರ್ಜ್ ಫರ್ನಾಂಡೀಸ್ ಅನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ನಿಮ್ಮ ಸೋಲಿಗೆ ನಮ್ಮನ್ನು ದೂಷಿಸದಿರಿ ಎಂದ ಚಿರಾಗ್
"ಒಂದು ಪಕ್ಷವು ತನ್ನದೇ ಮಾಜಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿರುವುದನ್ನು ಹಿಂದೆಂದೂ ಕೇಳಿರಲಿಲ್ಲ. ಆದರೆ, ಅದನ್ನು ನೀವು ಮಾಡಿದ್ದೀರಿ ನಿತೀಶ್ ಕುಮಾರ್," ಎಂದು ಹೇಳಿದರು. 2020ರ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಜೆಡಿಯು ವಿರುದ್ಧ ಪಾಸ್ವಾನ್ ಕಣಕ್ಕಿಳಿಸಿದ ಅಭ್ಯರ್ಥಿಗಳಲ್ಲಿ ಅನೇಕರು ಬಿಜೆಪಿ ಬಂಡಾಯಕಾರರೇ ಆಗಿದ್ದರು.
ಚಿರಾಗ್ ಮಾಡೆಲ್ ಇದ್ದರೆ, ಅದು ಬಿಹಾರ ಮೊದಲು ಬಿಹಾರಿ ಮೊದಲು ಎಂಬ ನಮ್ಮ ಧ್ಯೇಯದ ಮೇಲೆ ನಿಂತಿರುತ್ತದೆ. ನಮ್ಮ ದೃಷ್ಟಿಕೋನವನ್ನು ಗೌರವಿಸದ ಸಿಎಂ, ತಮ್ಮ ಸೋಲಿಗೆ ನಮ್ಮನ್ನು ದೂಷಿಸುವುದನ್ನು ಮೊದಲು ನಿಲ್ಲಿಸಬೇಕು. ಜನತಾ ದಳ (ಯುನೈಟೆಡ್) ಒಂದು ಒಡೆದ ಮನೆಯಾಗಿದೆ. ಆರ್ಸಿಪಿ ಈಗ ಪಕ್ಷ ತೊರೆಯುವಂತೆ ಮಾಡಿದೆ. ಆದರೆ ನಿತೀಶ್ ಕುಮಾರ್ ಅವರು ಲಾಲನ್ ಮತ್ತು ಉಪೇಂದ್ರ ಕುಶ್ವಾಹಾ ಅಂಥವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಾಸ್ವಾನ್ ಹೇಳಿದ್ದಾರೆ.
ಒಂದೂವರೆ ದಶಕಕ್ಕೂ ಹೆಚ್ಚು ಅವಧಿಯ ತಮ್ಮ ಅಧಿಕಾರದಲ್ಲಿ ಬಿಹಾರವನ್ನು ಪರಿವರ್ತಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನೀತಿ ಆಯೋಗದ ವರದಿಗಳಲ್ಲಿ ರಾಜ್ಯದ ಕಳಪೆ ಶ್ರೇಯಾಂಕದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ಬಿಹಾರ ನರಳುವುದಕ್ಕೆ ನಿತೀಶ್ ಕುಮಾರ್ ದುರಹಂಕಾರ ಕಾರಣ
ಭಾನುವಾರ ನಡೆದ ನೀತಿ ಆಯೋಗದ ಸಭೆಗೆ ಹಾಜರಾಗುವಂತೆ ಆಹ್ವಾನ ನೀಡಲಾಗಿದ್ದರೂ, ನಮ್ಮ ಮುಖ್ಯಮಂತ್ರಿ ನಿತೀಶ್ ಕುಮಾರ್, ಆ ಸಭೆಗೆ ಹಾಜರಾಗಲು ನಿರಾಕರಿಸಿದರು. ರಾಜ್ಯದ ಬೇಡಿಕೆಗಳನ್ನು ಪ್ರಧಾನಮಂತ್ರಿಯ ಮುಂದೆ ಹೇಳಲು ಇದು ಉತ್ತಮ ಅವಕಾಶವಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಅವರ ದುರಹಂಕಾರದ ಕಾರಣದಿಂದಾಗಿ ಬಿಹಾರವು ನರಳುತ್ತಿದೆ," ಎಂದು ಚಿರಾಗ್ ಪಾಸ್ವಾನ್ ದೂಷಿಸಿದ್ದಾರೆ.
ನಮ್ಮ ಮುಖ್ಯಮಂತ್ರಿ ಎದುರಿಸಿದ ಸಮಸ್ಯೆಯಾದರೂ ಏನು?
"ನೀವು ಬಿಜೆಪಿಯನ್ನು ವಿರೋಧಿಸುವುದಕ್ಕೆ ಬಯಸಿದರೆ ಪರವಾಗಿಲ್ಲ, ಆದರೆ ಸಭೆಯಲ್ಲಿ ಭಾಗವಹಿಸಲು ನಿಮಗೇನು ಸಮಸ್ಯೆ ಎದುರಾಯಿತು ಎಂದು ಚಿರಾಗ್ ಪಾಸ್ವಾನ್ ಪ್ರಶ್ನಿಸಿದ್ದಾರೆ. ಬಿಜೆಪಿಯನ್ನು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗಿಂತ ಕಟುವಾಗಿ ಎದುರಿಸುವುದಕ್ಕೆ ಸಾಧ್ಯವೇ ಎಂದು ಕೇಳಿದ್ದಾರೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆ ಹಾನಿಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಸಿಎಂ ಕುರ್ಚಿಗಾಗಿ ಇವರು ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಕೆಂಡ ಕಾರಿದರು.
ನಿತೀಶ್ ಕುಮಾರ್ ನನ್ನ ವಿರುದ್ಧ ಆರೋಪಿಸುವುದನ್ನು ಬಿಡಲಿ
"ನಮ್ಮ ತಂದೆಯವರು ಅಳವಡಿಸಿಕೊಂಡಿದ್ದ ಮೌಲ್ಯಗಳ ಪ್ರಕಾರ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಜೆಡಿಯು ನನ್ನ ವಿರುದ್ಧ ಆರೋಪ ಮಾಡುವುದನ್ನು ಮೊದಲು ನಿಲ್ಲಿಸಬೇಕು. ನಿಮಗೆ ಬಿಜೆಪಿಯು ಪಿತೂರಿ ನಡೆಸಿದೆ ಎಂಬ ಅನುಮಾನವಿದ್ದರೆ, ಅದರ ವಿರುದ್ಧವೇ ನೇರವಾಗಿ ಮಾತನಾಡಿರಿ ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕುರಿತು ತಟಸ್ಥ ನಿಲುವು ಪ್ರದರ್ಶಿಸಿದ ಚಿರಾಗ್ ಪಾಸ್ವಾನ್, ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಕುರಿತು ಸರ್ಕಾರವನ್ನು ತರಾಟೆ ತೆಗೆದುಕೊಂಡರು.