ಬಿಹಾರದ 37ನೇ ಸಿಎಂ ನಿತೀಶ್ ಕುಮಾರ್ ಮೊದಲ ಪ್ರತಿಕ್ರಿಯೆ
ಪಾಟ್ನಾ, ನವೆಂಬರ್.16: ಬಿಹಾರದ ಮತದಾರ ಪ್ರಭುಗಳ ತೀರ್ಪಿನಂತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಸರ್ಕಾರ ರಚಿಸಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ರಾಜ್ಯದ 37ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ಬಿಹಾರದ ಅಭಿವೃದ್ಧಿ ಮತ್ತು ಜನರು ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಎನ್ ಡಿಎ ನೇತೃತ್ವದ ಸರ್ಕಾರವು ಒಂದಾಗಿ ಕಾರ್ಯನಿರ್ವಹಿಸಲಿದೆ ಎಂದು ನಿತೀಶ್ ಕುಮಾರ್ ಹೇಳಿದರು. ನಿತೀಶ್ ಕುಮಾರ್ ಜೊತೆಗೆ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
Live: ಬಿಹಾರದ 37ನೇ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ
ಬಿಜೆಪಿ ಮುಖಂಡ ತರ್ಕಿಶೋರ್ ಪ್ರಸಾದ್ ಹಾಗೂ ರೇಣು ದೇವಿ ಉಪ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದರು. ರಾಜ್ಯಪಾಲ ಫಾಗು ಚೌವ್ಹಾಣ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಡಿಸಿಎಂ ಹಾಗೂ ಸಂಪುಟ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಸುಶೀಲ್ ಮೋದಿ ಕೈತಪ್ಪಿದ ಡಿಸಿಎಂ ಸ್ಥಾನ:
ಬಿಹಾರದ ಮಾಜಿ ಡಿಸಿಎಂ ಸುಶೀಲ್ ಮೋದಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ. ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಇಬ್ಬರು ಡಿಸಿಎಂಗಳನ್ನು ಆಯ್ಕೆ ಮಾಡಲಾಗಿದೆ. ಸುಶೀಲ್ ಮೋದಿ ಬದಲಿಗೆ ಈ ಬಾರಿ ತರ್ಕಿಶೋರ್ ಪ್ರಸಾದ್ ಹಾಗೂ ರೇಣು ದೇವಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಇದು ಎನ್ ಡಿಎ ಮೈತ್ರಿಕೂಟದ ನಿರ್ಧಾರ ಎಂದು ಹೇಳುವ ಮೂಲಕ ನಿತೀಶ್ ಕುಮಾರ್ ಜಾರಿಕೊಂಡರು.
243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ ಡಿಎ 125 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದಿದ್ದು, ಬಿಹಾರದ 37ನೇ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಪದಗ್ರಹಣ ಮಾಡಲಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದು, ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.